ನನ್ನದು ನಗು ಮುಖ, ನನ್ನ ಆಲೋಚನೆಗಳು ಧನಾತ್ಮಕ: ಟ್ವೀಟ್ ಮೂಲಕ ಸದಾನಂದಗೌಡ ಟಾಂಗ್

ಗಂಡನನ್ನು ಕಳೆದು ಕೊಂಡವರ ಬಗ್ಗೆ ಕೀಳಾಗಿ ಮಾತನಾಡುವ ಋಣಾತ್ಮಕ ಚಿಂತನೆ ನನಗೆ ಯಾವತ್ತೂ ಬಂದಿಲ್ಲ- ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ

Last Updated : Mar 29, 2019, 04:57 PM IST
ನನ್ನದು ನಗು ಮುಖ, ನನ್ನ ಆಲೋಚನೆಗಳು ಧನಾತ್ಮಕ: ಟ್ವೀಟ್ ಮೂಲಕ ಸದಾನಂದಗೌಡ ಟಾಂಗ್ title=
File Image

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡರು ನಗುವುದನ್ನು ಬಿಟ್ಟು ಯಾವುದೇ ಕೆಲಸ ಮಾಡಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ತಿರುಗೇಟು ನೀಡಿರುವ ಸದಾನಂದ ಗೌಡರು, ಹೌದು, ನನ್ನದು ನಗು ಮುಖ, ನನ್ನ ಆಲೋಚನೆಗಳು ಧನಾತ್ಮಕ ಎಂದು ಟಾಂಗ್ ನೀಡಿದ್ದಾರೆ.

ವೈಯಕ್ತಿಕ ಟೀಕೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಸದಾನಂದ ಗೌಡರು ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಹೌದು ನನ್ನದು ನಗು ಮುಖ,ನನ್ನ ಆಲೋಚನೆಗಳು ಯಾವತ್ತೂ ಧನಾತ್ಮಕ . ಅದಕ್ಕೆ ನಾನು ನಗು ಮಖದಲ್ಲಿ ಇರುತ್ತೇನೆ . ಗಂಡನನ್ನು ಕಳೆದು ಕೊಂಡವರ ಬಗ್ಗೆ ಕೀಳಾಗಿ ಮಾತನಾಡುವ ಋಣಾತ್ಮಕ ಚಿಂತನೆ ನನಗೆ ಯಾವತ್ತೂ ಬಂದಿಲ್ಲ . ಅಧಿಕಾರಕ್ಕೋಸ್ಕರ ಬದುಕಿ ಬಂದ ಸಿದ್ದಾಂತದೊಂದಿಗೆ ರಾಜಿ ಮಾಡಿಕ್ಕೊಂಡು ಹೀನವಾಗಿ ಬದುಕುವ ಜಾಯಮಾನ ನನ್ನದಲ್ಲ ಎಂದಿದ್ದಾರೆ.

ಬೆಂಗಳೂರು ಉತ್ತರ ಸಂಸದನಾಗಿ ನಾನೇನು ಮಾಡಿದ್ದೇನೆಂದು ನನ್ನ ಜನರಿಗೆ ಗೊತ್ತಿದೆ . ಸಾಂದರ್ಭಿಕ ಮೈತ್ರಿ ಮಾಡಿಕ್ಕೊಂಡು ಜನರನ್ನು ಏಮಾರಿಸಲು ಹೊರಟ ಹಗಲು ವೇಷಗಾರರಿಗೆ ಮನದಟ್ಟು ಮಾಡುವ ಅಗತ್ಯ ನನಗಿಲ್ಲ . ನಮ್ಮೊಂದಿಗೆ ಮೋದಿಯಂತ ಮೋದಿಜಿಯವರಿದ್ದಾರೆ . ಮೋದಿಜಿಯವರ ಜೊತೆಗಿದ್ದರೆ ದೇಶ ಸುರಕ್ಷಿತ ಎನ್ನುವ ಕೋಟಿ ಕೋಟಿ ಜನರಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ನೀವುಗಳು ಎದೆಯುಬ್ಬಿಸಿ ಹೇಳಿಕೊಳ್ಳುವಂತ ನಿಷ್ಕಳಂಕ ಚಾರಿತ್ರ್ಯದ ಒಬ್ಬನೇ ಒಬ್ಬ ನಾಯಕ ನಿಮ್ಮಲ್ಲಿದ್ದಾನೆ ಅನ್ನುವ ಛಾತಿ ನಿಮಗಿದೆಯಾ ? ರಾಜಕೀಯವನ್ನು ರಾಜಕೀಯವಾಗಿ ನಡೆಸಿ , ವೈಯುಕ್ತಿಕ ನಿಂದನೆ ನಿಮ್ಮ ತೂಕವನ್ನು ಅಳೆಯುತ್ತೆ ಎನ್ನುವ ಭಾವನೆ ನಿಮಗಿರಲಿ . ಜನ ಗಮನಿಸುತ್ತಾರೆಂಬ ಕನಿಷ್ಠ ಪ್ರಜ್ಞೆ ಕೂಡ ಇರಲಿ ಎಂದು ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.

Trending News