ಇಂದು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಅನರ್ಹ ಶಾಸಕರ ಅರ್ಜಿ ವಿಚಾರಣೆ

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಬುಧವಾರ  ಕಾಂಗ್ರೆಸ್​ ಪರ ಕಪಿಲ್​ ಸಿಬಲ್​ ಮತ್ತು ಅನರ್ಹ ಶಾಸಕರ ಪರ ಮುಕುಲ್​ ರೋಹಟಗಿ ವಾದ ಮಂಡಿಸಿದರು. 

Last Updated : Oct 24, 2019, 07:15 AM IST
ಇಂದು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಅನರ್ಹ ಶಾಸಕರ ಅರ್ಜಿ ವಿಚಾರಣೆ title=
File image

ನವದೆಹಲಿ: ಕರ್ನಾಟಕದ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮತ್ತೆ ನಡೆಸಲಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಬುಧವಾರ  ಕಾಂಗ್ರೆಸ್​ ಪರ ಕಪಿಲ್​ ಸಿಬಲ್​ ಮತ್ತು ಅನರ್ಹ ಶಾಸಕರ ಪರ ಮುಕುಲ್​ ರೋಹಟಗಿ ವಾದ ಮಂಡಿಸಿದರು. ಜೊತೆಗೆ ಇನ್ನೂ ಹೆಚ್ಚಿನ ವಾದ ಮಂಡನೆಯ ಇಂಗಿತ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು.

ಹಿಂದಿನ ಕಾಂಗ್ರೆಸ್ ಮತ್ತು ಜೆಡಿಸ್ ಮೈತ್ರಿ ಸರ್ಕಾರದಲ್ಲಿ ಬಂಡೆದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರನ್ನು ಅಂದಿನ ಸ್ಪೀಕರ್​ ಕೆ.ಆರ್. ರಮೇಶ್ ಕುಮಾರ್ ಅನರ್ಹ ಗೊಳಿಸಿದ್ದರು. ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಹಾಗೇ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ 15 ಕ್ಷೇತ್ರಗಳ ಉಪಚುನಾವಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿತ್ತು. ಮಂಗಳವಾರವೇ ಅರ್ಜಿ ವಿಚಾರಣೆ ನಿಗದಿಯಾಗಿದ್ದರೂ ಕಾಂಗ್ರೆಸ್​ ಪರ ವಕೀಲ ಕಪಿಲ್​ ಸಿಬಲ್​ ಕೋರ್ಟ್​ಗೆ ಆಗಮಿಸಲು ಸಾಧ್ಯವಾಗದ ಕಾರಣ ಬುಧವಾರಕ್ಕೆ ಮುಂದೂಡಲಾಗಿತ್ತು. ಬೆಳಗ್ಗೆಯೇ ನಡೆಯಬೇಕಿದ್ದ ವಿಚಾರಣೆಯನ್ನು ಮಧ್ಯಾಹ್ನ 2ಗಂಟೆಗೆ ನಿಗದಿಪಡಿಸಲಾಗಿತ್ತು.

ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ಎಲ್ಲ ವಾದ-ಪ್ರತಿವಾದಗಳನ್ನೂ ಬುಧವಾರವೇ ಮುಗಿಸಬೇಕು ಎಂದು ನ್ಯಾಯಮೂರ್ತಿ ಎನ್​.ವಿ. ರಮಣ ಸೂಚನೆ ನೀಡಿದ್ದರು. ಹಾಗೇ 15 ಕ್ಷೇತ್ರಗಳಿಗೆ ಉಪಚುನಾವಣೆ ಸಂಬಂಧ ರಾಜ್ಯ ಹೈಕೋರ್ಟ್​ಗೆ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಅನರ್ಹ ಶಾಸಕರು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿ ವಿಚಾರಣೆ ನಿಗದಿಯಾಗಿರುವಾಗ ನೀವೇಕೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದೀರಿ ಎಂದು ಪ್ರಶ್ನಿಸಿದ್ದರು.
 

Trending News