ಬೆಂಗಳೂರು: ಕೃಷ್ಣಾ ನದಿ (Krishna River) ಇಡೀ ಉತ್ತರ ಕರ್ನಾಟಕದ ಜೀವನದಿಯಾಗಿದ್ದು, ಈ ನೀರಿನ ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ವರೆಗೆ ಹಂತ ಹಂತವಾಗಿ ಏರಿಸಬೇಕೆನ್ನುವ ಪ್ರಸ್ತಾಪ ಸರ್ಕಾರದ ಮುಂದಿದೆ. ಆದುದರಿಂಸ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಿ ಚಿಂತನೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಪರಿವೀಕ್ಷಣೆ ಮಾಡಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಎಲ್ಲಾ ಶಾಸಕರಿಗೆ ಅವರ ಮತಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುವ ಹಕ್ಕಿದೆ. ಆದರೆ ತಿಡಗುಂದಿ ವಿಷಯದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ತಿಡಗುಂದಿ ಜಲ ಸೇತುವೆ ಇನ್ನೂ ಲೋಕಾರ್ಪಣೆಯಾಗಿಲ್ಲ ಎಂದರು.


ತಿಡಗುಂದಿ ಕಾಲುವೆ ಲೋಕಾರ್ಪಣೆ ವಿಷಯದಲ್ಲಿ ಅಧಿಕಾರಿಗಳು ನಿಯಮವನ್ನು ಉಲ್ಲಂಘಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬುಧವಾರ ಸಂಜೆಯೊಳಗೆ ಕ್ರಮ ಕೈಗೊಳ್ಳುವುದು. ಯುಕೆಪಿ ಯೋಜನೆ ಜಾರಿಗೆ ಹಣಕಾಸಿನ ಕೊರತೆಯಿಲ್ಲ. ನಾನು ಉತ್ತರಕರ್ನಾಟಕದವನಾಗಿದ್ದು, ಈ ಭಾಗದ ಸಮಗ್ರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಯೋಜನೆ ಪೂರ್ಣಗೊಳಿಸಲು ಹಣಕಾಸಿನ ಕ್ರೋಡಿಕರಣಕ್ಕೂ ಚಿಂತನೆ ನಡೆದಿದೆ ಎಂದರು.


ಇದು ನನ್ನ ಅಧ್ಯಯನ ಪ್ರವಾಸವಾಗಿದ್ದು, ಯೋಜನೆಗಳ ಕುರಿತು ಮಾಹಿತಿ ಪಡೆಯಲು ಬಂದಿದ್ದೇನೆ. ಕೊರೋನಾ ಲಾಕ್ ಡೌನ್ ನಂತರ ಮತ್ತೆ ಈ ಭಾಗಕ್ಕೆ ಬಂದು ಯುಕೆಪಿ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುತ್ತೇನೆ.  ಅಭಿವೃದ್ಧಿ ಪರ ಯಾವುದೇ ಸಲಹೆಗಳಿಗೂ ಸ್ವಾಗತ ಎಂದ ಸಚಿವರು, ನೀರಾವರಿ ಕ್ಷೇತ್ರದಲ್ಲಿಯಲ್ಲಿ ಹೊಸ ಬದಲಾವಣೆ ತರುವುದೇ ನನ್ನ ಮುಂದಿರುವ ಗುರಿ ಎಂದರು.


ಅಧಿಕಾರಿ ಕ್ವಾರಂಟೈನ್:
ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳು  ಲಾಕ್‌ಡೌನ್ (Lockdown)  ಅವಧಿಯಲ್ಲೂ ತುಮಕೂರು ಸೇರಿದಂತೆ ನಾನಾ ಕಡೆ ಸಂಚರಿಸಿ ಲಾಕ್ ಡೌನ್ ಉಲ್ಲಂಘಿಸಿದ್ದಾರೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ, ಎ.ಎಸ್. ಪಾಟೀಲ (ನಡಹಳ್ಳಿ), ಶಿವಾನಂದ ಪಾಟೀಲ, ಸೋಮನಗೌಡ ಪಾಟೀಲ, ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ, ಅರುಣ ಶಹಾಪುರ, ಹನುಮಂತ ನಿರಾಣಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.