ಬೆಂಗಳೂರು: "ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತದೆ, ಇತಿಹಾಸ ನೆನಪಲ್ಲಿಟ್ಟುಕೊಳ್ಳುತ್ತದೆ. ಬಸವಣ್ಣ, ಅಂಬೇಡ್ಕರ್ ಅವರಿಂದ ಹಿಡಿದು ದೇವರಾಜ ಅರಸು ವರೆಗೆ ಎಲ್ಲರೂ ಇದನ್ನು ಅನುಭವಿಸಿದ್ದಾರೆ. ನಿಮ್ಮನ್ನು ಕೂಡಾ ಇತಿಹಾಸ ನೆನಪು ಮಾಡುತ್ತಾ ಇರುತ್ತೆ. ಬೇಸರ ಮಾಡ್ಕೊಬೇಡಿ ಸಾರ್’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಿದಾಗ ನನಗರಿವಿಲ್ಲದಂತೆ ದನಿ ಗದ್ಗದಿತವಾಗಿತ್ತು ಎಂದು ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನಮಟ್ಟು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿರುವ ಅವರು, ಐದು ವರ್ಷ ಎರಡು ದಿನಗಳ ನಂತರ ಇಂದು(ಬುಧವಾರ) ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಹೇಳುವುದು ಬಹಳಷ್ಟಿದೆ. ನನ್ನನ್ನು ಸ್ವಲ್ಪ ಸಮಾಧಾನಿಸಿಕೊಂಡು ಮುಂದಿನ ದಿನಗಳಲ್ಲಿ ಬರೆಯುತ್ತೇನೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.