ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಹಠಾತ್ ಬೆಳವಣಿಗೆಯೊಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ (Vijay Rupani) ರಾಜೀನಾಮೆ ನೀಡಿದ ನಂತರ, ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ ಅವರನ್ನು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.  ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ (Bhupendrabhai Rajnikanthbhai Patel ) ಅವರು ಸೋಮವಾರ (ಸೆಪ್ಟೆಂಬರ್ 13) ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ (Bhupendrabhai Rajnikanthbhai Patel) ಗುಜರಾತ್‌ನ 17 ನೇ ಮುಖ್ಯಮಂತ್ರಿಯಾಗಲಿದ್ದಾರೆ. ಭೂಪೇಂದ್ರ ಪಟೇಲ್ ಅವರನ್ನು ಅವರ ಬೆಂಬಲಿಗರು ಪ್ರೀತಿಯಿಂದ 'ದಾದಾ' ಎಂದು ಕರೆಯುತ್ತಾರೆ. ಮುಂಬರುವ ಗುಜರಾತ್ ಚುನಾವಣೆಗಳ ದೃಷ್ಟಿಯಿಂದ ಬಿಜೆಪಿ ಪಕ್ಷವು ಗುಜರಾತಿನ ಪಾಟಿದಾರ್ ಸಮುದಾಯದ ಭೂಪೇಂದ್ರ ಪಟೇಲ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ ಎಂದು ನಂಬಲಾಗಿದೆ.


ಇದನ್ನೂ ಓದಿ- UP Assembly Election 2022: ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧೆ, ಮೈತ್ರಿ ಕೂಡಾ ಸಾಧ್ಯತೆ ; ಶಿವಸೇನೆ


ವಿಜಯ್ ರೂಪಾನಿ ಅವರು ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಈ ವರ್ಷ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ರಾಜೀನಾಮೆ ನೀಡಿದ ನಾಲ್ಕನೇ ಸಿಎಂ ಆದರು. ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa), ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ (Tirath Singh Rawat) ಮತ್ತು ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ರಾಜೀನಾಮೆ ಸಲ್ಲಿಸಿದರು. 


ಶನಿವಾರ (ಸೆಪ್ಟೆಂಬರ್ 11) ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ (Vijay Rupani) ರಾಜೀನಾಮೆ ನೀಡಿದ ಬೆನ್ನಲ್ಲೇ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಚುನಾಯಿತರಾದ 59 ವರ್ಷದ ಬಿಜೆಪಿ ನಾಯಕನ ಹೆಸರನ್ನು ಘೋಷಿಸಿದ್ದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ, ಮುಖ್ಯಮಂತ್ರಿ ಹುದ್ದೆಯ ಓಟದಲ್ಲಿದ್ದ ಸ್ಪರ್ಧಿಗಳು ಈ ಅಗ್ರಸ್ಥಾನದಲ್ಲಿ ಕಾಣಲಿಲ್ಲ.


ಆದಾಗ್ಯೂ, ಸೌಮ್ಯ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಮತ್ತು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತರಾದ ಭೂಪೇಂದ್ರ ಪಟೇಲ್ ಅವರ ಆಯ್ಕೆಯು ಪಕ್ಷದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದ ಎಲ್ಲ ನಾಯಕರ ಸರ್ವಾನುಮತದ ನಿರ್ಧಾರವಾಗಿದೆ ಎಂದು ಬಿಜೆಪಿ ಹೇಳಿದೆ.


ಅಹಮದಾಬಾದ್‌ನಲ್ಲಿ ಜನಿಸಿದ ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್  (Bhupendrabhai Rajnikanthbhai Patel) , ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ, ಈ ಹಿಂದೆ ಆನಂದಿಬೆನ್ ಪಟೇಲ್ (Anandiben Patel) ಅವರು ಈ ಸ್ಥಾನವನ್ನು ಹೊಂದಿದ್ದರು, ಅವರು ಪ್ರಸ್ತುತ ಮಧ್ಯಪ್ರದೇಶದ ಹೆಚ್ಚುವರಿ ಉಸ್ತುವಾರಿಯೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಭೂಪೇಂದ್ರಭಾಯಿ ರಜನಿಕಾಂತಭಾಯಿ ಪಟೇಲ್ 2017 ರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್ ಪಟೇಲ್ ಅವರನ್ನು ಅತಿದೊಡ್ಡ 117,000 ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಘಾಟ್ಲೋಡಿಯಾ ಕ್ಷೇತ್ರದಲ್ಲಿ ಶೇಕಡಾ 72 ಕ್ಕಿಂತ ಹೆಚ್ಚು ಮತಗಳನ್ನು ಪಡೆದರು.


