ಮೇವು ನುಂಗಿದ ಲಾಲುಗೆ ಮೇವು ಹಾಕೋ ಶಿಕ್ಷೆ !

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಮೇವು ಹಗರಣದ ಎಲ್ಲಾ 16 ಆರೋಪಿಗಳಿಗೆ ಜೈಲು ಆವರಣದಲ್ಲಿ ಜಾನುವಾರುಗಳ ಪಾಲನೆ ಮಾಡುವ ಕೆಲಸ ನೀಡುವಂತೆ ಸೋಮವಾರ ಸೂಚಿಸಿದ್ದಾರೆ ಎನ್ನಲಾಗಿದೆ.  

Last Updated : Jan 9, 2018, 02:03 PM IST
ಮೇವು ನುಂಗಿದ ಲಾಲುಗೆ ಮೇವು ಹಾಕೋ ಶಿಕ್ಷೆ ! title=

ಜಾಲನ್: ಮೇವು ಹಗರಣದಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ 93 ರೂ. ದಿನಗೂಲಿಯಂತೆ ಜೈಲಿನ ಉದ್ಯಾನದಲ್ಲಿ ಕೆಲಸ ನೀಡಲಾಗುವುದು ಎಂದು ವರದಿಗಳು ತಿಳಿಸಿದ್ದರೆ, ಮತ್ತೆ ಕೆಲವು ವರದಿಗಳು ನ್ಯಾಯಾಧೀಶರು ಜಾನುವಾರುಗಳ ಪೋಷಣೆ ಕೆಲಸವನ್ನು ನೀಡಬೇಕೆಂದು ಸೂಚಿಸಿದ್ದಾರೆ ಎಂದಿದ್ದವು.  

ಆದರೀಗ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಮೇವು ಹಗರಣದ ಎಲ್ಲಾ 16 ಆರೋಪಿಗಳಿಗೆ ಜೈಲು ಆವರಣದಲ್ಲಿ ಜಾನುವಾರುಗಳ ಪಾಲನೆ ಮಾಡುವ ಕೆಲಸ ನೀಡುವಂತೆ ಸೋಮವಾರ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಘೋಷಣೆ ಮಾಡಿದ ಸಿಂಗ್ ಅವರು, "ಮೇವು ಮತ್ತು ಜಾನುವಾರುಗಳ ಔಷಧಿಗಳ ಬಗ್ಗೆ ಹೆಚ್ಚಿನ ಜ್ಞಾನ ಇರುವ ಈ ಅಪರಾಧಿಗಳಿಗೆ ಗೋ ಪಾಲನೆ ಕೆಲಸ ಉತ್ತಮ ಆಯ್ಕೆ" ಎಂದು ಹೇಳಿದ್ದಾರೆ. 

ಜನವರಿ 6 ರಂದು ವಿಶೇಷ ಸಿಬಿಐ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3.5 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿದೆ. 1991 ಮತ್ತು 1994 ರ ನಡುವೆ ದಿಯೋಘರ್ ಖಜಾನೆಯಿಂದ 89 ಲಕ್ಷಕ್ಕೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲುಗೆ ಶಿಕ್ಷೆ ವಿಧಿಸಲಾಗಿದೆ. ಒಂದು ವೇಳೆ ಅಪರಾಧಿಗಳು ದಂಡ ಕಟ್ಟಲು ವಿಫಲವಾದರೆ ಅವರ ಜೈಲು ಶಿಕ್ಷೆಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದರು. 

ಆದರೆ ಜೈಲು ಅಧಿಕಾರಿಗಳು ಲಾಲುಗೆ ನಿಯೋಜಿಸಲಾದ ಕಾರ್ಯದವನ್ನು ಬಹಿರಂಗಪಡಿಸಿಲ್ಲ. "ಜೈಲಿನ ಅಗತ್ಯದ ಪ್ರಕಾರ ಅಪರಾಧಿಗಳಿಗೆ ಉದ್ಯೋಗವನ್ನು ನಿಗದಿಪಡಿಸಲಾಗುತ್ತದೆಯೇ ಹೊರತು ಯಾರ ಇಚ್ಚೆಯಂತೆಯೂ ಅಲ್ಲ" ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. 

ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರೀ ಖಜಾನೆಯಿಂದ 37.70 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆಯಾದ ಅನುದಾನದ ಹಣವನ್ನು ಮೂಲ ಉದ್ದೇಶಕ್ಕೆ ಬಳಸಿಕೊಳ್ಳದೇ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಸೇರಿದಂತೆ ಸರ್ಕಾರದ ಇತರ ಪ್ರಭಾವಿಗಳು ಆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. 

Trending News