ಬೆಂಗಳೂರಿನಲ್ಲಿ ವರುಣನ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ರಾತ್ರಿಪೂರ್ತಿ ಜನರ ‘ದೀಪಾವಳಿ’ ಜಾಗರಣೆ!

ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನದಿಯಂತಾಗಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿದೆ.

Written by - Puttaraj K Alur | Last Updated : Nov 5, 2021, 09:26 AM IST
  • ವರುಣನ ಆರ್ಭಟಕ್ಕೆ ತತ್ತರಿಸಿದ ಸಿಲಿಕಾನ್ ಸಿಟಿ ಬೆಂಗಳೂರು
  • ನದಿಯಂತಾಗಿರುವ ರಸ್ತೆಗಳಲ್ಲಿ ವಾಹನ ಸವಾರರ ಪರದಾಟ
  • ಮನೆಗಳಿಗೆ ನುಗ್ಗಿದ ಮಳೆನೀರು, ದಿನಸಿಪದಾರ್ಥಗಳು ನೀರುಪಾಲು
ಬೆಂಗಳೂರಿನಲ್ಲಿ ವರುಣನ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ರಾತ್ರಿಪೂರ್ತಿ ಜನರ ‘ದೀಪಾವಳಿ’ ಜಾಗರಣೆ! title=
ಬೆಂಗಳೂರಿನಲ್ಲಿ ಮಳೆಯ ಅಬ್ಬರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟ(Bengaluru Rains)ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ಸಂಜೆ ಶುರುವಾದ ಮಳೆಯ ಅಬ್ಬರ ರಾತ್ರಿಯಿಡೀ ಮುಂದುವರಿದಿತ್ತು. ಭಾರೀ ಮಳೆಯ ಹೊಡೆತಕ್ಕೆ ಮನೆಗಳಿಗೆ ನೀರು ನುಗ್ಗಿ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದ್ದು, ರಾತ್ರಿಪೂರ್ತಿ ಜನರು ‘ದೀಪಾವಳಿ ಹಬ್ಬ’ದ ಜಾಗರಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿ(Heavy Rain)ದಿದ್ದು ಮೈಸೂರು ರಸ್ತೆ, ಬನಶಂಕರಿ, ಚಂದ್ರಾಲೇಔಟ್, ವಿಜಯನಗರ, ಮಾಗಡಿ ರಸ್ತೆ, ಸುಂಕದಕಟ್ಟೆ, ಯಶವಂತಪುರ, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಉತ್ತರಹಳ್ಳಿ, ಕೆಂಗೇರಿ, ಶಾಂತಿನಗರ, ಆಸ್ಟಿನ್​ಟೌನ್ ಸೇರಿ ಅನೇಕ ಬಡಾವಣೆಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿದ ಪರಿಣಾಮ ಕಸ್ತೂರಬಾ ನಗರದ 2ನೇ ಕ್ರಾಸ್​ನಲ್ಲಿ ಜನರು ಪರದಾಡುತ್ತಿದ್ದಾರೆ. ಅಶೋಕ ಪಿಲ್ಲರ್​ ಬಳಿಯೂ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಭೀಕರ ಮಳೆಯಲ್ಲಿ ದಿನಸಿ ಪದಾರ್ಥಗಳು ಕೊಚ್ಚಿಹೋಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: Anganwadis : ನ.8 ರಿಂದ ರಾಜ್ಯದಲ್ಲಿ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು ಓಪನ್

ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಸಂಚರಿಸಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ವ್ಯಾಪಕ ಮಳೆ ಸುರಿದ ಕಾರಣ ಬಹುತೇಕ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡಿದ್ದವು. ಧಾರಾಕಾರವಾಗಿ ಬಿಟ್ಟುಬಿಡದೆ ಸುರಿದ ಮಳೆಗೆ‌ ರಸ್ತೆಗಳು ಕೆರೆಗಳಾಗಿ ಬದಲಾಗಿದ್ದವು. ಮಳೆ ಸೃಷ್ಟಿಸಿದ ಅವಾಂತರಕ್ಕೆ ಚಿಕ್ಕಪೇಟೆಯಲ್ಲಿ ಕಾರು, ಬೈಕ್‌ಗಳು ಮುಳುಗಡೆಯಾಗಿವೆ. ನೀರು ಮನೆಗಳಿಗೆ ನುಗ್ಗಿದ ಹಿನ್ನೆಲೆ ಸ್ಥಳೀಯರು ಪರದಾಡುವಂತಾಗಿದೆ.

