ಬೆಂಗಳೂರು: ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಬೆಲೆ ಏರಿಕೆ ವಿಚಾರವಾಗಿ ಮಂಗಳವಾರ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ರಾಜ್ಯದಲ್ಲಿ ತರಕಾರಿ ಬೆಲೆ ದುಪ್ಪಟ್ಟಾಗಿದೆ. ಚೀಲ ತುಂಬಾ ದುಡ್ಡು ಕೊಂಡೊಯ್ದು ಜೇಬು ತುಂಬಾ ತರಕಾರಿ ತರುವಂತಾಗಿದೆ. ಇವುಗಳನ್ನೆಲ್ಲ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಲಿನ ಮೇಲೆಯೂ ₹5 ಏರಿಕೆಯ ತೂಗುಗತ್ತಿ ನೇತಾಡಿಸಿದೆ. ಇವುಗಳ ನಡುವೆ ತರಾತುರಿಯಲ್ಲಿ ಸಭೆ ನಡೆಸಿ ನೀರಿಗೂ ದರ ಏರಿಸುವುದು ಹೇಗೆ ಎಂದು ನೋಡುತ್ತಿದೆ. ಭೂ ಕಂದಾಯ, ನೋಂದಣಿ ಶುಲ್ಕ ಹೀಗೆ ಎಲ್ಲಾ ವಿಭಾಗಗಳಲ್ಲೂ ಕರ ಏರಿಸಿ ಮತ್ತೂ ಸುಲಿಗೆ ಮಾಡುವುದು ಹೇಗೆ ಎಂದು ಕಾಂಗ್ರೆಸ್ ಯೋಚಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನುಡಿಗೆ ಅಚ್ಚುಕಟ್ಟಾಗಿ ಒಪ್ಪುವ ಈ ಸರ್ಕಾರವನ್ನು ಜನ #ATMSarkara ಎನ್ನುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Rajkaluve: ರಾಜಕಾಲುವೆ ಒತ್ತುವರಿ ಕುರಿತಂತೆ ಬೃಹತ್ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಆಗ್ರಹ!
‘ಅಕ್ಕಿ ಇಟ್ಟ ಕುಕ್ಕರ್ ಕೂಗುವ ಪ್ರತಿ ಸೀಟಿಯೂ ಎದೆ ಚುರ್ ಅನಿಸುವಂತೆ ಮಾಡುತ್ತಿದೆ. ಈಗಾಗಲೇ ಪ್ರತಿ ಕೆಜಿ ₹15ರ ವರೆಗೆ ಹೆಚ್ಚಾದ ಅಕ್ಕಿ ಬೆಲೆ ಕಾಂಗ್ರೆಸ್ ನೀಡಿದ ವಿದ್ಯುತ್ ಬೆಲೆ ಏರಿಕೆಯ ಶಾಕ್ನಿಂದಾಗಿ ಮುಂದಿನ ದಿನಗಳಲ್ಲಿ ಮತ್ತೂ ₹20 ಹೆಚ್ಚಾಗಲಿದೆ. ಬೇಳೆ ಕಾಳುಗಳ ಬೆಲೆ ಶೇ.40ರವರೆಗೆ ಹೆಚ್ಚಾಗಿದ್ದರೆ, ₹850ಕ್ಕೆ ಏರಿದ ಬ್ಯಾಡಗಿ ಮೆಣಸಿನ ರೇಟೇ ಕಣ್ಣಲ್ಲಿ ನೀರು ತರಿಸುತ್ತದೆ. ಜೀರಿಗೆ ಕಷಾಯವನ್ನಾದರೂ ಕುಡಿದು ತಂಪಾಗಿರೋಣವೆಂದರೆ ₹350 ಇದ್ದುದು ₹600ಕ್ಕೆ ಜಿಗಿದಿದೆ. ಟೊಮೆಟೊ ಕೂಡ ₹100ರ ಗಡಿ ದಾಟಿ ಯಾವ ತರಕಾರಿಯೂ ಕೊಳ್ಳಲಾರದ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.
