ಇಂಡಿಯಾ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ

Last Updated : Oct 31, 2018, 06:46 PM IST
ಇಂಡಿಯಾ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ  title=
Photo:@INCIndia

"ಒಂದು ವೇಳೆ ದೇಶ ಸೇವೆಯ ಸಂದರ್ಭದಲ್ಲಿ ನಾನು ಸಾವನ್ನಪ್ಪಿದರೆ, ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಲು ನೆರವಾಗುತ್ತದೆ "

  -ಇಂದಿರಾ ಗಾಂಧಿ

ಇಂದಿರಾ ಗಾಂಧಿ ಈ ಮಾತನ್ನು ಹೇಳಿದ್ದು, ಅವರು ಹತ್ಯೆಯಾಗುವ ಎರಡು ದಿನಗಳ ಮುಂಚೆ, ಇದಾದ ನಂತರ ಅಕ್ಟೋಬರ್ 31,1984 ರಂದು ತನಗೆ ರಕ್ಷಣೆಗಿದ್ದ ಗಾರ್ಡ್ ನಿಂದಲೇ ಅವರು ಹತ್ಯೆಯಾಗಿದ್ದರು. ಇಂದು ಇಂತಹ ಧೈರ್ಯ ಮತ್ತು ದಿಟ್ಟತನ ತೋರಿದ್ದ ಮಹಿಳೆಯ ಸ್ಮರಣಾರ್ಥ ದಿನ, ಆದ್ದರಿಂದ ಈ ಸಂದರ್ಭದಲ್ಲಿ ಈ ವರ್ಣರಂಜಿತ ಧೀರ ಮಹಿಳೆಯ ವ್ಯಕ್ತಿತ್ವವನ್ನು ಸ್ಮರಿಸುವುದು ಅವಶ್ಯಕ.

1917ರ ನವಂಬರ್ 19 ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿಗಳಿಗೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಏಕೈಕ ಮಗುವಾಗಿ ಜನಿಸಿದ ಇಂದಿರಾ, ಮುಂದೆ ಇಂಡಿಯಾ ಎಂದರೆ ಇಂದಿರಾ ಎನ್ನುವಷ್ಟರ ಮಟ್ಟಿಗೆ 70-80 ರ ದಶಕದಲ್ಲಿ ಖ್ಯಾತಿಯನ್ನು ಹೊಂದಿದ್ದರು. ಅಷ್ಟರ ಮಟ್ಟಿಗೆ ಇಂದಿರಾಗಾಂಧಿ ಸ್ವಾತಂತ್ರೋತ್ತರ ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಅಪ್ಪ ನೆಹರು ನಂತರ ನಿಜ ಅರ್ಥದಲ್ಲಿ ಆಧುನಿಕ ಭಾರತದ ಸಾರಥಿಯಾಗಿದ್ದರು. ಆ ಕಾಲಘಟ್ಟದಲ್ಲಿ ಒಂದು ಕಡೆ ಪುರುಷರಿಂದಲೇ ತುಂಬಿ ಹೋಗಿದ್ದ ಕಾಂಗ್ರೆಸ್ಸ್ ಪಕ್ಷವನ್ನು ಮತ್ತು ಸರ್ಕಾರವನ್ನು ತಾವೊಬ್ಬರೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ರೀತಿ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು.

