ಗಾಯನ ಗಂಗೆ ಗಂಗೂಬಾಯಿ ಹಾನಗಲ್ ನೆನಪಿನಲ್ಲಿ....

Written by - Manjunath N | Last Updated : Mar 5, 2022, 07:39 PM IST
  • ತಮ್ಮ ಹಲವು ದಶಕಗಳ ವೃತ್ತಿ ಜೀವನದಲ್ಲಿ ಗಂಗೂಬಾಯಿ ಹಾನಗಲ್ (Gangubai Hangal) ಗಂಟಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದಾಗಿ ಅವರಲ್ಲಿ ಧ್ವನಿಯಲ್ಲಿ ನಾಟಕೀಯ ಬದಲಾವಣೆಯಾಯಿತು.
  • ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ಅವರಿಗೆ ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಪದ್ಮವಿಭೂಷಣ, ಪದ್ಮಭೂಷಣ, ಸಂಗೀತ ನಾಟಕ ಆಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳು ಲಭಿಸಿವೆ.
ಗಾಯನ ಗಂಗೆ ಗಂಗೂಬಾಯಿ ಹಾನಗಲ್ ನೆನಪಿನಲ್ಲಿ.... title=
Photo Courtesy: Twitter

ಅವಿಭಜಿತ ಧಾರವಾಡ ಜಿಲ್ಲೆಗೂ ಹಿಂದೂಸ್ತಾನಿ ಸಂಗೀತಕ್ಕೂ ಬಿಡಿಸಲಾಗದ ನಂಟು, ಹೌದು ಈ ಭಾಗದಲ್ಲಿ ಖ್ಯಾತನಾಮ ಹಿಂದೂಸ್ತಾನಿ ಸಂಗೀತ ದಿಗ್ಗಜರು ದೇಶಾದ್ಯಂತ ಹೆಸರು ಮಾಡಿದ್ದಾರೆ.

ಭೀಮಸೇನ್ ಜೋಷಿ, ಮಲ್ಲಿಕಾರ್ಜುನ್ ಮನ್ಸೂರು, ಬಸವರಾಜ್ ರಾಜಗುರು, ಮಾಧವ್ ಗುಡಿ, ರಾಜಶೇಖರ್ ಮನ್ಸೂರು, ಕೃಷ್ಣಾ ಹಾನಗಲ್, ಪಂಡಿತ್ ವೆಂಕಟೇಶ್ ಕುಮಾರ್ ಹೀಗೆ ಹಲವು ದಿಗ್ಗಜರು ಈ ಭಾಗದಲ್ಲಿ ಕಿರಾಣಾ ಘರಾನಾ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಹೆಸರು ಗಳಿಸಿದ್ದಾರೆ.ಇಂತಹ ದಿಗ್ಗಜರ ನಡುವೆ ಕೇಳಿ ಬರುವ ಮತ್ತೊಂದು ಅಗ್ರ ಹೆಸರೆಂದರೆ ಅದು, ಗಂಗೂಬಾಯಿ ಹಾನಗಲ್ ಎಂದರೆ ತಪ್ಪಾಗಲಾರದು.

ಹೌದು, ಅಷ್ಟಕ್ಕೂ ಗಂಗೂಬಾಯಿ ಹಾನಗಲ್ ಅವರ ಸಂಗೀತ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ, ಕೆಳಸಮುದಾಯದಲ್ಲಿ ಜನಿಸಿದ ಗಂಗೂಬಾಯಿಗೆ ಬಾಲ್ಯದಲ್ಲಿಯೇ ಹಲವು ಅವಮಾನಗಳನ್ನು ಎದುರಿಸಬೇಕಾಗಿ ಬಂತು.ಇಂತಹ ಎಲ್ಲ ಸನ್ನಿವೇಶಗಳನ್ನು ಎದುರಿಸಿಯೇ ಅವರು ಸಂಗೀತ ಸಾಮ್ರಾಜ್ಞೆಯಾಗಿದ್ದಂತೂ ನಿಜಕ್ಕೂ ಸ್ಪೂರ್ತಿದಾಯಕ.

