85,000 ಕೋಟಿ ಸಾಲ ಎತ್ತಲು ಬಜೆಟ್ ಗಾತ್ರ ಹಿಗ್ಗಿಸಿದ ಸರ್ಕಾರ : ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ 

ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಬಜೆಟ್‌, ಹಿಂದೆ ಬಸವರಾಜ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Written by - Prashobh Devanahalli | Edited by - Krishna N K | Last Updated : Jul 7, 2023, 05:13 PM IST
  • ಕೇಂದ್ರದ ನರೇಂದ್ರ ಮೋದಿ ಮತ್ತು ಹಿಂದಿನ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್.
  • ಎಟಿಎಮ್‌ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಮತ್ತು ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್.
  • ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಜೆಟ್‌ ಕುರಿತು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ.
 85,000 ಕೋಟಿ ಸಾಲ ಎತ್ತಲು ಬಜೆಟ್ ಗಾತ್ರ ಹಿಗ್ಗಿಸಿದ ಸರ್ಕಾರ : ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್  title=

ಬೆಂಗಳೂರು: ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್. ಕೇಂದ್ರದ ನರೇಂದ್ರ ಮೋದಿ ಮತ್ತು ಹಿಂದಿನ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್. ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್ ಹಾಗೂ ಅನೇಕ ಎಟಿಎಮ್‌ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೆ ಬಸವರಾಜ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಅವರು ಕಟುವಾಗಿ ಟೀಕಿಸಿದರು.

ಇದನ್ನೂ ಓದಿ:`ಬಜೆಟ್ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ 'ಸಿದ್ದ' ಹಸ್ತ 

ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು. ಕೇಂದ್ರ ಸರ್ಕಾರ ಮತ್ತು ಹಿಂದಿನ ಸರಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನ ಉಲ್ಲಂಘಿಸಿದ್ದಾರೆ, ಸ್ವೆಚ್ಚಾಚಾರದಿಂದ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಹೇಳುವ ಬದಲು ಕೇವಲ ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಬಹಳಷ್ಟು ಕಡೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ಯೋಜನೆಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಈಗ 40 ಸಾವಿರ ಕೋಟಿ ರೂಪಾಯಿ  ಹೆಚ್ಚುವರಿ ಸೇರ್ಪಡೆ ಆಗಿದೆ. 1 ಲಕ್ಷ 75 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಹಣ ಇಡದೆ ಘೋಷಿಸಿದ್ದಾರೆ. 2013 -18 ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ದಾರೆ. ಎಲ್ಲಿ ಕಟ್ಟಿದ್ದಾರೆ, ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಅದನ್ನು ಎಲ್ಲಿಂದ ತರುತ್ತಾರೆ. ಈಗ ನೋಡಿದರೆ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಅಗತ್ಯ ಇತ್ತೆ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಮೊದಲ ಬಜೆಟ್ ನಲ್ಲೇ ಆರ್ಥಿಕ ಶಿಸ್ತಿಗೆ ತಿಲಾಂಜಲಿ;-ಡಾ.ಸುಧಾಕರ್ ಟೀಕೆ

ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್ ನಲ್ಲಿ ಎರಡೂವರೆ ಲಕ್ಷ ಕೋಟಿ ರೆವಿನ್ಯೂ ಎಕ್ಸ್ ಪೆಂಡಿಚರ್, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. ಅದಾದ ಮೇಲೆ 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು? ಇವರು ನೋಡಿದರೆ ಹಿಂದಿನ ಸರಕಾರ ಆರ್ಥಿಕ ಶಿಸ್ತನ್ನ ಹಾಳು ಮಾಡಿದೆ ಬಜೆಟ್ ಉದ್ದಕ್ಕೂ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ಜನರು ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನತೆಯನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲ ಹೊರೆ ಹೊರೆಸುತ್ತಿದ್ದಾರೆ. ಇಷ್ಟೋಂದು ಸಾಲ ಏಕೆ ಮಾಡ್ತೀದೀರಿ. ಅದಕ್ಕೆ ಕಾರಣ ಕೊಡಿ ಎಂದು ಅವರು ಒತ್ತಾಯ ಮಾಡಿದರು.

