ಮದುವೆ ಮಂಟಪದಲ್ಲಿ ಹಾರ ಬದಲಾಯಿಸುವಾಗಲೇ ಹೃದಯಾಘಾತ; 21 ವರ್ಷದ ವಧು ಸಾವು!

ವರದಿಯ ಪ್ರಕಾರ, ಶಿವಾಂಗಿ ಕಳೆದ 15-20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿ ಕಡಿಮೆ ರಕ್ತದೊತ್ತಡ ಹೊಂದಿದ್ದಳು.

Written by - Puttaraj K Alur | Last Updated : Dec 5, 2022, 06:49 AM IST
  • ಹಾರ ಬದಲಾಯಿಸಿಕೊಳ್ಳುವ ವೇಳೆ ಮದುವೆ ಮಂಟಪದಲ್ಲಿಯೇ ಕುಸಿದುಬಿದ್ದ 21 ವರ್ಷದ ವಧು
  • ಲಕ್ನೋದ ಮಲಿಹಾಬಾದ್‌ನಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಯುವತಿ
  • ಉತ್ತರಪ್ರದೇಶದಲ್ಲಿ ಮದುವೆ ಸಂಭ್ರಮದಲ್ಲಿದ್ದ ಯುವತಿ ಕುಟುಂಬಸ್ಥರಿಗೆ ದೊಡ್ಡ ಆಘಾತ
ಮದುವೆ ಮಂಟಪದಲ್ಲಿ ಹಾರ ಬದಲಾಯಿಸುವಾಗಲೇ ಹೃದಯಾಘಾತ; 21 ವರ್ಷದ ವಧು ಸಾವು! title=
ಹೃದಯಾಘಾತದಿಂದ 21 ವರ್ಷದ ವಧು ಸಾವು!

ಲಕ್ನೋ: ಮದುವೆ ಮಂಟಪದಲ್ಲಿ ಹಾರ ಬದಲಾಯಿಸುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು 21 ವರ್ಷದ ವಧು ಸಾವನ್ನಪ್ಪಿರುವ ಘಟನೆ ಲಕ್ನೋದ ಮಲಿಹಾಬಾದ್‌ನಲ್ಲಿ ನಡೆದಿದೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ.

ಡಿಸೆಂಬರ್ 3ರ ಶನಿವಾರದಂದು ಲಕ್ನೋದ ಮಲಿಹಾಬಾದ್‌ನಲ್ಲಿ ಮದುವೆ ನಡೆಯುತ್ತಿತ್ತು. ಈ ವೇಳೆ  21 ವರ್ಷದ ವಧು ವೇದಿಕೆಯಲ್ಲಿ ಹಾರ ವಿನಿಮಯದ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಪರಿಣಾಮ ಮದುವೆಯ ಸಂಭ್ರಮದಲ್ಲಿದ್ದವರೆಲ್ಲರಿಗೂ ಶಾಕ್ ಆಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜ್‌ಪಾಲ್ ಎಂಬುವರ ಪುತ್ರಿ 21 ವರ್ಷದ ಶಿವಾಂಗಿ ಶರ್ಮಾ ವಿವಾಹ ನಡೆಯುತ್ತಿತ್ತು. ವಧು ಮತ್ತು ವರರು ವೇದಿಕೆಯ ಮೇಲೆ ಹಾರ ವಿನಿಮಯ ಮಾಡಿಕೊಂಡ ಕೆಲವೇ ಸೆಕೆಂಡುಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಹಾರ ಬದಲಾಯಿಸಿಕೊಳ್ಳುವ ಫೋಟೋ ತೆಗೆಯಲು ಕಾಯುತ್ತಿದ್ದಾಗ ಶಿವಾಂಗಿ ಹಠಾತ್ ಕುಸಿದುಬಿದ್ದರು, ಇದರಿಂದ ಸ್ಥಳದಲ್ಲಿದ್ದವರಿಗೆ ಮತ್ತು ಕುಟುಂಬಸ್ಥರಿಗೆ ದೊಡ್ಡ ಶಾಕ್ ಆಗಿದೆ.

ಇದನ್ನೂ ಓದಿ: Mumbai Gang rape: ಮನೆಯೊಳಗೆ ನುಗ್ಗಿ ಮೂವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಹಠಾತ್ ಕುಸಿದುಬಿದ್ದ ಶಿವಾಂಗಿಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ, ನಂತರ ಟ್ರಾಮಾ ಸೆಂಟರ್‌ಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ. ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

15-20 ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ

ವರದಿಯ ಪ್ರಕಾರ, ಶಿವಾಂಗಿ ಕಳೆದ 15-20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿ ಕಡಿಮೆ ರಕ್ತದೊತ್ತಡ ಹೊಂದಿದ್ದಳು. ಆದರೆ ಮದುವೆಯ ಒಂದು ವಾರದ ಮೊದಲು ಆಕೆ ಚೇತರಿಸಿಕೊಂಡಿದ್ದಳು. ಆಕೆಗೆ ಮಲಿಹಾಬಾದ್ ಸಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಅಲ್ಲಿ ಆಕೆಯ ರಕ್ತದೊತ್ತಡ ಕಡಿಮೆಯಾಗಿದೆ ಎಂದು ತಿಳಿದುಬಂದಿತ್ತು. ಔಷಧಿ ನೀಡಿ ಬಿಪಿ ನಾರ್ಮಲ್ ಆದಾಗ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಮದುವೆ ವೇಳೆ ಕುಸಿದು ಬಿದ್ದು ಆಕೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಟ್ರಕ್: 6 ಮಂದಿ ಸಾವು, ಅನೇಕರ ಸ್ಥಿತಿ ಗಂಭೀರ!

ಶನಿವಾರವೇ ಕುಟುಂಬಸ್ಥರು ವಧುವಿನ ಅಂತ್ಯಸಂಸ್ಕಾರ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಘಟನೆಯ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದಿದ್ದು, ನಂತರ ಭಡ್ವಾನಾ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಲಾಗಿದೆ ಎಂದು ಮಲಿಹಾಬಾದ್ ಎಸ್‌ಎಚ್‌ಒ ಸುಭಾಸ್ ಚಂದ್ರ ಸರೋಜ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News