ಬೆಂಗಳೂರು: ಭ್ರಷ್ಟಾಚಾರದ ಆರೋಪದಲ್ಲಿ ಆರೋಗ್ಯ ಇಲಾಖೆ ನಂ.೧. ಅದೇ ಬಡ ರೋಗಿಗಳ ಚಿಕಿತ್ಸೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ. ಹೌದು, ಪ್ರತಿನಿತ್ಯ ಕೆ.ಸಿ.ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಅಗತ್ಯ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ಆಸ್ಪತ್ರೆಯಲ್ಲಿರುವ ಸಮಸ್ಯೆಗಳು ಒಂದೆರಡಲ್ಲ. ಬೆಂಗಳೂರಷ್ಟೇ ಅಲ್ಲದೆ ನಗರದ ಹೊರಭಾಗದಿಂದಲೂ ಬರುವ ರೋಗಿಗಳಿಗೆ ಆಸ್ಪತ್ರೆಗೆ ಬಂದರೆ ತಕ್ಷಣಕ್ಕೆ ಚಿಕಿತ್ಸೆಯೇ ಸಿಗುವುದಿಲ್ಲ. ವೈದ್ಯರು ಸಿಗಬೇಕು ಅಂದರೆ ಆಸ್ಪತ್ರೆಗೆ ಕನಿಷ್ಟ 2-3 ದಿನವಾದರೂ ಅಲೆದಾಡಬೇಕು. ಬಿಪಿಎಲ್ ಕಾರ್ಡ್ ಇದ್ದರೂ ರೋಗಿಯ ಅಡ್ಮಿಡ್‍ಗೆ 400 ರೂ. ಲಂಚ ಕೊಡ್ಬೇಕು. ಪ್ರತಿನಿತ್ಯ 800-900 ಹೊರ ರೋಗಿಗಳು ಬಂದ್ರೂ ಇಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲ, ವೈದ್ಯರೂ ಇಲ್ಲ.


ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ 874 ಹುದ್ದೆಗಳಿಗೆ ಅರ್ಜಿ ಆಹ್ವಾನ


ಇರುವ ಬೆರಳೆಣಿಕೆ ವೈದ್ಯರೂ ರೋಗಿಗಳಿಗೆ ಸಿಗದೆ 2-3 ಗಂಟೆ ಲಂಚ್ ಬ್ರೇಕ್ ಅಂತ ಹೊರಟುಬಿಡ್ತಾರೆ. ಇನ್ನು ಆಪರೇಷನ್ ಅಗತ್ಯ ಇರುವ ರೋಗಿಗಳಿಗೂ ತಿಂಗಳುಗಟ್ಟಲೇ ಮುಂದೂಡುತ್ತಾರೆ ಅಂತಾ ಚಿಕಿತ್ಸೆ ಪಡೆಯಲು ಬಂದವರು ಬೇಸರ ವ್ಯಕ್ತಪಡಿಸಿದ್ದಾರೆ.


ಇನ್ನು ಸಿಬ್ಬಂದಿ ಕೊರತೆ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಗಮನಕ್ಕೆ ತಂದ್ರೂ ಕ್ಯಾರೇ ಅನ್ತಿಲ್ಲ. ಸಭೆ ನಡೆಸೋದಕ್ಕೂ ಆರೋಗ್ಯ ಸಚಿವರಿಗೆ ಸಮಯವೇ ಸಿಕ್ಕಿಲ್ಲ. ಚಿಕಿತ್ಸೆ ವೆಚ್ಚ ಬಿಪಿಎಲ್ ಕಾರ್ಡ್‍ಗಳಿಗೆ ಸಂಪೂರ್ಣ ಉಚಿತ, ಎಪಿಎಲ್ ಕಾರ್ಡ್‍ಗೆ ಕನಿಷ್ಟ ಶುಲ್ಕ ಅಂತಿದ್ರೂ ಮನಬಂದಂತೆ ದುಡ್ಡು ವಸೂಲಿ ಮಾಡಲಾಗುತ್ತಿದೆ. ಸ್ಕ್ಯಾನಿಂಗ್, ಎಕ್ಸ್ ರೇ, ಮೆಡಿಸಿನ್‍ಗಳಿಗೂ ಖಾಸಗಿ ಮೆಡಿಕಲ್ ಗಳಿಗೆ ಬರೆದು ಕೊಡ್ತಾರೆ. ಆಸ್ಪತ್ರೆಗೆ ಬೇಕಾದ ಅಗತ್ಯ ಸಿಬ್ಬಂದಿ, ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆ  ಆಯುಕ್ತ ಡಿ.ರಂದೀಪ್ ಅವರು ಜೀ ಕನ್ನಡ ನ್ಯೂಸ್‍ಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ


ಒಟ್ಟಿನಲ್ಲಿ ಸಾಕಷ್ಟು ಅನುದಾನ ಇದ್ದರೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಭ್ರಷ್ಟಾಚಾರದ ಕೂಪದಲ್ಲಿ ಬಲಿಷ್ಟರು ತಿಂದು ತೇಗ್ತಾ ಇದ್ದರೆ, ಬಡವರು ಚಿಕಿತ್ಸೆ ಸಿಗದೆ ನರಳಾಡುವಂತಾಗಿರುವುದು ದುರಂತವೇ ಸರಿ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.