ಇದನ್ನೂ ಓದಿ:

ಈ ಬಜೆಟ್ಟಿನಲ್ಲಿ ದುಡಿಯುವ ಜನರ ಕೈಗೆ ಸ್ವಾವಲಂಭಿಯಾಗಲು, ಅವರು ಬದಕಲು ದೀರ್ಘಕಾಲೀನ ಯೋಜನೆ ಏನು? ಈ ಪ್ರಶ್ನೆ ಹಾಕಿಕೊಂಡರೆ ಉತ್ತರ ಶೂನ್ಯ ಎಂದ ಅವರು; ಇವರ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ, ಇನ್ನೂ ಎರಡು ಜ್ಯೋತಿ ಕೊಡಿ. ನಮದ್ದೇನು ತಕರಾರಿಲ್ಲ. ವರ್ಷಕ್ಕೆ 50 ರಿಂದ 60 ಸಾವಿರ ವೆಚ್ಚಾಗಲಿದೆ. ಇದೊಂದೇ ಈ ಬಜೆಟ್ ನಲ್ಲಿ ಇರೊದು. ಆದರೆ ಯಾವುದಕ್ಕೂ ಈ ಬಜೆಟ್ ನಲ್ಲಿ ಹಣ ಇಟ್ಟಿಲ್ಲ. ಇದು ಕೇವಲ ಕೇಂದ್ರ ಸರ್ಕಾರ- ಹಿಂದಿನ ಸರ್ಕಾರವನ್ನ ದೂಷಣೆ ಮಾಡುವ ಬಜೆಟ್ ಅಷ್ಟೇ. ಇದರಲ್ಲಿ ಏನೂ ಇಲ್ಲ ಎಂದು ದೂರಿದರು.

ನೀರಾವರಿ, ಕೃಷಿಗೆ, ಜನರ ಬದುಕು ಕಟ್ಟಲು, ಜನರು  ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಜೀವನ ಮಾಡಲು ಈ ಬಜೆಟ್ ಕೊಟ್ಟ ದೂರದೃಷ್ಟಿ ಏನು? ಇದು ನನ್ನ ಪ್ರಶ್ನೆಯಾಗಿದೆ. ಆದಾಯ ಹೆಚ್ಚಿಸಲು ಅಬಕಾರಿ ಇಲಾಖೆ ಒಂದನ್ನೇ ನೆಚ್ಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಹಣ ಕೊಡಲು ಹೊರಟ್ಟಿದ್ದಾರಲ್ಲ ಇವರು, ಆ ದುಡ್ಡು ಇದಕ್ಕೆ ಹೋಗುತ್ತೆ. ಅನ್ನಭಾಗ್ಯಕ್ಕೆ ಕೊಡುವ ಹಣವನ್ನು ಅಬಕಾರಿ ಮೂಲಕ ಸುಲಿಗೆ ಮಾಡಿಕೊಳ್ಳಲು ಈ ಬಜೆಟ್ ಹುನ್ನಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆರೋಪ ಮಾಡಿದರು.

ಇದನ್ನೂ ಓದಿ: ನಗರಾಭಿವೃದ್ದಿಗೆ ಬಜೆಟ್ ನಲ್ಲಿ ಸಿದ್ದು ಕೊಟ್ಟ ಲೆಕ್ಕವೇನು?

ಯಾರೋ ಒಬ್ಬರ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ. ಆತ ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ತಾನೊ.. ಇನ್ನೆಲ್ಲಿ ತಗೊಂಡು ಹೋಗ್ತಾನೊ ಗೊತ್ತಿಲ್ಲ. ಒಂದು ಕಡೆ ಇವರೇ ಬೆಳೆಗೆ 7 ಗಂಟೆಗೆ ಮದ್ಯದ ಅಂಗಡಿ ತೆಗೆಸುತ್ತಾರೆ. ಬೆಳಗ್ಗೆ 7 ಗಂಟೆಗೆ ಒಂದು ರೇಟು, ರಾತ್ರಿ 10 ಗಂಟೆಗೆ ಒಂದು ರೇಟು ಇಟ್ಟಿದ್ದಾರಲ್ಲ?? ಹೀಗೆ ಕಿತ್ತುಕೊಳ್ಳುವ ಹಣ ಎಲ್ಲಿಗೆ ಹೋಗುತ್ತದೆ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ತುಕೊಳ್ಳುವುದಾ ಆರ್ಥಿಕ ಶಿಸ್ತು ಎಂದರೆ ಇದೇನಾ ಎಂದು ಅವರು ಪ್ರಶ್ನಿಸಿದರು.

