Buxar Train Accident: ಹಳಿತಪ್ಪಿದ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ 21 ಬೋಗಿಗಳು, ನಾಲ್ಕು ಸಾವು, ಹಲವರಿಗೆ ಗಾಯ

Buxar Train Accident: ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕಾಮಾಖ್ಯಕ್ಕೆ ತೆರಳುತ್ತಿದ್ದ  ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ 21 ಬೋಗಿಗಳು ಹಳಿತಪ್ಪಿದ್ದು, ಈ ದುರ್ಘಟನೆಯಲ್ಲಿ ಇದುವರೆಗೂ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

Written by - Yashaswini V | Last Updated : Oct 12, 2023, 07:51 AM IST
  • ನವದೆಹಲಿಯಿಂದ ಕಾಮಾಖ್ಯಕ್ಕೆ ತೆರಳುತ್ತಿದ್ದ ಈಶಾನ್ಯ ಎಕ್ಸ್‌ಪ್ರೆಸ್‌ನ ಸುಮಾರು 21 ಬೋಗಿಗಳು ಹಳಿತಪ್ಪಿವೆ.
  • ಬಕ್ಸರ್ ಜಂಕ್ಷನ್‌ನಿಂದ ರೈಲು ಹೊರಡುವ ಸ್ವಲ್ಪ ಸಮಯದ ನಂತರ ರಘುನಾಥಪುರ ಪೂರ್ವ ಗುಮ್ಟಿ ಬಳಿ ಅಪಘಾತ ಸಂಭವಿಸಿದೆ.
  • ರಾತ್ರಿ 9:30 ರಿಂದ 10 ಗಂಟೆಯ ನಡುವೆ ಈ ಅವಘಡ ಸಂಭವಿಸಿದೆ.
Buxar Train Accident: ಹಳಿತಪ್ಪಿದ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ 21 ಬೋಗಿಗಳು, ನಾಲ್ಕು ಸಾವು, ಹಲವರಿಗೆ ಗಾಯ  title=

Buxar Train Accident: ನವದೆಹಲಿಯ ಆನಂದ್ ವಿಹಾರ್ ಟರ್ಮಿನಲ್ನಿಂದ ಕಾಮಾಖ್ಯಕ್ಕೆ ತೆರಳುತ್ತಿದ್ದ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್ ರಾತ್ರಿ 10ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ.  ಬಕ್ಸರ್ ಜಂಕ್ಷನ್‌ನಿಂದ ಹೊರಟ ಕೆಲ ಹೊತ್ತಿನಲ್ಲೇ ರಘುನಾಥಪುರ ಪೂರ್ವ ಗುಮ್ಟಿ ಬಳಿ  ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ 21 ಬೋಗಿಗಳು ಹಳಿತಪ್ಪಿದ್ದು, ಈ ಪೈಕಿ ಎರಡು ಬೋಗಿಗಳು ಪಲ್ಟಿಯಾಗಿವೆ. ಒಂದು ಬೋಗಿ ಹಳಿತಪ್ಪಿ ಇನ್ನೊಂದು ಬೋಗಿಗೆ ಡಿಕ್ಕಿ ಹೊಡೆದು ಬದಿಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಇದುವರೆಗೂ  ನಾಲ್ಕು ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಲಭ್ಯವಿರುವ ಮಾಹಿತಿಯ ಪ್ರಕಾರ, 12506 ಡೌನ್ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್ ಬುಧವಾರ ತಡರಾತ್ರಿ ದಾನಪುರ-ಬಕ್ಸರ್ ರೈಲ್ವೆ ವಿಭಾಗದ ರಘುನಾಥಪುರ ರೈಲು ನಿಲ್ದಾಣದ ಬಳಿ ಹಳಿತಪ್ಪಿ ಅಪಘಾತಕ್ಕೀಡಾಗಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ  ದುಮ್ರಾನ್ ಎಸ್‌ಡಿಒ ಕುಮಾರ್ ಪಂಕಜ್ ಮತ್ತು ಬ್ರಹ್ಮಪುರ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರೈಲ್ವೆ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ- ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಅಪಘಾತದಲ್ಲಿ ಗಾಯಗೊಂಡ ಸುಮಾರು 100 ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಪೈಕಿ 20 ಜನರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಾಟ್ನಾ ಏಮ್ಸ್‌ಗೆ ಕಳುಹಿಸಲಾಗಿದೆ. ಹಾಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಬಕ್ಸರ್‌ನಿಂದ ಹೊರಟ ನಂತರ ಈಶಾನ್ಯ ಎಕ್ಸ್‌ಪ್ರೆಸ್ ಸಾಮಾನ್ಯ ವೇಗದಲ್ಲಿ ಚಲಿಸುತ್ತಿತ್ತು, ಎಂದರೆ ಈ ಸಂದರ್ಭದಲ್ಲಿ ರೈಲು ಗಂಟೆಗೆ 110 ರಿಂದ 120 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ರಘುನಾಥಪುರ ರೈಲು ನಿಲ್ದಾಣದ ಬಳಿ ಪಾಯಿಂಟ್ ಬದಲಾಯಿಸುವ ವೇಳೆ ಬಲವಾದ ಆಘಾತದೊಂದಿಗೆ ರೈಲು ಅಪಘಾತಕ್ಕೀಡಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. 

ಬಕ್ಸರ್‌ನಲ್ಲಿ ನಡೆದ ಈಶಾನ್ಯ ರೈಲು ಅಪಘಾತದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಹಲವೆಡೆ ರೈಲು ಹಾಲಿ ಮುರಿದಿರುವುದು ಪತ್ತೆಯಾಗಿದ್ದು, ಈ ಅಪಘಾತ ಒಂದು ಪಿತೂರಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಹಳಿಗಳಲ್ಲಿ ದೋಷವಿದ್ದಿದ್ದರಿಂದ ರೈಲು ಅಪಘಾತಕ್ಕೀಡಾಗಿದೆಯೇ? ಇಲ್ಲವೇ, ರೈಲು ಅಪಘಾತದ ಬಳಿಕ ಹಳಿಗಳಿಗೆ ಹಾನಿಯಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. 

ಇದನ್ನೂ ಓದಿ- ಶೀಘ್ರದಲ್ಲೇ ಬರಲಿದೆ ವಂದೇ ಭಾರತ್ ಸ್ಲೀಪರ್‌ ರೈಲು

ರೈಲು ಅಪಘಾತದ ಬಗ್ಗೆ ಟ್ವೀಟ್ ಮಾಡಿರುವ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ದುರ್ಘಟನೆ ಬಗ್ಗೆ ನಿರಂತರವಾಗಿ ನಿಗಾ ಇರಿಸಲಾಗಿದೆ. ಬಿಹಾರ ಎಸ್‌ಡಿಆರ್‌ಎಫ್ ತಂಡವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ  ಎಂದು ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News