ಮಾಗಡಿ ರಸ್ತೆಯ ಟೋಲ್ ಗೇಟ್(Magadi Road Toll Gate) ಬಳಿ ಬಿಬಿಎಂಪಿಯ ಪೈಪ್‌ಲೈನ್‌ ಕಾಮಗಾರಿಯಿಂದ ಎಡವಟ್ಟು ಉಂಟಾಗಿದ್ದು, ಮಳೆಯಿಂದ 2 ಕಾರುಗಳು ರಸ್ತೆ ಗುಂಡಿಯಲ್ಲಿ ಸಿಲುಕಿದೆ. ಪೈಪ್‌ಲೈನ್‌ ಕಾಮಗಾರಿಯಿಂದ ನಿರ್ಮಾಣವಾಗಿದ್ದ ಗುಂಡಿಯಲ್ಲಿ ಕಾರುಗಳು ಸಿಲುಕಿವೆ. ಸಂಚಾರಿ ಪೊಲೀಸರು ಕ್ರೇನ್ ಮೂಲಕ ಕಾರು ಮೇಲೆತ್ತಿದ್ದಾರೆ. ಬೆಂಗಳೂರಿನ ಜೆ.ಜೆ.ನಗರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ತುಂಬಿ ಹರಿಯುತ್ತಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು, ಬೈಕ್‌ ಗಳು ಮುಳುಗಡೆಯಾಗಿವೆ. ಮೈಸೂರು ರಸ್ತೆ, ಬನಶಂಕರಿ, ಚಂದ್ರಲೇಔಟ್, ಜೆಜೆ ನಗರ, ಯಶವಂತಪುರ ಹಾಗೂ ನಾಗರಬಾವಿಯಲ್ಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: K Sudhakar : ಪುನೀತ್ ರಾಜ್‌ಕುಮಾರ್ ನಿಧನ : ರಾಜ್ಯ ಸರ್ಕಾರದಿಂದ ಜಿಮ್‌ಗಳಿಗೆ ಹೊಸ ಮಾರ್ಗಸೂಚಿಗಳು

ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿ(Waterlogging In Bengaluru)ಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನದಿಯಂತಾಗಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಶಾಂತಿನಗರ ಸುತ್ತಮುತ್ತಲಿನ ರಸ್ತೆಗಳಲ್ಲಿ 1-2 ಅಡಿ ನೀರು ತುಂಬಿಕೊಂಡಿದೆ. ಸರ್ಕಸ್ ಮಾಡುತ್ತಾ ಮಳೆ ನೀರಿನಲ್ಲೇ ವಾಹನ ಸವಾರರು ನುಗ್ಗಿ ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಲಾಲ್ ಬಾಗ್ ರಸ್ತೆಯಲ್ಲಿ ಇನ್ನೂ ಕೂಡ ಮಳೆನೀರು ನಿಂತಿದೆ. ಪರಿಣಾಮ ವಾಹನ ಸವಾರರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಇನ್ನೂ 4 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಹಿಂಗಾರು ಮಳೆ ಶುರುವಾಗಿದ್ದು, ಇಂದಿನಿಂದ ನ.6ರವರೆಗೂ ಮಳೆ ಅಬ್ಬರ ಜೋರಾಗಲಿದೆ. ಬಂಗಾಳಕೊಲ್ಲಿ(Bay of Bengal)ಯಲ್ಲಿ ವಾಯುಭಾರ ಕುಸಿತವಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ನ.6ರವರೆಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂದಿನಿಂದ 3 ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನದಿಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News