ಒಂದು ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಆನ್ ಲೈನ್ ಗೇಮ್ ನಿಂದ ಒಬ್ಬ 65 ಲಕ್ಷ ರೂಪಾಯಿ ಕಳೆದುಕೊಂಡು ಅಷ್ಟೂ ಹಣವನ್ನು ಸಾಲ ಮಾಡಿಕೊಂಡಿದ್ದಾರೆ. ಈ ಅನ್ನಭಾಗ್ಯ ಹಣ ಇದಕ್ಕೆ ಹೋಗುತ್ತೊ ಏನೋ? ಯೋಜನೆ ಮಾಡುವುದು ದೊಡ್ಡದಲ್ಲ, ಅದನ್ನು ಹೇಗೆ ಕಾರ್ಯಗತ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಅದಕ್ಕೊಂದು ನಿರ್ದಿಷ್ಟ ದೂರದೃಷ್ಟಿ ಬೇಡವೇ? ಎಂದು ಅವರು ತಿಳಿಸಿದರು.

ಈ ದಾಖಲೆಯ ಬಜೆಟ್ ಮಂಡನೆ ಮಾಡಿದವರ ಎಲ್ಲಾ ಬಜೆಟ್ ಗಳನ್ನು ಅಧ್ಯಯನ ಮಾಡುತ್ತಿದ್ದೇನೆ. 1995ರಿಂದ ಇವರು ಮಂಡಿಸಿದ ಎಲ್ಲಾ 13 ಬಜೆಟ್ ಗಳನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇಲ್ಲಿದೆ ನೋಡಿ ಬಜೆಟ್‌ ಕೊಡುಗೆ

ಕೇಂದ್ರ ಸರ್ಕಾರ- ರಾಜ್ಯ ಸರ್ಕಾರಗಳ ನಡುವೆ ಸುಂದರ ಬಾಂಧವ್ಯ ಇರಬೇಕು. ಸಂಪನ್ಮೂಲ, ಅನುದಾನ, ಅಭಿವೃದ್ಧಿ ಇತ್ಯಾದಿ ವಿಷಯಗಳಲ್ಲಿ ತಿಕ್ಕಾಟ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಪ್ರತಿಬಾರಿ ಅವರನ್ನು ದೂಷಣೆ ಮಾಡಿದರೆ ರಾಜ್ಯಕ್ಕೆ ನಷ್ಟ ತಪ್ಪಿದ್ದಲ್ಲ. ಕೇಂದ್ರವನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದರಿಂದ ನಮಗೆ ಲಾಭ ಜಾಸ್ತಿ ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.

ಅಂಥ ಸಾಮರಸ್ಯದ ಸಂದೇಶ ಸಾರದ ಇವರು, ಕರ್ನಾಟಕದ ಬಜೆಟ್ ಇಡೀ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತ ಕೊಚ್ಚಿಕೊಳ್ಳುತ್ತಿದ್ದಾರೆ. ಬಜೆಟ್ ಬುಕ್ ಜತೆ ಕೇಂದ್ರದ ಜತೆ ಜಗಳಕ್ಕೆ ನಿಲ್ಲುವುದಾ ಸಂದೇಶ? ಬಜೆಟ್ ಅಂದರೆ ಅದಕ್ಕೊಂದು ಘನತೆ ಇರುತ್ತದೆ. ಅದನ್ನು ಇವರು ಹಾಳು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ 77 ಸಾವಿರ ಕೋಟಿ ಸಾಲ ಮಾಡಿದ್ರು, ಇವರು 85 ಸಾವಿರ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ. ಹಿಂದಿನ ಬಜೆಟ್ ನ ಯೋಜನೆ ಎಲ್ಲ ಲೆಕ್ಕಾಚಾರ ತೆಗೆದ್ರು 59 ಕೋಟಿ ವ್ಯತ್ಯಾಸ ಆಗಿರಬಹುದು ಅಷ್ಟೇ. ಆರೋಗ್ಯ, ಶಿಕ್ಷಣ ಕ್ಷೇತ್ರ ಪ್ರಮುಖವಾದುವು, ಅದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಅದನ್ನು ಜನರಿಗೆ ತಲುಪಲು ನಾವು ಎಡವುತ್ತಿದ್ದೇವೆ. ಮೂಲಭೂತವಾಗಿ ಜನರಿಗೆ ಏನು ಬೇಕು ಎನ್ನುವ ಬಗ್ಗೆ ಬಜೆಟ್ ಪೂರ್ಣವಾಗಿ ಎಡವಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News