ಬೆಂಗಳೂರು: ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರನ್ನು ಅಪಹರಣ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ ಬೆನ್ನಲ್ಲೇ ಈ ಬಗ್ಗೆ ತನಿಖೆ ನಡೆಸಿ ನಾಳೆ ಬೆಳಿಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸದನದಲ್ಲಿ ಶಾಸಕ ಶ್ರೀಮಂತ ಪಾಟೀಲ್ ಅಪಹರಣದ ಆರೋಪದ ಬಳಿಕ ಶ್ರೀಮಂತ ಪಾಟೀಲರು ಸದಸಕ್ಕೆ ಗೈರಾಗುತ್ತಿರುವ ಬಗ್ಗೆ ಮತ್ತು ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಪತ್ರ ಕಳುಹಿಸಿರುವ ಬಗ್ಗೆ ತಿಳಿಸಿದ ಸ್ಪೀಕರ್, ಇಂದು ಬೆಳಿಗ್ಗೆ ಶ್ರೀಮಂತ ಪಾಟೀಲ್ ಹೆಸರಿನಲ್ಲಿ ಪತ್ರ ಬಂದಿದೆ. ಇದರಲ್ಲಿ ದಿನಾಂಕವನ್ನೂ ಹಾಕಿಲ್ಲ. ಲೆಟರ್ ಹೆಡ್ ನಲ್ಲಿಯೂ ಬರೆದು ಕಳುಹಿಸಿಲ್ಲ. ನಾನು ಆಸ್ಪತ್ರೆಗೆ ಸೇರಿರುವುದರಿಂದ ಸದನಕ್ಕೆ ಗೈರಾಗಲಿದ್ದೇನೆ ಎಂದು ಅವರು ಬರೆದಿದ್ದಾರೆ. ಅಪಹರಣವಾಗಿದ್ದರೆ ಅದು ಕ್ರಿಮಿನಲ್ ಕೇಸ್. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಗೃಹ ಸಚಿವರು ಕೂಡಲೇ ಶ್ರೀಮಂತ ಪಾಟೀಲ್ ಅವರ ಮನೆಯವರನ್ನು ಸಂಪರ್ಕಿಸಿ ಈ ಬಗ್ಗೆ ತನಿಖೆ ನಡೆಸಿ ನಾಳೆ ಬೆಳಿಗ್ಗೆ ಪೂರ್ಣ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.


"ಸಿದ್ದರಾಮಯ್ಯನವರು ಕೊಟ್ಟಿರುವ ಪತ್ರ ಹಾಗೂ ನೀಡಿರುವ ಪುರಾವೆಗಳ ಆಧಾರದ ಮೇಲೆ ಗೃಹ ಸಚಿವರು ಗಮನ ವಹಿಸುವಂತೆ ಹೇಳುತ್ತಿದ್ದೇನೆ. ಈಗಲೇ ಶ್ರೀಮಂತ ಪಾಟೀಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಕಲೆ ಹಾಕಿ. ಇದು ನೈಸರ್ಗಿಕ ಅಲ್ಲ ಎಂದೇ ನನಗೆ ಅನಿಸುತ್ತದೆ. ಇದರ ಬಗ್ಗೆ ತನಿಖೆಯಾಗಬೇಕು" ಎಂದು ಸ್ಪೀಕರ್ ಹೇಳಿದರು. 


ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಅವರು ನಮ್ಮ ಶಾಸಕ ಶ್ರೀಮಂತ ಪಾಟೀಲರನ್ನು ಅಪಹರಣ ಮಾಡಲಾಗಿದೆ. ಇದೆಲ್ಲಾ ಬಿಜೆಪಿಯವರ ಷಡ್ಯಂತ್ರ. ಅವರನ್ನು ಬಲವಂತವಾಗಿ ಅಪಹರಿಸಿ ಆಸ್ಪತ್ರೆಯಲ್ಲಿ ಮಲಗಿರುವ ಹಾಗೆ ಫೋಟೋ ತೆಗೆಸಿ ರಿಲೀಸ್ ಮಾಡಲಾಗಿದೆ. ಇವೆಲ್ಲದಕ್ಕೂ ನಮ್ಮ ಬಳಿ ಪುರಾವೆ ಇದೆ. ನಮ್ಮ ಶಾಸಕರಿಗೆ ಭದ್ರತೆಯ ಅಗತ್ಯವಿದೆ ಎಂದು ಸ್ಪೀಕರ್ ಬಳಿ ಮನವಿ ಮಾಡಿದ್ದರು.