ಕೊಪ್ಪಳ : ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ಕೆಳಮಟ್ಟದ ಕಾಲುವೆಗೆ ಹಾಗೂ ವಿಜಯನಗರ ಕಾಲುವೆಗಳಿಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ನಿರ್ಣಯಿಸಿದಂತೆ  ಪ್ರಸ್ತುತ ಹಿಂಗಾರು ಹಂಗಾಮಿಗೆ ನೀರನ್ನು ಒದಗಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ವ್ಯಾಪ್ತಿಯಲ್ಲಿ ಬರುವ ನೀರಾವರಿ ಯೋಜನೆಗಳ ಕುರಿತು ಕಾಡಾ ಕಚೇರಿ ಸಭಾಂಗಣದಲ್ಲಿ ಭಾನುವಾರ (ಫೆ.20) ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.


ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಮೊಬೈಲ್ ಸುಲಿಗೆ ಪ್ರಕರಣ: ನಾಲ್ವರು ಆರೋಪಿಗಳು ಬಂಧನ


ತುಂಗಭದ್ರಾ ಜಲಾಶಯದಲ್ಲಿ1981 ರಲ್ಲಿ 212 ಟಿಎಂಸಿ ನೀರು ಇತ್ತು. ಸುಮಾರು ನಲವತ್ತು ವರ್ಷಗಳ ನಂತರ ಪ್ರಸ್ತುತ ಜಲಾಶಯದಲ್ಲಿ ನೀರು ಸಿಕ್ಕಿದೆ. ಕುಡಿಯುವ ನೀರಿಗೂ ಹಾಗೂ ರೈತರ ಬೆಳೆಗೆ ನೀರು ಒದಗಿಸಲು ಯಾವುದೇ ಕೊರತೆ ಇಲ್ಲ. ತುಂಗಭದ್ರಾ ಯೋಜನೆಯು ಒಂದು ಅಂತರರಾಜ್ಯ ಯೋಜನೆಯಾಗಿದ್ದು  ಕರ್ನಾಟಕ ರಾಜ್ಯದ 9,26,438 ಎಕರೆ ಆಂದ್ರ ಪ್ರದೇಶದ 6,25,097 ಎಕರೆ, ಮತ್ತು ತೆಲಂಗಾಣದ 87,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರಸ್ತುತ ಹಿಂಗಾರು ಹಂಗಾಮಿಗೆ ಎಡದಂಡೆ ನಾಲೆಗೆ 3.30 ಲಕ್ಷ ಎಕರೆ ಬಲದಂಡೆ ಕೆಳಮಟ್ಟದ ಕಾಲುವೆಗೆ 0.70 ಲಕ್ಷ ಎಕರೆ, ವಿಜಯನಗರ ಕಾಲುವೆ 0.26 ಲಕ್ಷ ಎಕರೆ ಒಟ್ಟು 4 ಲಕ್ಷ ಎಕರೆ ಪ್ರದೇಶಕ್ಕೆ ನೀರನ್ನು ಒದಗಿಸಲಾಗುತ್ತಿದೆ.


ಇದನ್ನೂ ಓದಿ: DK Shivakumar : ಮೇಕೆದಾಟು ಪಾದಯಾತ್ರೆ ಸೈಡ್ ಲೈನ್ ಆಗುತ್ತಾ ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧದ ಧರಣಿ?


ಪ್ರಸಕ್ತ ವರ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ 212 ಟಿ.ಎಂ.ಸಿ ನೀರು ನೀರಾವರಿಗೆ ಲಭ್ಯವಾಗಬಹುದೆಂದು ಅಂದಾಜಿಸಲಾಗಿದ್ದು, ಕರ್ನಾಟಕದ ಪಾಲು 138.99 ಟಿ.ಎಂ.ಸಿ ಇರುತ್ತದೆ. ಇದರಲ್ಲಿ ಮುಂಗಾರು ಹಂಗಾಮಿಗೆ 71.89 ಟಿ.ಎಂ.ಸಿ ನೀರನ್ನು ವಿವಿಧ ಕಾಲುವೆಗಳಲ್ಲಿ 7.26 ಲಕ್ಷ ಎಕರೆ ಪ್ರದೇಶಕ್ಕೆ ಒದಗಿಸಲಾಗಿದೆ. ಬಾಕಿ ಉಳಿದ 67.10 ಟಿ.ಎಂ.ಸಿ ನೀರನ್ನು ಹಿಂಗಾರು ಹಂಗಾಮಿನ 4 ಲಕ್ಷ ಎಕರೆ ಪ್ರದೇಶಕ್ಕೆ ಒದಗಿಸಲಾಗುತ್ತಿದೆ ಎಂದರು.


