ನವದೆಹಲಿ: ಅಪಘಾತ ಪ್ರಕರಣಗಳಲ್ಲಿ ಅಳಿಯ ಸಾವನ್ನಪ್ಪಿದರೆ ಅತ್ತೆ(Mother-In-Law)ಗೂ ಪರಿಹಾರ ನೀಡಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ‘ಅತ್ತೆ ಕಾನೂನು ಪ್ರಕಾರ ಅಳಿಯನ ಉತ್ತರಾಧಿಕಾರಿ ಆಗದಿರಬಹುದು. ಆದರೆ ಮೋಟಾರು ವಾಹನ ಕಾಯ್ದೆಯಡಿ ‌ಪರಿಹಾರ ಪಡೆಯಲು ತನ್ನ ಅಳಿಯನೊಂದಿಗೆ ವಾಸಿಸುವ ಅತ್ತೆಯನ್ನು ಕಾನೂನು ಪ್ರತಿನಿಧಿ(Legal Representative)ಯಾಗಿ ಪರಿಗಣಿಸಬಹುದು’ ಅಂತಾ ಸುಪ್ರೀಂಕೋರ್ಟ್‌(Supreme Court) ಹೇಳಿದೆ.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್ ಮತ್ತು ಕೃಷ್ಣ ಮುರಾರಿ ಅವರ ಪೀಠವು ‘ಭಾರತೀಯ ಸಮಾಜದಲ್ಲಿ ಅತ್ತೆಯು ತನ್ನ ವೃದ್ಧಾಪ್ಯದಲ್ಲಿ ಮಗಳು ಮತ್ತು ಅಳಿಯ(Son-In-Law)ನೊಂದಿಗೆ ವಾಸಿಸುವುದು ಮತ್ತು ಅವರ ಮೇಲೆ ಅವಲಂಬಿತವಾಗಿರುವುದು ಸಾಮಾನ್ಯವಾದ ಸಂಗತಿಯಾಗಿದೆ. ಅಳಿಯನ ಸಾವಿನಿಂದ ಅತ್ತೆಗೂ ತೊಂದರೆಯಾಗಬಹುದು. ಹೀಗಾಗಿ ಮೋಟಾರು ವಾಹನ ಕಾಯ್ದೆಯ 166ನೇ ಸೆಕ್ಷನ್ ಅಡಿ ಪರಿಹಾರ ಪಡೆಯಲು ಅತ್ತೆಯನ್ನು ಕೂಡ ಕಾನೂನು ಪ್ರತಿನಿಧಿಯಾಗಿ ಪರಿಗಣಿಸಬಹುದಾಗಿದೆ’ ಪೀಠವು ಹೇಳಿದೆ.   


ಇದನ್ನೂ ಓದಿ: PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್‌ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ


2011ರ ರ ಜೂನ್ 20ರಂದು ಪ್ರಾಧ್ಯಾಪಕರಾಗಿದ್ದ 52 ವರ್ಷದ ವೇಣುಗೋಪಾಲನ್‌ ನಾಯರ್‌ ಎಂಬುವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರು ತಮ್ಮ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದರು. ಈ ಪ್ರಕರಣದಲ್ಲಿ ಅತ್ತೆಯನ್ನು ಪರಿಹಾರ ಪಡೆಯಲು ಕಾನೂನು ಪ್ರತಿನಿಧಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಿದ್ದ ಕೇರಳ ಹೈಕೋರ್ಟ್‌(Kerala High Court) ಪರಿಹಾರ ಮೊತ್ತವನ್ನು ಕಡಿಮೆಗೊಳಿಸುವಂತೆ ಸೂಚಿಸಿತ್ತು.


ಮೋಟಾರು ಅಪಘಾತ ಹಕ್ಕುಗಳ ಟ್ರಿಬ್ಯೂನಲ್ 74,50,971 ರೂ. ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ ಕೇರಳ ಹೈಕೋರ್ಟ್ ಈ ಮೊತ್ತವನ್ನು 48,39,728 ರೂ.ಗೆ ಕಡಿತಗೊಳಿಸಿತ್ತು. ಇದರ ವಿರುದ್ಧ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಾಧ್ಯಾಪಕ ವೇಣುಗೋಪಾಲನ್‌ ನಾಯರ್‌ ಪತ್ನಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇರಳ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ್ದು, ಸಂತ್ರಸ್ತನ ಕುಟುಂಬಕ್ಕೆ 85.81 ಲಕ್ಷ ರೂ. ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿದೆ.


ಇದನ್ನೂ ಓದಿ: Char Dham Yatra: ಹಿಮಪಾತದ ನಡುವೆಯೇ ಉತ್ತರಾಖಂಡದಲ್ಲಿ ಮುಂದುವರಿದ ಚಾರ್ ಧಾಮ್ ಯಾತ್ರೆ


ಮೋಟಾರು ವಾಹನ ಕಾಯ್ದೆ(Motor Vehicles Act)ಯ ನಿಬಂಧನೆಗಳು ‘ನ್ಯಾಯ ಮತ್ತು ನ್ಯಾಯೋಚಿತ ಪರಿಹಾರ’ ಎಂಬ ಪರಿಕಲ್ಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ‘ಇದು ಸಂತ್ರಸ್ತರಿಗೆ ಅಥವಾ ಅವರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ರಚಿಸಲಾದ ಪ್ರಯೋಜನಕಾರಿ ಶಾಸನವಾಗಿದೆ. MV ಕಾಯ್ದೆಯ 168ನೇ ವಿಧಿಯು ‘ಕೇವಲ ಪರಿಹಾರ’ ಪರಿಕಲ್ಪನೆಯೊಂದಿಗೆ ವ್ಯವಹರಿಸುತ್ತದೆ. ಇದು ನ್ಯಾಯೋಚಿತತೆ, ಸಮಾನತೆ ಮತ್ತು ಸಮಂಜಸತೆಯ ತಳಹದಿಯ ಮೇಲೆ ನಿರ್ಧರಿಸಬೇಕು’ ಅಂತಾ ಪೀಠವು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