ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಸ್ವಯಂ ಮಾನವ ಅಳಿಯುವಿಕೆ ಚಳುವಳಿ(Voluntary Human Extinction Movement) ಮಕ್ಕಳ ಸ್ವಾತಂತ್ರ್ಯ, ಆಂಟಿನಾಟಲಿಸಮ್, ಎಫಿಲಿಸಮ್ ವಿಷಯಗಳನ್ನು ಉತ್ತೇಜಿಸುವಲ್ಲಿ ಶ್ರಮಿಸಿದ ಕಾರ್ಯಕ್ಕಾಗಿ ಈಗ ಚೈಲ್ಡ್ ಫ್ರೀ ಇಂಡಿಯಾ ಸಂಘಟನೆ ಈಗ ಚೈಲ್ಡ್ ಫ್ರೀ ಗ್ರೂಪ್ ಆಫ್ ಇಯರ್ ಎನ್ನುವ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.
ಪ್ರತಿವರ್ಷ ಅಂತರಾಷ್ಟ್ರೀಯ ಮಗು ಮುಕ್ತ ದಿನವನ್ನಾಗಿ ಅಗಸ್ಟ್ 1 ಜಗತ್ತಿನಾಧ್ಯಂತ ಆಚರಿಸಲಾಗುತ್ತದೆ.ಈ ಹಿನ್ನಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಮಗು ಮುಕ್ತ ಆಂದೋಲನವನ್ನು ಭಾರತಕ್ಕೆ ವಿಸ್ತರಿಸುವಲ್ಲಿ ಶ್ರಮಿಸುತ್ತಿರುವ ಚೈಲ್ಡ್ ಪ್ರೀ ಇಂಡಿಯಾ ಗ್ರೂಪ್ ಗೆ ಈ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಹೆಸರುವಾಸಿಯಾಗಿದ್ದ ಇಂತಹ ಒಂದು ಚಳುವಳಿಯನ್ನು ಭಾರತದಲ್ಲಿ ಕಟ್ಟುವಲ್ಲಿ ಕನ್ನಡತಿಯೊಬ್ಬಳ ಪರಿಶ್ರಮವಿದೆ ಎನ್ನುವ ಸಂಗತಿ ನಿಮಗೆ ಅಚ್ಚರಿ ತರಿಸಬಹುದು. ಹೌದು, ಮೂಲತಃ ಇಂಜನಿಯರ್ ವಿದ್ಯಾಭ್ಯಾಸ ಮಾಡಿರುವ ಪ್ರತಿಮಾ ನಾಯಕ ಮೂಲತಃ ರಾಯಚೂರು ಜಿಲ್ಲೆಯವರು, ಈಗ ಇವರ ಪರಿಶ್ರಮದಿಂದಾಗಿ ಇಂತಹ ಚಳುವಳಿ ಭಾರತದಲ್ಲಿ ರೂಪುಗೊಳ್ಳಲು ಸಾಧ್ಯವಾಗಿದೆ.
ಈ ಹಿಂದೆ ಕಪ್ಪತ್ತಗುಡ್ಡದ ಪರಿಸರ ಸಂಬಂಧಿತ ಹೋರಾಟ, ಸ್ವರಾಜ್ ಅಭಿಯಾನ, ರೈತ ಚಳುವಳಿ, ಯುವಜನರ ಚಳುವಳಿ, ಹೀಗೆ ಹಲವಾರು ಸಾಮಾಜಿಕ ಆಂದೋಲನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರತಿಮಾ ನಾಯಕ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ನಿಯಂತ್ರಣಕ್ಕೆ ಹಾಗೂ ಪರಿಸರ ಸ್ನೇಹಿಯಾಗಿರುವ ಮಗು ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಪ್ರತಿಮಾ ನಾಯಕ ಫೆಬ್ರುವರಿ 10 ರಂದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಕ್ಕಳನ್ನು ಹೇರುವುದನ್ನು ನಿಲ್ಲಿಸಿ(Stop Making Babies) ಎನ್ನುವ ಶೀರ್ಷಿಕೆಯಡಿಯಲ್ಲಿ ಸಭೆಯನ್ನು ನಡೆಸುವ ಮೂಲಕ ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಮಹತ್ವದ ಆಂದೋಲನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಭೆ ಕೇವಲ ಭಾರತದಲ್ಲಿನ ಮಾಧ್ಯಮಗಳಷ್ಟೇ ಅಲ್ಲ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸಾಕಷ್ಟು ಸುದ್ದಿಯನ್ನು ಮಾಡಿತು. ಮಗು ಮುಕ್ತ ಭಾರತ ಹೋರಾಟದ ಸದಸ್ಯರಲ್ಲಿ ಒಬ್ಬರಾಗಿರುವ ರಾಫೆಲ್ ಸ್ಯಾಮುವಲ್ ಎನ್ನುವವರು ಒಂದು ಹೆಜ್ಜೆ ಮುಂದೆ ಹೋಗಿ ಜನ್ಮ ನೀಡಿದ ಪೋಷಕರ ವಿರುದ್ಧವೇ ಮೊಕ್ಕದ್ದಮೆ ದಾಖಲಿಸಲು ಹೋದ ಸುದ್ದಿಯಂತು ಬಿಬಿಸಿಯಲ್ಲಿಯೂ ಪ್ರಕಟವಾಗಿತ್ತು.ಈಗ ಚೈಲ್ಡ್ ಫ್ರೀ ಇಂಡಿಯಾ ಗ್ರೂಪ್ ಭಾಗವಾಗಿರುವ ಇವರು ಕೂಡ ಈಗ ಚೈಲ್ಡ್ ಫ್ರೀ ಗ್ರೂಪ್ ಆಫ್ ಇಯರ್ ಪ್ರಶಸ್ತಿಯ ಭಾಗವಾಗಿದ್ದಾರೆ.