‘ಮುಂಗಾರು ಅಸ್ತವ್ಯಸ್ತವಾಗುವ ಸೂಚನೆ ಸಿಕ್ಕಿ ಒಂದು ತಿಂಗಳೇ ಆಗಿದೆ. ಆದರೆ ಆ ಬಗ್ಗೆ ವಿಚಾರ ವಿಮರ್ಶೆ ಮಾಡಲೂ ಸಿದ್ದರಾಮಯ್ಯರ ಸರ್ಕಾರಕ್ಕೆ ಪುರುಸೊತ್ತಿಲ್ಲ. ತಮಗೆ ಕೊಡಲು ಸಾಧ್ಯವಾದ ಗ್ಯಾರಂಟಿ ಅಕ್ಕಿಯ ವಿಚಾರವನ್ನು ಕೇಂದ್ರ ಸರ್ಕಾರದ ತಲೆಗೆ ಕಟ್ಟುವುದು ಹೇಗೆ? ಅಕ್ರಮ ಗೋ ಹತ್ಯೆ ತಡೆಯುವವರನ್ನೇ ಒದ್ದು ಒಳಗೆ ಹಾಕುವುದು ಹೇಗೆ? ಖಾಸಗಿ ಹೋಟೆಲ್ನಲ್ಲಿ ಅಧಿಕಾರಗಳನ್ನು ಕೂರಿಸಿ ನಿಮ್ಮ ಏಜೆಂಟ್ ಜೊತೆ ಸಭೆ ನಡೆಸಿ ಕಮಿಷನ್ ಕೊಡುವುದು ಎಷ್ಟು-ಹೇಗೆ ಎಂಬೆಲ್ಲಾ ಲೆಕ್ಕಾಚಾರಗಳಲ್ಲೇ ಕಾಂಗ್ರೆಸ್ ಸರ್ಕಾರ ಮಗ್ನವಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಮೊಬೈಲ್, ಲ್ಯಾಪ್ಟಾಪ್ ಕಳ್ಳರು ಅಂದರ್
‘ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಈಗ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದ್ದಾರೆಂದು ಅನ್ವೇಷಣೆ ಮಾಡುವ ಅರ್ಧದಷ್ಟು ಸಮಯ ಬೆಲೆ ಏರಿಕೆಯ ವಿಮರ್ಶೆಗೆ ಇಟ್ಟಿದ್ದರೂ ಸಮಸ್ಯೆ ಕೊಂಚ ಮಟ್ಟಿಗೆ ತಹಬಂದಿಗೆ ಬರುತ್ತಿತ್ತು. ರಾಜ್ಯದಲ್ಲಿ ಬಿತ್ತನೆ ಕಾರ್ಯ ಶೇ.10ರಷ್ಟು ಮಾತ್ರವೇ ಆಗಿದೆ. ಶೇ.71ರಷ್ಟು ಮಳೆ ಕೊರತೆಯಾಗಿದೆ ಎಂದಾದರೆ ಅದೆಂಥ ಭೀಕರ ಪರಿಸ್ಥಿತಿ ಬಂದೊದಗಲಿದೆ ಎಂಬ ಕಿಂಚಿತ್ ಕಲ್ಪನೆಯಾದರೂ ನಿಮಗಿದೆಯೇ ಸಿದ್ದರಾಮಯ್ಯನವರೇ? ಬರ ಬಂದರೆ ಅದರ ಹೆಸರಲ್ಲಿ ಇನ್ನಷ್ಟು ಕಮಿಷನ್ ಹೊಡೆಯಬಹುದೆಂಬ ದೂರಾಲೋಚನೆ ಬಿಟ್ಟುಬಿಡಿ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ’ವೆಂದು ಬಿಜೆಪಿ ಎಚ್ಚರಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.