1966 ರಲ್ಲಿ ರಷ್ಯಾದ ತಾಷ್ಕೆಂಟ್ ನಲ್ಲಿ ಪ್ರಧಾನಿ ಶಾಸ್ತ್ರಿಯವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಹಿರಿಯ ಪಕ್ಷದ ನಾಯಕರಾದ ಅತುಲ್ಯ ಗೋಷ್, ಎಸ್ಕೆ.ಪಾಟೀಲ್,ನಿಜಲಿಂಗಪ್ಪ ಮತ್ತು ಬಿಜು ಪಟ್ನಾಯಕ್ ರಂಥಹ ಹಿರಿಯ ಘಟಾನುಘಟಿಗಳಿಂದ ಕೂಡಿದ ಕಾಂಗ್ರೆಸ್ಸ್(ಸಿಂಡಿಕೇಟ್) ಇಂದಿರಾ ಗಾಂಧಿಯನ್ನು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ನೇಮಕ ಮಾಡಿತು. ಇಂದಿರಾ ಪ್ರಾರಂಭದ ದಿನಗಳಲ್ಲಿ ಅಂದರೆ ಲಾಲ್ ಬಹುದೂರ್ ಶಾಸ್ತ್ರಿ ಸಂಪುಟದಲ್ಲಿ ವಾರ್ತಾ ಮಂತ್ರಿಯಾಗಿದ್ದ ಇಂದಿರಾ ಅದರ ನಿರ್ವಹಣೆಯ ವೈಪಲ್ಯದಿಂದ ಅವರನ್ನು ರಾಮ್ ಮನೋಹರ ಲೋಹಿಯರಂತಹ ರಾಜಕಾರಣಿಗಳಿಂದ 'ಗೂಂಗಿ ಗುಡಿಯಾ' ಅಂತಲೂ ಕರೆದಿದ್ದಿದೆ. ಆದರೆ ಕಾಲಾಂತರದಲ್ಲಿ ಇಂತಹ ಟೀಕೆಗಳನ್ನು ಶ್ರೀಮತಿ ಇಂದಿರಾ ತಮ್ಮ ಆಡಳಿತ ಶೈಲಿಯಿಂದಲೇ ಅಂತವರನ್ನು ಬಾಯಿ ಮುಚ್ಚಿಸಿದ್ದರು ಎನ್ನುವುದು ಈಗ ಇತಿಹಾಸ.    

ಮಹತ್ವದ ತಿರುವು ನೀಡಿದ 1967ರ ಚುನಾವಣೆ:

ಈ ಅವಧಿ ಇಂದಿರಾ ಗಾಂಧಿಗೆ ಜನಪ್ರಿಯತೆಯನ್ನು ಹೆಚ್ಚಿಸಿದ ಅವಧಿ ಎಂದು ಹೇಳಬಹುದು. ಚುನಾವಣಾ ವರ್ಷವಾಗಿದ್ದ 1967ರಲ್ಲಿ ಇಡಿ ದೇಶವನ್ನು ನಗರ ಹಳ್ಳಿಗಳೆನ್ನದೆ ಸಾವಿರಾರು ಕಿಲೋಮೀಟರ್ಗಳಲ್ಲಿ ತೆರೆದ ವಾಹನದ ಮೂಲಕ ತಿರುಗಿದ್ದಲ್ಲದೆ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದರು. ಹೀಗೆ ಅವರ ಈ ಅನುಭವ ತಮ್ಮ ರಾಜಕಾರಣದ ಕ್ರಿಯಾಶಿಲತೆಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಅಲ್ಲದೆ ಅದು ಅವರು ಗ್ರಾಮೀಣ ಭಾರತದಲ್ಲಿರುವ ಸಾಮಾಜಿಕ ಮತ್ತು ರಾಜಕೀಯ ಸಮೀಕರಣವನ್ನು ಚೆನ್ನಾಗಿ ಅರಿತು ಮುಂದೆ ಇಂದಿರಾ ಅಲ್ಲಿರುವ ಭೂಮಾಲಿಕ ಮತ್ತು ಭೂರಹಿತರ ನಡುವೆ ಇರುವ ಕಂದಕಕ್ಕೆ ಮಂಗಳ ಹಾಡಲು ಜನಪ್ರಿಯ ಘೋಷಣೆಯಾದ 'ಗರೀಭಿ ಹಟಾವೋ' ಜಾರಿಗೆ ತಂದರು. ಆ ಮೂಲಕ ಗ್ರಾಮೀಣ ಭಾಗದ ಜನರನ್ನು ತಲುಪಲು ಯಶಸ್ವಿಯಾದ ಇಂದಿರಾ ಗಾಂಧಿಯವರ ಜನಪ್ರಿಯತೆ ಮುಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ನಂತರ ಯಶಸ್ವಿಯಾಗಿ ಎಲ್ಲಾ ಸಮೂಹದ ಜನರನ್ನು ತಲುಪಿದ ನಾಯಕಿ ಎನಿಸಿಕೊಂಡರು. 