ವಿಜಯನಗರ ಕಾಲುವೆ ಹಾಗೂ ಅಣೆಕಟ್ಟುಗಳ ಆಧುನೀಕರಣ ಕಾಮಗಾರಿಗಳು ;


ವಿಜಯನಗರ ಕಾಲುವೆಗಳನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರುತ್ತದೆ. ಈ ಯೋಜನೆ ಅಡಿಯಲ್ಲಿ ಒಟ್ಟು 11 ಅಣೆಕಟ್ಟುಗಳು ಹಾಗೂ 16 ಕಾಲುವೆಗಳು ಬರುತ್ತಿದ್ದು, ಇದರಿಂದ 27550 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ವಿಜಯನಗರ ಕಾಲುವೆಗಳು ಹಾಗೂ ಅಣೆಕಟ್ಟುಗಳ ಆಧುನೀಕರಣ ಕಾಮಗಾರಿಗಳ ಒಟ್ಟು ರೂ. 456.63 ಕೋಟಿ ಮೊತ್ತದ ಯೋಜನಾ ವರದಿಗೆ ಸರ್ಕಾರದ ಆದೇಶ 04-10-2019 ರಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿರುತ್ತದೆ. ಪ್ರಸ್ತುತ ಪ್ಯಾಕೇಜ್ -1 ರಡಿ, 3 ಅಣೆಕಟ್ಟುಗಳು ಹಾಗೂ 15 ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು  ಎಂ/ಎಸ್ ಆರ್.ಎನ್.ಶೆಟ್ಟಿ ಕಂಪನಿ ಇವರಿಗೆ 371.09 ಕೋಟಿ ಮೊತ್ತಕ್ಕೆ ವಹಿಸಲಾಗಿದ್ದು, ಒಟ್ಟು 196.62 ಕಿ.ಮೀ ಪೈಕಿ ಪ್ರಸ್ತುತ ಒಟ್ಟು 65.24 ಕಿ.ಮೀ ಸಿ.ಸಿ ಲೈನಿಂಗ್ ಹಾಗೂ ಸ್ಟಕ್ಚರ್ಸ್ ಒಳಗೊಂಡು ರೂ. 109.76 ಕೋಟಿಗಳ ವೆಚ್ಚವಾಗಿರುತ್ತದೆ. ಪ್ರಸ್ತುತ ಪ್ಯಾಕೇಜ್ -2 ರಡಿಯಲ್ಲಿ, 8 ಅಣೆಕಟ್ಟುಗಳು 1 ಕಾಲುವೆಯ ಆಧುನೀಕರಣ ಕಾಲುವೆಯ ಕಾಮಗಾರಿಯ ತಾಂತ್ರಿಕ ಬಿಡ್ಡನ್ನು ಅನುಮೋದನೆಗಾಗಿ ಟಿ.ಎಸ್.ಸಿ. ಮುಂದೆ  ಮಂಡಿಸಲು ಸಲ್ಲಿಸಲಾಗಿದೆ ಎಂದು ಹೇಳಿದರು.


ಕೆರೆ ತುಂಬಿಸುವ ಯೋಜನೆಗಳು ;


ಕೆರೆ ತುಂಬಿಸುವ ಯೋಜನೆಗಳ ವಲಯದಡಿಯಲ್ಲಿ ರೂ. 1827.17 ಕೋಟಿ ಮೊತ್ತದಲ್ಲಿ, 8 ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,  ಯೋಜನೆಗಳಿಂದ 122 ಕೆರೆಗಳನ್ನು ಮತ್ತು  ಗಣೇಕಲ್ ಸಮಾನಾಂತರ ಜಲಾಶಯ, ಮಾಲವಿ ಜಲಾಶಯ ತುಂಬಿಸಲು  ಹಾಗೂ 17225 ಎಕರೆ ಬಾಧಿತ ಪ್ರದೇಶಕ್ಕೆ (Suffering Acchakut) ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ ಎಂದರು.
 


