ಭಾರತ್ ಬಂದ್: ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ರಾಜಸ್ಥಾನ

ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ತೈಲೋತ್ಪನ್ನಗಳ ಮೇಲಿನ ವ್ಯಾಟ್ ನಲ್ಲಿ ಶೇ.4ರಷ್ಟು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

Last Updated : Sep 10, 2018, 12:07 PM IST
ಭಾರತ್ ಬಂದ್: ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ರಾಜಸ್ಥಾನ title=

ಜೈಪುರ: ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಕರೆ ನೀಡಿರುವ ಬಂದ್ ಬಿಸಿ ರಾಜಸ್ಥಾನಕ್ಕೂ ತಟ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್ ಕಡಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ಭಾನುವಾರ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಮೌಲ್ಯವರ್ಧಿತ ತೆರಿಗೆ(VAT)ಯನ್ನು ಶೇ. 4ರಷ್ಟು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ತೆರಿಗೆ ಕಡಿತದಿಂದ ಹೆಚ್ಚುವರಿಯಾಗಿ 2,000 ಕೋಟಿ ರೂ. ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಆದರೂ, ನಾವು ತೆರಿಗೆ ಕಡಿತಗೊಳಿಸುವುದರ ಬಗ್ಗೆ ನಿರ್ಧಾರ ಮಾಡಿದ್ದೇವೆ. ಇದರಿಂದ ರಾಜ್ಯದ ಜನರಿಗೆ ಸ್ವಲವಾದರೂ ಸಹಕಾರಿಯಾಗಲಿದೆ ಎಂದು ವಸುಂಧರ ರಾಜೆ ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿಗಳ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಅಶೋಕ್ ಗೆಹ್ಲೋಟ್​  ದೇಶವ್ಯಾಪಿ ಕಾಂಗ್ರೆಸ್​ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ವಸುಂಧರ ರಾಜೇ ಬೆದರಿ ವ್ಯಾಟ್​ ಇಳಿಸಲು ಮುಂದಾಗಿದ್ದಾರೆ.  ವ್ಯಾಟ್​ ಅನ್ನು ಶೇ. 4ರಷ್ಟು ಕಡಿತಗೊಳಿಸಿರುವುದು ಸಮಾಧಾನಕರವಲ್ಲ. ರಾಜ್ಯ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಸಾಲದು, ಗ್ಯಾಸ್​ ಸಿಲಿಂಡರ್​ ಮೇಲಿನ ತೆರಿಗೆಯನ್ನು ಕೂಡ ತೆಗೆಯಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
 

Trending News