ಇಂತಹ ಉತ್ತುಂಗದ ಅವಧಿಯಲ್ಲಿ ತಮ್ಮ ಜನಪ್ರಿಯ ಕಾರ್ಯಕ್ರಮಗಳಾದ 14 ರಾಷ್ಟ್ರೀಯ ವಾಣಿಜ್ಯ ಬ್ಯಾಂಕಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ರಾಜ್ಯವಂಶಸ್ಥ ಕುಟುಂಬಗಳಿಗಿರುವ ವಾರ್ಷಿಕ ಸರ್ಕಾರಿ ನಿಧಿಯನ್ನು ನಿಲ್ಲಿಸಿದ್ದು, ಈ ಎಲ್ಲ ಕಾರ್ಯಕ್ರಮಗಳು ಸಾಮಾನ್ಯ ವರ್ಗದ ಜನರನ್ನು ಬಹು ಬೇಗ ಆಕರ್ಷಿಸಿದವು. ಇದರಿಂದಾಗಿ 1971ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದ ಇಂದಿರಾ, ಅಂದಿನಿಂದ ಕಾಂಗ್ರೆಸ್ ಎಂದರೆ ಅದು 'ಇಂದಿರಾ ಕಾಂಗ್ರೆಸ್' ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಿತು. ಅಲ್ಲದೆ ಹಳೆಯ ಕಾಂಗ್ರೆಸ್ ನ ಎಲ್ಲ ಹಿರಿಯ ತಲೆಗಳನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ ಇಂದಿರಾ, ಒಂದರ್ಥದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಸಂಪೂರ್ಣ ಹತೋಟೆಗೆ ತೆಗೆದುಕೊಂಡರು. ಇದೆ ಸಂದರ್ಭದಲ್ಲಿ ಇಂದಿರಾ ನೇತೃತ್ವದಲ್ಲಿ ಹಸಿರು ಕ್ರಾಂತಿ ಕಾರ್ಯಕ್ರಮದ ಮೂಲಕ ದೇಶಕ್ಕಿರುವ ಆಹಾರದ ಕೊರತೆಯನ್ನು ನೀಗಿಸಲಾಯಿತು. ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದಾಗಿ ಪರಮಾಣು ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತೀವ್ರವಾದ ಪ್ರಗತಿಯನ್ನು ಸಾಧಿಸಿತು.1971 ರಲ್ಲಿ ಭಾರತೀಯ ಸೈನ್ಯವು ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಗೆಲುವು ಸಾದಿಸಿದ್ದರ ಫಲವಾಗಿ ಇಂದಿರಾ ಗಾಂಧಿಗೆ 'ದುರ್ಗಾ' ಎನ್ನುವು ನಾಮಾಂಕಿತದಿಂದ ಅವರ ನಾಯಕತ್ವವನ್ನು ಪ್ರತಿಪಕ್ಷಗಳು ಹಾಡಿ ಹೊಗಳುವಂತಾಯಿತು ಎನ್ನುವುದು ಗಮನಾರ್ಹವಾದ ಸಂಗತಿ.

