ಶುಕ್ರವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ: ಸಂಪುಟ ಸೇರುವವರ ಹೆಸರು ಇನ್ನೂ ಸಸ್ಪೆನ್ಸ್!

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಇನ್ನೂ 3 ಸಚಿವ ಸ್ಥಾನಗಳು ಖಾಲಿ ಇವೆ.

Last Updated : Jun 13, 2019, 04:23 PM IST
ಶುಕ್ರವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ: ಸಂಪುಟ ಸೇರುವವರ ಹೆಸರು ಇನ್ನೂ ಸಸ್ಪೆನ್ಸ್! title=

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಶುಕ್ರವಾರ ಮುಹೂರ್ತ ನಿಗದಿಯಾಗಿದೆ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಂಪುಟ ಸೇರುವವರ ಹೆಸರು ಮಾತ್ರ ಇನ್ನೂ ಅಂತಿಮವಾಗಿಲ್ಲ. 

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಇನ್ನೂ 3 ಸಚಿವ ಸ್ಥಾನಗಳು ಖಾಲಿ ಇವೆ. ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನ ನೀಡಬೇಕೇ? ಅಥವಾ ಸರ್ಕಾರಕ್ಕೆ ಉರುಳಾಗಲಿರುವ ಶಾಸಕರನ್ನು ಸಮಾಧಾನ ಪಡಿಸಬೇಕೆ ಎಂಬ ಗೊಂದಲದಲ್ಲಿ ಮೈತ್ರಿ ನಾಯಕರಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆಗೆ ನಾಳೆಯೇ ಸಮಯ ನಿಗದಿ ಮಾಡಿದ್ದರೂ, ಇದುವರೆಗೂ ನಿಯೋಜಿತ್ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

ಕಾಂಗ್ರೆಸ್ ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದು ಸಂಪುಟ ಪುನರ್ ರಚನೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಸಂಪುಟ ಪುನರ್ ರಚನೆಗೆ ಒಲ್ಲದ ಮೈತ್ರಿ ನಾಯಕರು ಸದ್ಯಕ್ಕೆ ತಮಗೆ ಬೆಂಬಲ ನೀಡಿರುವ ಇಬ್ಬರು ಪಕ್ಷೇತರ ಶಾಸಕರನ್ನೂ ಸಂಪುಟಕ್ಕೆ ಸೇರಿಸಿಕೊಂಡು ಸಂಪುಟ ವಿಸ್ತರಣೆಯನ್ನಷ್ಟೇ ಮಾಡಲು ನಿರ್ಧರಿಸಿವೆ.

ಖಾಲಿ ಇರುವ ಮೂರು ಸ್ಥಾನಗಳಲ್ಲಿ ಇಬ್ಬರು ಪಕ್ಷೇತರ ಶಾಸಕರಿಗೆ ಮಣೆ ಹಾಕುವುದು ಖಚಿತವಾಗಿದ್ದು, ಇನ್ನೊಂದು ಸ್ಥಾನವನ್ನು ಯಾರಿಗೆ ನೀಡಲಿದ್ದಾರೆ ಎಂಬುದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.

Trending News