ಸಿಂಗಟಾಲೂರು ಏತ ನೀರಾವರಿ ಯೋಜನೆ ;


ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಈ ನೀರನ್ನು ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಗದಗ ಜಿಲ್ಲೆಯ ಗದಗ ಹಾಗೂ ಮುಂಡರಗಿ ತಾಲೂಕು  ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಒಟ್ಟು 2,65,229 ಎಕರೆ ಪ್ರದೇಶಕ್ಕೆ  ಹರಿವು ಮತ್ತು ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ಈ ಯೋಜನೆಯಲ್ಲಿ  ಎಡ ಹಾಗೂ ಬಲಭಾಗದಲ್ಲಿ ಒಟ್ಟು  ಯೋಜಿತ 48,381 ಎಕರೆ ಪ್ರದೇಶಕ್ಕೆ ಹರಿವು ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯಲ್ಲಿ 1,75,552.78 ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ 5 ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಯೋಜನೆಯ ರೂ. 5768.04 ಕೋಟಿ ಪರಿಷ್ಕೃತ ಮೊತ್ತದ ಯೋಜನಾ ವರದಿಗೆ ಸರ್ಕಾರದ ಆದೇಶ 05-01-2015ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಈ ಯೋಜನೆಗೆ ಪ್ರಾರಂಭದಿAದ ಇದುವರೆಗೆ ರೂ. 2804.00 ಕೋಟಿಗಳ ವೆಚ್ಚವಾಗಿರುತ್ತದೆ.


ಇದನ್ನೂ ಓದಿ: ಕಳ್ಳ-ಪೊಲೀಸ್ ಆಟ: ಖತರ್ನಾಕ್ ಖದೀಮ ಲಾಕ್ ಆಗಿದ್ದೇಗೆ ಗೊತ್ತಾ..?


ನವಲಿ ಸಮಾನಾಂತರ ಜಲಾಶಯ ;


ನವಲಿ ಸಮಾನಾಂತರ ಜಲಾಶಯಕ್ಕೆ 2018-19 ಆಯವ್ಯಯದಲ್ಲಿ "ತುಂಗಭದ್ರಾ ಜಲಾಶಯದಲ್ಲಿನ ಸ್ಟ್ರೋರೇಜ್ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯವಾಗಿ ನವಲಿ ಬಳಿ ಪ್ರವಾಹ ಹರಿವು ಕಾಲುವೆ ಮೂಲಕ ಸಮತೋಲನ ಜಲಾಶಯದ ನಿರ್ಮಾಣ" ( Construction of balancing  reservoir  through flood flow canal  near Navali  an  alternative to overcome strorage capacity deficit in the Tungabhadra reservoir ) ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು  ಘೋಷಿಸಲಾಗಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ರೂ: 15 ಕೋಟಿಗಳಿಗೆ ಇಐಟಿ –ರೂಟ್ಸ್ ಡಿಸೈನ್(ಜೆವಿ) ಬೆಂಗಳೂರು ಇವರಿಗೆ ವಹಿಸಲಾಗಿದ್ದು, ಡಿ.ಪಿ.ಆರ್. ತಯಾರಿಸುವ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಹೇಳಿದರು.


ಇದನ್ನೂ ಓದಿ: Bike Wheeling : ವೀಲಿಂಗ್‌ ಮಾಡಿ ರೀಲ್ಸ್!‌ ಆರ್‌.ಟಿ ನಗರ ಪೊಲೀಸರ ಬಲೆಗೆ ಬಿದ್ದ ಪುಂಡ


ಈ ಸಭೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಬಸವರಾಜ ದಢೇಸೂಗೂರು, ಮುನಿರಾಬಾದ್ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಿ.ಹೆಚ್.ಎಫ್., ಕರ್ನಾಟಕ ನೀರಾವರಿ ನಿಗಮ ನಿಯಮಿತದ  ಮುಖ್ಯ ಅಭಿಯಂತರರಾದ ಕೃಷ್ಣಾಜಿ ಚೌವ್ಹಣ್, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಎಲ್.ಬಸವರಾಜ್, ತುಂಗಭದ್ರಾ ನಾಲಾ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ ಪಿ.ಬಿ. ಪ್ರಕಾಶ್, ಕಾರ್ಯಪಾಲಕ ಅಭಿಯಂತರರಾದ ಕೆ.ಬಿ.ಹೆಚ್. ಶಿವಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.