ತುರ್ತುಪರಿಸ್ಥಿತಿ ಬಿಕ್ಕಟ್ಟು:

ಇಂದಿರಾ ಗಾಂಧಿ ತಮ್ಮ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಬಂದಂತಹ ವರ್ಚಸ್ಸು ಜನಸಾಮಾನ್ಯರಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಿತ್ತು. ಆದರೆ ಇದೆ ಸಂದರ್ಭದಲ್ಲಿ ತಮಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತಿದ್ದ ಅವರು 1975-77 ರ ಸಂದರ್ಭದಲ್ಲಿ ವಿಧಿಸಿದ ತುರ್ತುಪರಿಸ್ಥಿತಿಯು ಒಂದರ್ಥದಲ್ಲಿ ಅವರಿಗಿದ್ದ ಸಂಪೂರ್ಣ ಜನ ಬೆಂಬಲವನ್ನು ನಕಾರಾತ್ಮಕ ರೀತಿಯಲ್ಲಿ ಬಳಸಿಕೊಂಡರು. ಈ ಕಾರ್ಯವು ಅವರಿಗೆ ಕೆಟ್ಟ ಹೆಸರನ್ನು ತಂದಿತು. ಏಕೆಂದರೆ ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮತ್ತು ವ್ಯಕ್ತಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸಿದರು. ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರನ್ನು ಜೈಲಿಗೆ ತಳ್ಳಿದರು. ನಂತರ ಇಂದಿರಾ ಅವರ ನೀತಿಗಳನ್ನು ವಿರೋಧಿಸಿ ಹಿರಿಯ ಗಾಂಧಿವಾದಿ ಜಯಪ್ರಕಾಶ ನಾರಾಯಣ ರವರು 'ಸಂಪೂರ್ಣ ಕ್ರಾಂತಿ'ಗೆ ಕರೆ ನೀಡಿದರು. ಇದರ ಭಾಗವಾಗಿ ಎಲ್ಲ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದು ಇಂದಿರಾ  ನಡೆಯನ್ನು ವಿರೋಧಿಸಲು ಹೋರಾಟ ಪ್ರಾರಂಭಿಸಿದವು. ಆಗ ಎಲ್ಲ ಪಕ್ಷಗಳ ಉದ್ದೇಶ ಒಂದೇ 'ಇಂದಿರಾ ಹಟಾವೋ' ಎನ್ನುವುದಾಗಿತ್ತು. 

ಇದರ ಭಾಗವಾಗಿ ಇಂದಿರಾ ಚುನಾವಣೆಯಲ್ಲಿ ಸೋತರು, ಆಗ ಕಾಂಗ್ರೆಸ್ ಕೂಡಾ ದೇಶದಲ್ಲೆಡೆ ಸೋಲನ್ನು ಅನುಭವಿಸಿತು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ದೇಶದಲ್ಲೆಡೆ ಮೂರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೇಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದಿತು. ಈ 77 ಮತ್ತು 80 ಅವಧಿಯ ನಡುವೆ ಮೂರಾರ್ಜಿ ದೇಸಾಯಿ ಮತ್ತು ಚೌಧರಿ ಚರಣ್ ಸಿಂಗ್ ಪ್ರಧಾನ ಮಂತ್ರಿಗಳಾದರು. ಆದರೆ ಆಗಿನ ಸಮ್ಮಿಶ್ರ ಸರ್ಕಾರವು ಹಲವಾರು ಬಿಕ್ಕಟ್ಟುಗಳಿಂದ ಬೇಗನೆ ಪತನಗೊಂಡಿತು. ನಂತರ ಮತ್ತೆ 1980ರಲ್ಲಿ ಪುನರ್ ಅಧಿಕಾರಕ್ಕೆ ಬಂದಂತಹ ಇಂದಿರಾಗಾಂಧಿ ಯವರು ಸಿಖ್ ರ ಖಲಿಸ್ತಾನ ಬೇಡಿಕೆಯಿತ್ತಿದ್ದ ಶಕ್ತಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಸ್ವರ್ಣಮಂದಿರದ ಮೇಲೆ 'ಆಪರೇಷನ್ ಬ್ಲೂ ಸ್ಟಾರ್' ಕಾರ್ಯಾಚರನೆ ಮೂಲಕ ಅಂತವರನ್ನು ಹತ್ತಿಕ್ಕಿದರು. ಇಂತಹ ಕ್ರಮಗಳಿಂದ ಸಿಖ್ ರ ಕೆಂಗಣ್ಣಿಗೆ ಗುರಿಯಾದ ಇಂದಿರಾ 1984 ಅಕ್ಟೋಬರ್ 31 ರಂದು ಅವರಿಗೆ ಸೆಕ್ಯೂರಿಟಿ ಗಾರ್ಡ್ಗಳ ಮೂಲಕ ಅವರನ್ನು ಅವರ ನಿವಾಸದಲ್ಲೇ ಹತ್ಯೆ ಮಾಡಲಾಯಿತು.

