ಬೆಂಗಳೂರು: ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಬಡವರಿಗೆ ಆಹಾರ ಪದಾರ್ಥಗಳನ್ನು ಮಂಗಳವಾರ ವಿತರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರು ಅಸಂಘಟಿತ ಕಾರ್ಮಿಕ ವಲಯದವರ ವಿಚಾರವಾಗಿ ಈವರೆಗೂ ಒಂದೇ ಒಂದು ಮಾತನ್ನೂ ಆಡಿಲ್ಲ.  ಲಾಕ್​ಡೌನ್ (Lockdown) ನಿಂದ ವಾಹನ ಚಾಲಕರು, ಕ್ಷೌರಿಕರು, ಬಟ್ಟೆ ಹೊಲಿಯುವವರು, ಆಟೋ ಚಾಲಕರು, ಹೊಟೇಲ್ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ವೃತ್ತಿಪರ ಕಾರ್ಮಿಕರಿಗೆ ಆದಾಯ ಇಲ್ಲದಂತಾಗಿದೆ. ಹೀಗಾಗಿ ಇವರಿಗೆ ತಿಂಗಳಿಗೆ 10 ಸಾವಿರದಂತೆ ಪ್ರೋತ್ಸಾಹ ಧನ ನೀಡಬೇಕು ಎಂದು ನಾನು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದೇನೆ ಎಂದರು.


ರೈತರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಪಕ್ಷಗಳ ಸಭೆ ಕರೆದ ಸಿದ್ದರಾಮಯ್ಯ


ಇದೇ ಸಂದರ್ಭದಲ್ಲಿ ಎಲ್ಲಾ ವಿಮಾ ಕಂಪನಿಗಳು ಈ ವರ್ಗದ ಜನರು ಕಟ್ಟಬೇಕಿರುವ ವಾಹನ ಸೇರಿದಂತೆ ಇತರೆ ವಿಮಾ ಕಂತುಗಳನ್ನು ಕೆಲವು ತಿಂಗಳ ಕಾಲ ಮುಂದೂಡಬೇಕು ಎಂದು ಆಗ್ರಹಿಸುತ್ತೇನೆ. ಕಳೆದ ಒಂದು ತಿಂಗಳಿಂದ ಚಾಲಕರು ತಮ್ಮ ಆಟೋ, ಟ್ಯಾಕ್ಸಿ ಓಡಿಸಿಲ್ಲ, ಇತರೆ ವೃತ್ತಿಪರ ನೌಕರರು ತಮ್ಮ ಅಂಗಡಿ ಮುಂಗಟ್ಟು ತೆರೆದಿಲ್ಲ. ಹೀಗಾಗಿ ಈ ವರ್ಗದ ಕಾರ್ಮಿಕರಿಗೆ ತಮ್ಮ ಸಂಪಾದನೆ ಇಲ್ಲದಂತಾಗಿದೆ. ಇದರಲ್ಲಿ ಅವರ ತಪ್ಪೇನು ಇಲ್ಲ. ಸರ್ಕಾರ ಆದೇಶವನ್ನು ಪಾಲಿಸಿದ್ದಾರೆ. ಹೀಗಾಗಿ ವಾಹನ ಸೇರಿದಂತೆ ಈ ಅಸಂಘಟಿತ ಕಾರ್ಮಿಕರು ಅವಲಂಬಿತವಾಗಿರುವ ವಾಹನ ಯಂತ್ರೋಪಕರಣ, ಆಸ್ತಿಗಳ ಮೇಲಿನ ತೆರಿಗೆಗೆ ವಿನಾಯ್ತಿ ನೀಡಬೇಕು. ಮುಂದಿನ 3-6 ತಿಂಗಳ ಕಾಲ ಇವುಗಳನ್ನು ಮನ್ನಾ ಮಾಡಬೇಕು. ಮನ್ನಾ ಮಾಡಲು ಸಾಧ್ಯವಾಗದಿದ್ದರು ಇವುಗಳ ಕಂತನ್ನು ಕಟ್ಟಲು ವಿನಾಯ್ತಿ ನೀಡಿ ಮುಂದೂಡಬೇಕು ಎಂದು ಅಭಿಪ್ರಾಯಪಟ್ಟರು.


ಮಲ್ಯ, ಮೆಹುಲ್‌ ಚೋಕ್ಸಿ, ಜುಂಜುನ್‌ವಾಲ, ಬಾಬಾ ರಾಮದೇವ ಸಾಲ ಮನ್ನಾಕ್ಕೆ ಕುಮಾರಸ್ವಾಮಿ ಕಿಡಿ


ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ಈ ವರ್ಗದ ಜನರಿಗೆ ಕಿರುಕುಳ ನೀಡುತ್ತಿವೆ. ಈ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ರೀತಿಯ ನಿರ್ದೇಶನಗಳು ಬ್ಯಾಂಕುಗಳಿಗೆ ರವಾನೆಯಾಗಿಲ್ಲ. ಕಾನೂನಿನ ವ್ಯಾಪ್ತಿಯಲ್ಲೇ ಈ ವರ್ಗದ ಜನರಿಗೆ ನೆರವು ನೀಡಬೇಕಾಗಿ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು.


ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮಕೈಗೊಳ್ಳದಿದ್ದರೆ ಬ್ಯಾಂಕುಗಳು, ಸಾಲಗಾರರ ಕಿರುಕುಳ ತಾಳಲಾರದೇ ಬಡ ಜನರು ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ. ಈ ವರ್ಗದ ಜನರು ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ವರ್ಗದ ಜನರ ಬೆಂಬಲಕ್ಕೆ ನಿಲ್ಲುತ್ತದೆ. ಈ ವಿಚಾರವಾಗಿ ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ನಮ್ಮ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಸಲಹೆ, ಬೇಡಿಕೆಗಳನ್ನು ನೀಡಲಾಗಿದೆ. ಆದರೆ ಈವರೆಗೂ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.