ಮಲ್ಯ, ಮೆಹುಲ್‌ ಚೋಕ್ಸಿ, ಜುಂಜುನ್‌ವಾಲ, ಬಾಬಾ ರಾಮದೇವ ಸಾಲ ಮನ್ನಾಕ್ಕೆ ಕುಮಾರಸ್ವಾಮಿ ಕಿಡಿ

ಲಾಕ್‌ಡೌನ್‌ನಿಂದಾಗಿ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ, ಲಕ್ಷಾಂತರ ಜನರ ಉದ್ಯೋಗ ನಷ್ಟವಾಗಿದೆ, ಸಂಬಳವಿಲ್ಲದೆ ಅದೆಷ್ಟೋ ಕುಟುಂಬಗಳು ಪರಿತಪಿಸುತ್ತಿವೆ. ಕೆಲವರು ಆಹಾರವಿಲ್ಲದೇ, ಇನ್ನು ಕೆಲವರು ದೂರದೂರುಗಳಿಗೆ ನಡೆದು ಕೊನೆಯುಸಿರೆಳೆದಿದ್ದಾರೆ' ಎಂದು ಎಚ್.ಡಿ. ಕುಮಾರಸ್ವಾಮಿ ಗಮನಸೆಳೆದಿದ್ದಾರೆ.

Last Updated : Apr 29, 2020, 11:14 AM IST
ಮಲ್ಯ, ಮೆಹುಲ್‌ ಚೋಕ್ಸಿ, ಜುಂಜುನ್‌ವಾಲ, ಬಾಬಾ ರಾಮದೇವ ಸಾಲ ಮನ್ನಾಕ್ಕೆ ಕುಮಾರಸ್ವಾಮಿ ಕಿಡಿ title=

ಬೆಂಗಳೂರು: ಇಷ್ಟು ದಿನ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದ ಮಾಜಿ ಮುಖ್ಯಮಂತ್ರಿ  ಎಚ್‌.ಡಿ. ಕುಮಾರಸ್ವಾಮಿ (HD Kumaraswamy)  ಈಗ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ವ್ಯಂಗಮಾಡಿ ತರಾಟೆಗೆ ತಗೆದುಕೊಂಡಿದ್ದಾರೆ.

ತಮ್ಮ ಮೊದಲ ಟ್ವೀಟ್ ನಲ್ಲಿ 'ಸಂಕಷ್ಟದಲ್ಲಿರುವವರಿಗಾಗಿ(?) ಕೇಂದ್ರ ಸರ್ಕಾರ ಮರುಗಿದೆ! ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಧಾರಾಳ ನೆರವು ನೀಡಿದೆ! ಈ ಕಷ್ಟಕಾಲದಲ್ಲೂ ಮಲ್ಯ, ಮೆಹುಲ್‌ ಚೋಕ್ಸಿ, ಸಂಜಯ್‌ ಜುಂಜುನ್‌ವಾಲ, ಬಾಬಾ ರಾಮದೇವ ಅಂತಹ ಉದ್ದೇಶಪೂರ್ವಕ ಸುಸ್ತಿದಾರರ 68 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಮ್ಯುಚುವಲ್‌ ಫಂಡ್‌ ಉದ್ದಿಮೆದಾರರಿಗೆ ₹50 ಸಾವಿರ ಕೋಟಿ ನೆರವು ನೀಡಲಾಗಿದೆ' ಎಂದಿದ್ದಾರೆ.

ನಂತರ ಇನ್ನೊಂದು ಟ್ವೀಟ್ ನಲ್ಲಿ 'ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್  ನೀಡಬೇಕೆಂಬ  ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಬೇಡಿಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದೆ. 'ನ ಖಾವುಂಗಾ, ನಾ ಖಾನೆ ದುಂಗಾ'  ಎಂದಿದ್ದ ಪ್ರಧಾನಿ  ಉದ್ದಿಮೆದಾರರ ಹಿತ ರಕ್ಷಣೆಗೆ ಮಾತ್ರ ಮುಂದಾಗಿರುವುದು ಸರಿಯೇ?' ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ 'ಲಾಕ್‌ಡೌನ್‌ನಿಂದಾಗಿ ರೈತರು ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ, ಲಕ್ಷಾಂತರ ಜನರ ಉದ್ಯೋಗ ನಷ್ಟವಾಗಿದೆ, ಸಂಬಳವಿಲ್ಲದೆ ಅದೆಷ್ಟೋ ಕುಟುಂಬಗಳು ಪರಿತಪಿಸುತ್ತಿವೆ. ಕೆಲವರು ಆಹಾರವಿಲ್ಲದೇ, ಇನ್ನು ಕೆಲವರು ದೂರದೂರುಗಳಿಗೆ ನಡೆದು ಕೊನೆಯುಸಿರೆಳೆದಿದ್ದಾರೆ' ಎಂದು ಗಮನಸೆಳೆದಿದ್ದಾರೆ.