ಧೈರ್ಯದ ಮಹಿಳೆ:

 ಇಂದಿಗೂ ಕೂಡಾ ನಾವು ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯತೆಯ ಕುರಿತಾಗಿ ಆಗಾಗ ಮಾತನಾಡುತ್ತಲೇ ಇದ್ದೇವೆ, ಆದರೆ ಅದು ಇಂದಿಗೂ ಅಸಾಧ್ಯವೇನೋ ಎನ್ನುವಂತಿದೆ. ಆದರೆ ಆಗ ಸ್ವಾತಂತ್ರ್ಯ ಸಿಕ್ಕು ಕೆಲವು ದಶಕಗಳಲ್ಲಿ ದೇಶವನ್ನು ಕಟ್ಟುವ ಮಹತ್ತರ ಕಾರ್ಯವು ಆ ಸಂಧರ್ಭದಲ್ಲಿ ಮುಖ್ಯವಾಗಿತ್ತು, ಆಗ ನೆಹರು ಆ ಕೆಲಸಕ್ಕೆ ಸ್ಪಷ್ಟ ಗುರಿಗಳ ಮೂಲಕ ಮಾರ್ಗವನ್ನು ತೋರಿಸಿದ್ದರು. ಇದನ್ನು ಮುಂದುವರೆದ ಭಾಗವಾಗಿ ಇಂದಿರಾಗಾಂಧಿ ಮುನ್ನಡೆಸಿದ್ದರು. ಮಹಿಳೆಯು ರಾಜಕೀಯದಿಂದ ವಿಮುಖವಾಗಿದ್ದ ಆ ಕಾಲಘಟ್ಟದಲ್ಲಿ ಅವರ ರಾಜಕಾರಣದ ಪ್ರವೇಶವು ಒಂದರ್ಥದಲ್ಲಿ ಮಹಿಳಾ ಸಬಲಿಕರಣಕ್ಕೆ ಒಂದು ಭಿನ್ನ ಆಯಾಮವನ್ನು ನೀಡಿತು. ಪುರುಷ ಪ್ರಧಾನ ವ್ಯವಸ್ಥೆಯಿಂದಾಗಿ ಸಂಕುಚಿತವಾಗಿದ್ದ ಸಮಾಜವನ್ನು ಆ ಸಮಯದಲ್ಲಿ ಇಂದಿರಾ ಗಾಂಧಿಯವರು ನಿಭಾಯಿಸಿದ ರೀತಿ ನಿಜಕ್ಕೂ ಕೂಡ ಎಲ್ಲ ಮಹಿಳೆಯರಿಗೆ ಮಾದರಿ ಎಂದು ಹೇಳಬಹುದು. ಈ ಎಲ್ಲ ಕಾರಣಕ್ಕಾಗಿಯೇ ಆಗ ಮಾಧ್ಯಮಗಳು ಅವರ ಕಾರ್ಯಶೈಲಿಯನ್ನು ಇಂದಿರಾ ಎಂದರೆ ಇಂಡಿಯಾ ಎಂದು ಕರೆಯುತ್ತಿದ್ದದ್ದು ಅವರ ಪ್ರಭಾವಿ ನಾಯಕತ್ವ ಶೈಲಿಗೆ ಕನ್ನಡಿ ಹಿಡಿಯುತ್ತದೆ.

    -ಮಂಜುನಾಥ ನರಗುಂದ

Trending News