ಇದನ್ನೂ ಓದಿ-  ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಮೇಘಸ್ಫೋಟ: ಮಕ್ಕಳು ಸೇರಿ ನಾಲ್ವರ ಸಾವು, ಓರ್ವ ನಾಪತ್ತೆ


ಆದಾಗ್ಯೂ, ಪಟೇಲ್ ರಾಜಕೀಯದಲ್ಲಿ ಹೊಸ ಮುಖವಲ್ಲ ಮತ್ತು ಅಹಮದಾಬಾದ್ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರುವ ಪಟೇಲ್, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.


ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 2022 ರಲ್ಲಿ ನಡೆಯಲಿದ್ದು, ಬಿಜೆಪಿ ಮುಖ್ಯಮಂತ್ರಿಗಾಗಿ ಪಾಟಿದಾರ್ ಸಮುದಾಯದ ಭೂಪೇಂದ್ರ ಪಟೇಲ್ ಅವರೊಂದಿಗೆ ಚುನಾವಣೆ ಎದುರಿಸಲಿದೆ. ಅವರು ಪಾಟಿದಾರ್ ಸಂಸ್ಥೆಗಳಾದ ಸರ್ದಾರ್ ಧಾಮ್ ಮತ್ತು ವಿಶ್ವ ಉಮಿಯ ಫೌಂಡೇಶನ್‌ನ ಟ್ರಸ್ಟಿಯಾಗಿದ್ದಾರೆ.


ವಾಸ್ತವವಾಗಿ, ಪಾಟಿದಾರರು ಗುಜರಾತಿನಲ್ಲಿ ಪ್ರಬಲ ಜಾತಿಯಾಗಿದ್ದು, ಚುನಾವಣಾ ಮತಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿದ್ದಾರೆ. ಸಮುದಾಯವು ರಾಜಕೀಯ, ಆರ್ಥಿಕ, ಶಿಕ್ಷಣ, ರಿಯಾಲ್ಟಿ ಮತ್ತು ಸಹಕಾರಿ ಕ್ಷೇತ್ರಗಳ ಮೇಲೆ ಪ್ರಬಲವಾಗಿದೆ.


ಮುಖ್ಯಮಂತ್ರಿ ಹುದ್ದೆಗಾಗಿ ಪಟೇಲರ ಹೆಸರಿನ ಆಯ್ಕೆಯು ಬಿಜೆಪಿಗೆ ಮಹತ್ವದ್ದಾಗಿದೆ. ಏಕೆಂದರೆ ಅವರು ಪಾಟಿದಾರ್ ಆಗಿರುವುದಲ್ಲದೆ, ಅವರು ಕದ್ವಾ ಪಟೇಲ್ ಕೂಡ ಆಗಿದ್ದಾರೆ. ಅವರು ರಾಜ್ಯದ ಜನಸಂಖ್ಯೆಯ ಶೇಕಡಾ 12.4 ರಷ್ಟಿರುವ ಕದ್ವಾ ಪಟೇಲ್ ಸಮುದಾಯದಿಂದ ಗುಜರಾತಿನ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲಿಯವರೆಗೆ ಗುಜರಾತಿನ ಎಲ್ಲಾ "ಪಟೇಲ್" ಮುಖ್ಯಮಂತ್ರಿಗಳು ಲಿಯುವಾ ಪಟೇಲ್ ಸಮುದಾಯದಿಂದ ಬಂದವರು. ಇದೀಗ ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭೂಪೇಂದ್ರ ಪಟೇಲ್ ಕದ್ವಾ ಪಟೇಲ್ ಸಮುದಾಯಕ್ಕೆ ಸೇರಿದ್ದಾರೆ ಎಂಬುದು ಗಮನಾರ್ಹ ವಿಷಯವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.