ಜಾರ್ಖಂಡ್‌ನ ಗರ್ಹ್ವಾದಲ್ಲಿ ಕಂದಕಕ್ಕೆ ಉರುಳಿದ ಬಸ್: 6 ಮೃತ, 33 ಮಂದಿಗೆ ಗಾಯ

ಇನ್ನೂ 12 ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನೊಳಗೆ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿವೆ.

Last Updated : Jun 25, 2019, 08:56 AM IST
ಜಾರ್ಖಂಡ್‌ನ ಗರ್ಹ್ವಾದಲ್ಲಿ ಕಂದಕಕ್ಕೆ ಉರುಳಿದ ಬಸ್: 6 ಮೃತ, 33 ಮಂದಿಗೆ ಗಾಯ title=

ರಾಂಚಿ: ಜಾರ್ಖಂಡ್‌ನ ಗರ್ಹ್ವಾ ಬಳಿಯ ಅನ್ನರಾಜ್ ಕಣಿವೆಯಲ್ಲಿ ಮಂಗಳವಾರ ಮುಂಜಾನೆ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಇನ್ನೂ 12 ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನೊಳಗೆ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.

ಛತ್ತೀಸ್‌ಗಢದಿಂದ ಗರ್ಹ್ವಾಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಬಸ್ ಕಂದಕಕ್ಕೆ ಉರಿಳಿದೆ ಎನ್ನಲಾಗಿದ್ದು, ಘಟನೆ ಕಂಡೊಡನೆ ಸ್ಥಳೀಯ ಜನರು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್‌ನೊಳಗೆ ಸಿಲುಕಿರುವ ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

44 ಜೀವಗಳನ್ನು ಬಲಿ ತೆಗೆದುಕೊಂಡ ಕುಲ್ಲು ಬಸ್ ಅಪಘಾತದ ಕಹಿ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ.
 

Trending News