ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಇಡಿ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕುರಿತು ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ನ್ಯಾಯಮೂರ್ತಿ ಭಾನುಮತಿ ಮತ್ತು ನ್ಯಾಯಮೂರ್ತಿ ಬೋಪಣ್ಣ ಅವರ ನ್ಯಾಯಪೀಠದಿಂದ ಬೆಳಿಗ್ಗೆ 10: 30 ಕ್ಕೆ ಈ ತೀರ್ಪು ಹೊರಬರಲಿದೆ.


COMMERCIAL BREAK
SCROLL TO CONTINUE READING

ಸಿಬಿಐ ರಿಮಾಂಡ್ ನಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ(ಸೆ.2) ನಿರ್ದೇಶಿಸಿದೆ. ಅರ್ಜಿಯ ಕುರಿತು ನ್ಯಾಯಾಲಯ ಇಂದೇ(ಸೋಮವಾರವೇ) ತನ್ನ ನಿರ್ಧಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನ್ಯಾಯಾಂಗ ಕಸ್ಟಡಿಯಲ್ಲಿರುವಾಗ ತಮ್ಮನ್ನು ತಿಹಾರ್‌ ಜೈಲಿಗೆ ಕಳುಹಿಸಬಾರದು, ಬೇಕಿದ್ದರೆ ಗೃಹ ಬಂಧನದಲ್ಲಿರಿಸಿ ಎಂದು ಪಿ. ಚಿದಂಬರಂ ಮನವಿ ಮಾಡಿದ ಬಳಿಕ ಕೋರ್ಟ್ ಈ ಸೂಚನೆ ನೀಡಿತ್ತು. ಚಿದಂಬರಂಗೆ ಕೆಳ ನ್ಯಾಯಾಲಯದಿಂದ ಜಾಮೀನು ಸಿಗದಿದ್ದರೆ, ಅವರು ಇನ್ನೂ ಮೂರು ದಿನಗಳ ಕಾಲ ಸಿಬಿಐ ವಶದಲ್ಲಿರುತ್ತಾರೆ. ಅಂದರೆ ಚಿದಂಬರಂ ಅವರನ್ನು ಸೆಪ್ಟೆಂಬರ್ 5 ನೇ ತಾರೀಖಿನವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.


ಆದರೆ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಮರುಪರಿಶೀಲಿಸುವಂತೆ ಸಿಬಿಐ ವಕೀಲ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ನಿಮ್ಮ(ಸುಪ್ರೀಂಕೋರ್ಟ್) ಆದೇಶವು ಚಿದಂಬರಂಗೆ ಒಂದು ರೀತಿಯಲ್ಲಿ ಜಾಮೀನು ನೀಡಿದೆ ಎಂದು ಮೆಹ್ತಾ ಹೇಳಿದ್ದಾರೆ.


ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಇಡಿ ಪರವಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಚಿದಂಬರಂ ಅವರ ನಿರೀಕ್ಷಣಾ ಜಾಮೀನು ವಿರೋಧಿಸಿ, ಸುದೀರ್ಘ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಚಿದಂಬರಂಗೆ ಮುಂಗಡ ಜಾಮೀನು ನೀಡಿದರೆ, ಅದು ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಇದು ವಿಜಯ್ ಮಲ್ಯ, ಮೆಹುಲ್ ಚೌಕಿ, ನೀರವ್ ಮೋದಿ, ಶಾರದಾ ಚಿಟ್ ಫಂಡ್, ಭಯೋತ್ಪಾದಕ ನಿಧಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೂ ಇದೇ ಮಾನದಂಡ ಅನುಸರಿಸಬೇಕಾದ ಅನಿವಾರ್ಯ ಬರಬಹುದು ಎಂದರು.


ಸಾಕ್ಷ್ಯಾಧಾರಗಳನ್ನು ತೋರಿಸದೆ ಬಂಧನ ವಿಚಾರಣೆಯ ಬೇಡಿಕೆಯನ್ನು ವಿರೋಧಿಸಿದ ತುಷಾರ್ ಮೆಹ್ತಾ, ತನಿಖೆ ಹೇಗೆ ನಡೆಸಬೇಕು, ಸಂಸ್ಥೆ ಅದನ್ನು ಜವಾಬ್ದಾರಿಯುತವಾಗಿ ನಿರ್ಧರಿಸುತ್ತದೆ. ಮುಕ್ತವಾಗಿ ತಿರುಗುತ್ತಿರುವ ಆರೋಪಿಗಳಿಗೆ ಸಾಕ್ಷ್ಯವನ್ನು ತೋರಿಸಿದರೆ ಉಳಿದ ಪುರಾವೆಗಳನ್ನು ಅಳಿಸಲು ಆಹ್ವಾನಿಸಿದಂತಾಗುತ್ತದೆ ಎಂದು ನ್ಯಾಯಾಲಯದಲ್ಲಿ ತಿಳಿಸಿದರು.


ತನಿಖೆಯನ್ನು ಹೇಗೆ ಹೆಚ್ಚಿಸುವುದು, ಅದು ಸಂಪೂರ್ಣವಾಗಿ ಏಜೆನ್ಸಿಯ ಹಕ್ಕು ಎಂದು ಹೇಳಿದರು. ಪ್ರಕರಣದ ವಿಷಯದಲ್ಲಿ, ಯಾವ ಹಂತದಲ್ಲಿ ಪುರಾವೆಗಳನ್ನು ಬಹಿರಂಗಪಡಿಸಬೇಕು ಎಂಬುದನ್ನು ಸಂಸ್ಥೆ ನಿರ್ಧರಿಸುತ್ತದೆ. ಎಲ್ಲಾ ಸಾಕ್ಷ್ಯಗಳನ್ನು ಬಂಧನದ ಮೊದಲು ಆರೋಪಿಗಳ ಮುಂದೆ ಇಡಲಾಗಿದ್ದರೆ, ಇದರಿಂದಾಗಿ ಆರೋಪಿಗಳು ಸಾಕ್ಷ್ಯಗಳನ್ನು ಹಾಳುಮಾಡಲು ಮತ್ತು ಹಣದ ಮೂಲಕ ಅದನ್ನು ಕೊನೆಗೊಳಿಸಲು ಅವಕಾಶ ನೀಡುತ್ತದೆ ಎಂದು ಮೆಹ್ತಾ ತಿಳಿಸಿದರು.