ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಬಿರುಕು ಹೆಚ್ಚುತ್ತಿದೆ. ಕಾಂಗ್ರೆಸ್‌ ಮುಖಂಡರು ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹೋರಾಟ ಮಾಡುವುದಕ್ಕಿಂತ ಆಂತರಿಕ ಹೋರಾಟದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಾಡಿರುವ ಟ್ವೀಟ್‌ ಇದಕ್ಕೆ ಸಾಕ್ಷಿ. 


COMMERCIAL BREAK
SCROLL TO CONTINUE READING

ಸಚಿವ ಅಶ್ವತ್ಥ್‌ ನಾರಾಯಣ್‌ ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ವಲಯದಲ್ಲೇ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಾಜಿ ಸಂಸದೆ ರಮ್ಯಾ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದಾರೆ. ಡಿಕೆಶಿ ಹೇಳಿಕೆ ವಿರೋಧಿಸಿ ರಮ್ಯಾ ಮಾಡಿರುವ ಟ್ವೀಟ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. 


ಕಾಂಗ್ರೆಸ್‌ನಲ್ಲಿ ಆತಂಕರಿಕ ಭಿನ್ನಾಭಿಪ್ರಾಯ, ಆಂತರಿಕ ಸಮರ ಹೊಸದೇನಲ್ಲ. ಹೀಗಿದ್ದರೂ ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಹೋಗಿ ಎಂದು ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದೆ. ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದ ಸಂದರ್ಭದಲ್ಲೂ ಇದೇ ಸೂಚನೆಯನ್ನು ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ನೀಡಿದ್ದರು. ಇದರ ಪರಿಣಾಮವಾಗಿಯೇ ಹಲವು ಹೋರಾಟಗಳನ್ನು ಜೊತೆಗೂಡಿ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಕೈ ಪಾಳಯ ಯಶಸ್ಸು ಕೂಡಾ ಕಂಡಿತ್ತು. 


ಇದನ್ನೂ ಓದಿ- ಸ್ವಗ್ರಾಮದಲ್ಲೇ ನಡೆದಿರುವ ದಲಿತ ಮಹಿಳೆ ಮೇಲಿನ ಅತ್ಯಾಚಾರ ಆರಗ ಜ್ಞಾನೇಂದ್ರರ ಗಮನಕ್ಕೇ ಬಂದಿಲ್ಲವೇ?


ಡಿಕೆಶಿ ಹೊತ್ತಿಸಿದ್ರಾ ಹೊಸ ಕಿಡಿ..? 
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ಹೆಸರು ಕೇಳಿಬಂದ ಬೆನ್ನಲ್ಲೇ ಅಶ್ವತ್ಥ್‌ ನಾರಾಯಣ ಅವರು ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿಗೆ ಡಿ.ಕೆ.ಶಿವಕುಮಾರ್ ನೀಡಿದ್ದ ಪ್ರತಿಕ್ರಿಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಸೃಷ್ಟಿಸಿದೆ. 


ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಡಿ.ಕೆ.ಶಿವಕುಮಾರ್ ಹೇಳಿದ್ದರು. 


ಡಿ.ಕೆ.ಶಿವಕುಮಾರ್ ನೀಡಿದ್ದ ಈ ಹೇಳಿಕೆಗೆ ಯಾವುದೇ ಆಧಾರ ಇರಲಿಲ್ಲ. ಸ್ವತಃ ಎಂ.ಬಿ.ಪಾಟೀಲ್‌ ಹಾಗೂ ಅಶ್ವತ್ಥ್‌ ನಾರಾಯಣ ಇಬ್ಬರು ಈ ಆರೋಪವನ್ನು ನಿರಾಕರಿಸಿದ್ದರು. ತಮ್ಮ ಇಬ್ಬರು ಮಕ್ಕಳು ಕ್ಲಾಸ್‌ಮೆಟ್ಸ್‌ ಗಳಾದರೂ ನಾವು ಇತ್ತೀಚಿನ ದಿನಗಳಲ್ಲಿ ಭೇಟಿ ಆಗಿಲ್ಲ ಎಂದು ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದರು. 


ಇದನ್ನೂ ಓದಿ- HSR ಲೇಔಟ್ ಮಳೆ ನೀರು ನುಗ್ಗುವ ಸಮಸ್ಯೆಗೆ ಈ ಬಾರಿಯಾದ್ರೂ ಸಿಗುತ್ತಾ ಪರಿಹಾರ??


ಸಹಜವಾಗಿ ಡಿಕೆಶಿ ಈ ಹೇಳಿಕೆ ಎಂ.ಬಿ.ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವೆ ಆಂತರಿಕವಾಗಿ ಸಾಕಷ್ಟು ಚರ್ಚೆಗೂ ಇದು ಎಡೆಮಾಡಿಕೊಟ್ಟಿದೆ. ಯಾವುದೇ ಆಧಾರ ಇಲ್ಲದೆ ಈ ರೀತಿಯ ಆರೋಪವನ್ನು ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸುತ್ತಿದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡದೆ ಜಾರಿಕೊಳ್ಳುತ್ತಿದ್ದಾರೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಇಂತಹ ಹೇಳಿಕೆಯನ್ನು ಬಹಿರಂಗವಾಗಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಚರ್ಚೆಯಾಗ್ತಿದೆ. 


ಇದೀಗ ಇದೇ ಪ್ರಶ್ನೆಯನ್ನು ಮಾಜಿ ಸಂಸದೆ ರಮ್ಯಾ ಮಾಡಿದ್ದು, ಸಹಜವಾಗಿ ಪಕ್ಷದಲ್ಲಿ ಮತ್ತಷ್ಟು ಚರ್ಚೆಗೆ ಅವಕಾಶ ನೀಡಿದೆ. ಈ ಟ್ವೀಟ್ ಬೆನ್ನಲ್ಲೇ ಕೆಪಿಸಿಸಿ ಐಟಿ ಸೆಲ್‌ ರಮ್ಯಾ ಮೇಲೆ ಮುಗಿಬಿದ್ದಿದೆ. ರಮ್ಯಾ ಮಾಡಿರುವ ಈ ಟ್ವೀಟ್‌ ಕೈ ಪಾಳಯದಲ್ಲಿ ಹೊತ್ತಿರುವ ಕಿಡಿಗೆ ಮತ್ತಷ್ಟು ತುಪ್ಪ ಸುರಿಸಿದಂತಾಗಿದೆ. ಈ ನಡುವೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು ಎಂದು ಪ್ರಾರ್ಥನೆ ಮಾಡಿರುವುದು ಕೂಡಾ ಮತ್ತೊಂದು ಬಣದ ಕಣ್ಣು ಕೆಂಪಾಗಿಸಿದೆ. ಸದ್ಯ ಆಂತರಿಕವಾಗಿರುವ ಈ ತಿಕ್ಕಾಟ ಬಹಿರಂಗವಾಗಿ ಸ್ಫೋಟಗೊಳ್ಳುವ ಸಾಧ್ಯತೆ ದಡ್ಡವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.