ಶಬರಿಮಲೆ: ಮಹಿಳೆಯರ ಪ್ರವೇಶಕ್ಕೆ ಸಿಗುತ್ತಾ ಅನುಮತಿ? ಇಂದು ಸುಪ್ರೀಂ ತೀರ್ಪು

ಶಬರಿಮಲೆ ದೇಗುಲಕ್ಕೆ 10 ರಿಂದ 50 ವರ್ಷದ ಮಹಿಳೆಯರಿಗೂ ಪ್ರವೇಶ ನೀಡಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ತನ್ನ ತೀರ್ಪು ಪ್ರಕಟಿಸಲಿದೆ.

Last Updated : Sep 28, 2018, 07:33 AM IST
ಶಬರಿಮಲೆ: ಮಹಿಳೆಯರ ಪ್ರವೇಶಕ್ಕೆ ಸಿಗುತ್ತಾ ಅನುಮತಿ? ಇಂದು ಸುಪ್ರೀಂ ತೀರ್ಪು title=

ನವದೆಹಲಿ: ಪಥನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ದೇವಸ್ಥಾನಕ್ಕೆ ತೀರ್ಥಯಾತ್ರೆ  ಕೈಗೊಳ್ಳುವವರಿಗೆ 10 ಮತ್ತು 50 ರ ನಡುವಿನ ವಯಸ್ಸಿನ ಮಹಿಳೆಯರನ್ನು ನಿರ್ಬಂಧಿಸುತ್ತದೆ. 2016 ರ ಜನವರಿಯಲ್ಲಿ ನ್ಯಾಯಾಲಯ ಈ ನಿಷೇಧವನ್ನು ಪ್ರಶ್ನಿಸಿದೆ, ಸಂವಿಧಾನದ ಅಡಿಯಲ್ಲಿ ಈ ರೀತಿ ಮಾಡಲಾಗುವುದಿಲ್ಲ ಎಂದೂ ಸಹ ತಿಳಿಸಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸ್ತ್ರೀಯರಿಗೆ ಪ್ರವೇಶ ಸಿಗುವುದೇ? ಋತುಮತಿಯಾದ ಮಹಿಳೆಯರೂ ಆಯ್ಯಪ್ಪನ ದೇವಸ್ಥಾನಕ್ಕೆ ಸಿಗುವುದೇ ಪ್ರವೇಶಾವಕಾಶ? ಈ ಪ್ರಶ್ನೆಗಳಿಗೆ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ‌ ಇಂದು ಹೊರಡಿಸುವ ತೀರ್ಪಿನಲ್ಲಿ ಉತ್ತರ ಸಿಗಲಿದೆ.

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಶುಕ್ರವಾರ ಮತ್ತೊಂದು ಮಹತ್ವದ ತೀರ್ಪು ನೀಡಲಿದೆ. 

ಅಯ್ಯಪ್ಪ ಸ್ವಾಮಿ ದೇಗುಲದ ಒಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ನಿಯಮ 800 ವರ್ಷಗಳ ಹಿಂದಿನಿಂದಲೂ ಇದೆ. ಈ ಲಿಂಗ ತಾರತಮ್ಯವುಳ್ಳ ಕ್ರಮವನ್ನು ಪ್ರಶ್ನಿಸಿ ಇಂಡಿಯನ್‌ ಯಂಗ್ ಲಾಯರ್ಸ್ ಅಸೋಶಿಯೇಶನ್ 2006ರಲ್ಲಿ ಸುಪ್ರೀಂಕೋರ್ಟ್​ನಲ್ಲಿ‌ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ. ಇದು ಮಹಿಳೆಯರ ವಿರುದ್ಧ ಅನುಸರಿಸುವ ತಾರತಮ್ಯ ನೀತಿ ಎಂದು ವಾದ ಮಂಡಿಸಿತು. 

ಜೊತೆಗೆ ಋತುಮತಿಯಾದ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಬಗ್ಗೆಯೂ ತಕರಾರು ಪ್ರತ್ಯೇಕ ಅರ್ಜಿ ಸಲ್ಲಿಸಿತು. ಈ ಪ್ರಕರಣದ ವಿಚಾರಣೆ ವೇಳೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಸಾಂವಿಧಾನಿಕ ಪೀಠ ಅಸಮಾಧಾನ ಹೊರಹಾಕಿತ್ತು. ಋತುಮತಿಯಾದ ಮಹಿಳೆಯರು ಅಪವಿತ್ರಳು. ಆದಕಾರಣ ಅವರು ದೇವಸ್ಥಾನ ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಬಂಧ ವಿಧಿಸಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ವಾದ ಮಂಡಿಸಿದಾಗ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. 

ಯಾವ ಆಧಾರದ ಮೇಲೆ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೀರಿ ಎಂದು ಪೀಠವು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಚಾಟಿ ಬೀಸಿತ್ತು. ಈ ವೇಳೆ ಸಾರ್ವಜನಿಕರಿಗೆ ಮೀಸಲಾದ ದೇವಸ್ಥಾನಕ್ಕೆ ಪುರುಷ ಮತ್ತು ಮಹಿಳೆಯರು ಯಾರು ಬೇಕಾದರೂ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯ ಪಟ್ಟಿದ್ದರು. 

ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕಿದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಅಡಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು. ಲಿಂಗ ತಾರತಮ್ಯ ಸರಿಯಲ್ಲ ಎಂದು ಸಾಂವಿಧಾನಿಕ ಪೀಠದ ಮತ್ತೊರ್ವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠವು 2017 ರ ಅಕ್ಟೋಬರ್ ನಲ್ಲಿ  ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರೀಮನ್, ಎ.ಎಂ. ಖಾನ್ವೀಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು‌ ಇಂಧು ಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಸುದೀರ್ಘ ವಿಚಾರಣೆ ಮಾಡಿ ಇದೇ ಆಗಸ್ಟ್ 1 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಇಂದು ಈ ಪ್ರಕರಣದ ಮಹತ್ವದ ತೀರ್ಪು ಹೊರಬೀಳಲಿದೆ

Trending News