ಇಂತಹ ಮಹಾನ್ ಗಾಯಕಿ ಮಾರ್ಚ್ 5 1913 ರಂದು ಇಂದಿನ ಹಾವೇರಿ ಜಿಲ್ಲೆಯಲ್ಲಿರುವ ಹಾನಗಲ್ ನಲ್ಲಿ ಜನಿಸಿದರು. ಆರಂಭಿಕ ಸಂಗೀತಾಭ್ಯಾಸವನ್ನು ಅವರು ತಾಯಿ ಅಂಬಾಬಾಯಿ ಅವರಿಂದ ಕಲಿತರು.ಅಷ್ಟೇ ಅಲ್ಲದೆ ಹುಡಗೂರು ಕೃಷ್ಣಾಚಾರ್ಯ ಅವರ ಬಳಿ ತರಬೇತಿಯನ್ನು ಪಡೆದರು.ಮುಂದೆ ಅವರು ರಾಮ್ ಭಾವು ಕುಂದಗೋಳಕರ್ (ಸವಾಯಿ ಗಂಧರ್ವ) ಅವರಿಂದ ಕಿರಾಣಾ ಘರಾನಾ ಹಿಂದೂಸ್ತಾನಿ ಸಂಗೀತಾಭ್ಯಾಸವನ್ನು ಮಾಡಿದರು.

ಇದನ್ನೂ ಓದಿ: ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ'

ತಮ್ಮ ಹಲವು ದಶಕಗಳ ವೃತ್ತಿ ಜೀವನದಲ್ಲಿ ಗಂಗೂಬಾಯಿ ಹಾನಗಲ್ (Gangubai Hangal) ಗಂಟಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದಾಗಿ ಅವರಲ್ಲಿ ಧ್ವನಿಯಲ್ಲಿ ನಾಟಕೀಯ ಬದಲಾವಣೆಯಾಯಿತು.1930 ರ ಅವಧಿಯಲ್ಲಿ ರಿಕಾರ್ಡಿಂಗ್ ಆಗಿರುವ ಅವರ ಡಿಸ್ಕ್ ನಲ್ಲಿ ಸಾಮಾನ್ಯವಾಗಿ ನಂತರದ ದಶಕಗಳಲ್ಲಿ ಕೇಳುವುದಕ್ಕಿಂತಲೂ ತೆಳುವಾಗಿರುವುದನ್ನು ನಾವು ಕೇಳಬಹುದು.ಈ ಹಿನ್ನಲೆಯಲ್ಲಿ ಆರಂಭಿಕ ಗಂಗೂಬಾಯಿ ಹಾನಗಲ್ ಸುಮಧುರ ಧ್ವನಿಯಿಂದಾಗಿ ಅವರನ್ನು ಗಾಂಧಾರಿ ಹಾನಗಲ್ ಎಂದು ಕರೆಯಲಾಗುತ್ತಿತ್ತು.

ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ಅವರಿಗೆ ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಪದ್ಮವಿಭೂಷಣ, ಪದ್ಮಭೂಷಣ, ಸಂಗೀತ ನಾಟಕ ಆಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳು ಲಭಿಸಿವೆ.ಅಷ್ಟೇ ಅಲ್ಲದೆ ಮೈಸೂರಿನಲ್ಲಿ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ಜೊತೆಗೆ ಗುರುಶಿಷ್ಯ ಪರಂಪರೆಯ ಪ್ರತೀಕವಾಗಿ ಹುಬ್ಬಳಿಯಲ್ಲಿ ಗಂಗೂಬಾಯಿ ಹಾನಗಲ್ ಗುರುಕುಲವನ್ನು ಸ್ಥಾಪಿಸಲಾಗಿದೆ.

ತಮ್ಮ ಗಾಯನದ ಮೂಲಕ ಕರ್ನಾಟಕದ ಕೀರ್ತಿಯನ್ನು ದೇಶಾದ್ಯಂತ ಹರಡಿದ ಗಂಗೂಬಾಯಿ ಹಾನಗಲ್ ಅವರು ಜುಲೈ 21 2009 ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಕೊನೆಯುಸಿರೆಳೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News