ಬೆಂಗಳೂರು:  'ಕಲ್ಯಾಣ ಕರ್ನಾಟಕ ಭಾಗದ ಯುವಕರ ಭವಿಷ್ಯದ ಚಿಂತೆ ಈ ಬಿಜೆಪಿ ಸರ್ಕಾರಕ್ಕೆ ಇಲ್ಲವೇ ಇಲ್ಲ. ನಮ್ಮ ಯುವಕರನ್ನ ನಶೆ, ಗಾಂಜಾ ಹಾಗೂ ಮಟ್ಕಾ ಕಡೆ ಕರೆದೊಯ್ಯಲು ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆಯೇ ಹೊರತು ಉದ್ಯೋಗ ಒದಗಿಸುವತ್ತ ಹಾಗೂ ಸ್ವಾವಲಂಬಿಗಳಾಗಿಸುವ ಕಡೆ ಇವರ ಗಮನ ಚೂರೂ ಇಲ್ಲದಾಗಿದೆ" ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ (Priyank Kharge) "ಈಗಾಗಲೇ PSI ಹಾಗೂ FDC ನೇಮಕಾತಿಯಲ್ಲಿ ಆಗಿರುವ ಅಕ್ರಮದಿಂದಾಗಿ ನಮ್ಮ ಭಾಗದ ಯುವಕರು ಕಂಗೆಟ್ಟು ಹೋಗಿದ್ದಾರೆ.ಇದೇ ರೀತಿ ಮಲತಾಯಿ ಧೋರಣೆ ಮುಂದುವರೆಯುತ್ತಲೇ ಇದ್ದರೆ ಜನ ರೊಚ್ಚಿಗೇಳುವ ದಿನಗಳು ದೂರವಿಲ್ಲ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ..!


'ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಒಳಪಡುವ ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮತ್ತು ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನ ಕೈಗೊಳ್ಳುವ ನಿಟ್ಟಿನಲ್ಲಿ ಕಲಂ 371 (ಜೆ) ಯನ್ನು ಜಾರಿಗೊಳಿಲಾಗಿತ್ತು. ಇದರಿಂದ ಈ ಭಾಗದ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಪ್ರದೇಶದಕ್ಕೆ & ಪ್ರದೇಶದ ಜನರಿಗೆ ಅಗತ್ಯ ಅನುದಾನ ಮತ್ತು ಶಿಕ್ಷಣ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಯನ್ನ ಮಂಜೂರು ಮಾಡಲಾಗಿತ್ತು.' 


ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013 ರನ್ವಯ ಹೈದರಾಬಾದ್ ಕರ್ನಾಟಕ ಪ್ರದೇಶದ ನೌಕರಿಗೆ ಮುಂಬಡ್ತಿ, ನೇರ ನೇಮಕಾತಿಯಡಿ ಮೀಸಲಾತಿ ಕಲ್ಪಿಸಿ ಆದೇಶಿಸಲಾಗಿತ್ತು. ಅದರಂತೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಪ್ರಾದೇಶಿಕ ಸ್ಥಳೀಯ ವೃಂದಲ್ಲಿ ಗ್ರೂಪ್ –ಎ, ಬಿ, ಹಾಗೂ ಸಿ ಮತ್ತು ಡಿ ವೃಂದಗಳಿಗೆ  ಕ್ರಮವಾಗಿ ಶೇ. 75,80,85 ರಷ್ಟು ಹಾಗೂ ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಶೇ.8 ರಷ್ಟು ಹುದ್ದೆಗಳನ್ನ ನೇರ ಮತ್ತು ಮುಂಬಡ್ತಿ ನೇಮಕಾತಿ ನೀಡಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ರಾಜ್ಯ ಮಟ್ಟದ ಸಂಸ್ಥೆಯಾಗಿರುವುದರಿಂದ ಶೇ.8 ರಷ್ಟು ಹುದ್ದೆಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗಿದೆ.


ಪಂಚರಾಜ್ಯ ಫಲಿತಾಂಶ.. ಆತ್ಮಾವಲೋಕನಕ್ಕೆ ಶೀಘ್ರದಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ!


ಅದರಂತೆ ಸದರಿ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕಾಗಿರುತ್ತದೆ. ಯಾವುದೇ ಸಮಯದಲ್ಲಿ ಯಾವುದೇ ಹುದ್ದೆಗಾಗಿ ಸ್ಥಳೀಯ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಅಂತಹ ಹುದ್ದೆಗಳನ್ನ ಬ್ಯಾಕ್ ಲಾಗ್ ಎಂದು ಪರಿಗಣಿಸಿ ಮುಂದಿನ ನೇಮಕಾತಿ ಆಗುವವರೆಗೂ ಅದನ್ನು ಹಾಗೇ ಮುಂದುವರೆಸಬೇಕು. ನಂತರ ಅದನ್ನು ಮಿಸಲಾತಿಯಲ್ಲವೆಂದು ಭಾವಿಸಬಹುದು ಮತ್ತು ಅದಕ್ಕನುಗುಣವಾಗಿ ಭರ್ತಿಮಾಡಬಹುದಾಗಿತ್ತು. 


ಆದರೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ದಿನಾಂಕ 03-03-2022 ರಂದು ನಡೆದ ಕಲ್ಯಾಣ ಕರ್ನಾಟಕ ಪ್ರಗತಿ ಪರಿಶೀಲನಾ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ, ಅರ್ಹ ಹೈದರಾಬಾದ್ ಕರ್ನಾಟಕ ಅಧಿಕಾರಿಗಳು ಲಭ್ಯವಿಲ್ಲದಿದ್ದಾಗ, ಖಾಲಿ ಇರುವ ಹುದ್ದೆಗಳನ್ನ ಹೈ.ಕ ಕ್ಕೆ ಸೇರದವರಿಂದ ಭರ್ತಿ ಮಾಡಬಹುದು ಎಂದು ತೀರ್ಮಾನಿಸಿ ಸುತ್ತೋಲೆ ಹೊರಡಿಸಲು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.


ಬಿಜೆಪಿ ಸರ್ಕಾರದ ಈ ಹೊಸ ನಿಯಮದಡಿ ಹುದ್ದೆಗಳನ್ನ ಭರ್ತಿ ಮಾಡಿದರೆ ಹೈ.ಕ ಸ್ಥಳೀಯ ಅಧಿಕಾರಗಳು ಮತ್ತು ನೌಕರರು ಮುಂಬಡ್ತಿ ಇಲ್ಲದೆ ವಂಚಿತರಾಗುತ್ತಾರೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳು ಕೂಡ ಉದ್ಯೋಗದಿಂದ ವಂಚಿತರಾಗುತ್ತಾರೆ. ಅಲ್ಲದೇ ಈಗಾಗಲೇ ಹಿಂದುಳಿದ ವರ್ಗಗಳಿಗೆ ತುಂಬಲಾರದ ನಷ್ಟವಾಗುತ್ತದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಕಲ್ಯಾಣ ಕುಂಠಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಅವರು ಕಳವಳ ವ್ಯಕ್ತಪಡಿಸಿದರು.


ಇದನ್ನೂ ಓದಿ: ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿ -ಪ್ರಿಯಾಂಕ್ ಖರ್ಗೆ


ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ರಾಜ್ಯ ಮಟ್ಟದ ಅಥವಾ ಸ್ಥಳೀಯ ವೃಂದದ ಅಧಿಕಾರಿಗಳು ಮುಂಬಡ್ತಿಗೆ ಲಭ್ಯವಿಲ್ಲದಿದ್ದಾಗ, ಸಂಬಂಧಪಟ್ಟ ವೃಂದಗಳ ಹುದ್ದೆಗಳ ಮುಂಬಡ್ತಿಗೆ ನಿಗದಿಪಡಿಸಿದ ಅರ್ಹತೆ ಸೇವೆಯನ್ನು ಸಡಿಲಿಸಿ ಅಥವಾ ರೂಲ್ 32 ಅಡಿಯಲ್ಲಿ ಅವರನ್ನು ಮುಂಬಡ್ತಿಗೊಳಿಸಿದಾಗ 371 ಜೆ ಅಡಿಯಲ್ಲಿನ ಹುದ್ದೆಗಳು ಖಾಲಿ ಉಳಿಯುವ ಸನ್ನಿವೇಶ ಉದ್ಭವಿಸುವುದಿಲ್ಲ.ಈ ಮೇಲ್ಕಂಡ ಎಲ್ಲಾ ಕಾರಣಗಳಿಂದಾಗಿ 03-03-2022 ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನ ಕೂಡಲೇ ಹಿಂಪಡೆದು ಸ್ಥಳೀಯ ವೃಂದದ ನೌಕರರುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.


ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ 371 ಜೆ ಬಹುದೊಡ್ಡ ಪಾತ್ರವಹಿಸುತ್ತದೆ. ಹೀಗಾಗಿ ಕಾಯಿದೆಯಲ್ಲಿರುವ ಹುದ್ದೆಗಳ ನೇಮಕಾತಿಯನ್ನ ಕಲ್ಯಾಣ ಕರ್ನಾಟಕ ವ್ಯಾಪ್ತಿಗೊಳಪಡುವವರಿಗೆ ಮಾತ್ರ ಮೀಸಲಿರಿಸಬೇಕೆ ಹಾಗೂ ಇತ್ತೀಚಿನ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನ, ಕೂಡಲೇ ಕೈ ಬಿಡಬೇಕು' ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