ಮಗದೊಂದು ಟ್ವೀಟ್ ನಲ್ಲಿ 'ಈ ಸಂದರ್ಭದಲ್ಲಿ ಸರ್ಕಾರಕ್ಕೆ ನೆನಪಾಗಬೇಕಿದ್ದು ನಿತ್ಯ ದುಡಿಮೆಯ ಶ್ರಮಿಕ ವರ್ಗ. ರೈತರು, ಅಸಂಘಟಿತ ಕಾರ್ಮಿಕರು  ಮತ್ತು ಬಡವರು. ಆದರೆ ಕೇಂದ್ರ ಸರ್ಕಾರಕ್ಕೆ ಕಂಡವರು ಅತಿ ಶ್ರೀಮಂತರು' ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

ಹೀಗಿ ಟ್ವೀಟ್ ಸರಣಿ ಮುಂದುವರೆಸಿ 'ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದಾಗ ಅವರ ಸಾಲ ಮನ್ನಾ ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ರಾಜ್ಯಗಳೂ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದವು. ಆದರೆ, ಆಗ ರೈತರತ್ತ ತಿರುಗಿಯೂ ನೋಡದ ಕೇಂದ್ರ ಈಗ ಮಲ್ಯ, ಚೋಕ್ಸಿಯಂಥವರ ಸಾಲ ಮನ್ನಾ ಮಾಡಿದೆ. ರೈತನಿಗಿಂತ ದೇಶಕ್ಕೆ ದ್ರೋಹ ಬಗೆದವರೇ ಕೇಂದ್ರಕ್ಕೆ ಮುಖ್ಯವಾದರೇ? ಇದೇನಾ ದೇಶ ಪ್ರೇಮ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬಡವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ಕೆ ಹೆಚ್‌ಡಿಕೆ ಕುಟುಂಬದಿಂದ ಚಾಲನೆ

ಅದಾದ ಮೇಲೆ 'ಆರ್ಥಿಕ ಚಟುವಟಿಕೆಗಳಿಲ್ಲದೇ, ಅದಾಯವಿಲ್ಲದೇ ಸೊರಗುತ್ತಿರುವ ಈ ವೇಳೆ ರಾಜ್ಯಗಳು ಅನುದಾನ ಕೇಳುತ್ತಿರುವ ಹೊತ್ತಿನಲ್ಲಿ ಮ್ಯುಚುವಲ್‌ ಫಂಡ್‌ ಉದ್ದಿಮೆಗಳ ನೆರವಿಗೆ ಓಡೋಡಿ ಹೋಗುವಂತಹ ತುರ್ತು ಈಗೇನಿತ್ತು? ಸರ್ಕಾರ ಮೊದಲು ಒಕ್ಕೂಟ, ಅದರೊಳಗಿನ ನಾಗರಿಕರ ಹಿತ ಕಾಪಾಡಬೇಕಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.

ಬಳಿಕ 'ಇಡೀ ದೇಶವೇ ಆರ್ಥಿಕ ಸಂಕಷ್ಟದಲ್ಲಿರುವಾಗ ದೇಶದ ಹಿತ ನೋಡದೇ, ಮ್ಯುಚುವಲ್‌ ಫಂಡ್‌ಗಳ ಹಿತ ಕಾಪಾಡಲು ಆರ್‌ಬಿಐ ಮೂಲಕ ₹50 ಸಾವಿರ ಕೋಟಿಗಳನ್ನು ಬಿಡುಗಡೆ ಮಾಡಿಸುತ್ತಿರುವ ಸರ್ಕಾರದ ನಡೆ ಹಿಂದೆ ಯಾರ ಹಿತ ಅಡಗಿದೆ? ಸಾಮಾನ್ಯ ಜನರದ್ದೋ ಅಥವಾ ಉದ್ದೇಶಪೂರ್ವಕ ಸುಸ್ತಿದಾರ ಉದ್ಯಮಿಗಳದ್ದೋ?' ಎಂದು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊನ್ನೆ ಭಾರತೀಯ ರಿಸರ್ವ್ ಬ್ಯಾಂಕ್ ನೀತಿಗಳ ಬಗ್ಗೆಯೂ ಕುಮಾರಸ್ವಾಮಿ ಇದೇ ರೀತಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

Trending News