ಕೇಂದ್ರ ಮಾಜಿ ಸಚಿವ ವಿ. ಧನಂಜಯ ಕುಮಾರ್ ವಿಧಿವಶ

ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಧನಂಜಯ್ ಕುಮಾರ್.  

Last Updated : Mar 5, 2019, 08:39 AM IST
ಕೇಂದ್ರ ಮಾಜಿ ಸಚಿವ ವಿ. ಧನಂಜಯ ಕುಮಾರ್ ವಿಧಿವಶ title=

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ , ಮಾಜಿ ಕೇಂದ್ರ ಸಚಿವ ವಿ. ಧನಂಜಯಕುಮಾರ್ ಸೋಮವಾರ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿಯೇ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ವಿ. ಧನಂಜಯ್ ಕುಮಾರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು, ಕಳೆದ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಬಿಗಡಾಯಿಸಿ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

1983 ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಧನಂಜಯ್ ಕುಮಾರ್, 1991 ರ ಲೋಕಸಭೆ ಚುನಾವಣೆಯಲ್ಲಿ ಜನಾರ್ಧನ ಪೂಜಾರಿ ಅವರ ವಿರುದ್ಧ ಗೆಲುವು ಕಂಡಿದ್ದರು. ಬಳಿಕ 3 ಚುನಾವಣೆಗಳಲ್ಲಿ ಅವರು ಜಯಗಳಿಸಿದ್ದರು. 

ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪ್ತರಾಗಿದ್ದ ಧನಂಜಯಕುಮಾರ್ ಅವರು ಕೆಜೆಪಿ ಸ್ಥಾಪನೆಯಾದಾಗ ಬಿಜೆಪಿ ತ್ಯಜಿಸಿ ಕೆಜೆಪಿ ಸೇರಿದ್ದರು.

ಯಡಿಯೂರಪ್ಪ ಮಾತೃಪಕ್ಷಕ್ಕೆ ಮರಳಿದಾಗ ಜೆಡಿಎಸ್ ಸೇರಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2017 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರೂ ಅವರಿಗೆ ಯಾವುದೇ ಸ್ಥಾನಮಾನ ಸಿಗಲಿಲ್ಲ.
 

Trending News