ನವದೆಹಲಿ: ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಗಳ ನಡುವೆ ರಾಜಕೀಯ ಸಮರ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷೆ, ಪದ ಪ್ರಯೋಗಗಳ ಬಗ್ಗೆ ಗರಂ ಆಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅದನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರಚಾರ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, "ಕಾಂಗ್ರೆಸ್ ನಾಯಕರೇ, ಸರಿಯಾಗಿ ಕೇಳಿಸಿಕೊಳ್ಳಿ. ಒಂದು ವೇಳೆ ಹದ್ದು ಮೀರಿ ವರ್ತಿಸಿದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ" ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಪದ ಪ್ರಯೋಗ ಮಾಡಿದ್ದರು.
ಇದೀಗ ಈ ಮಾತುಗಳನ್ನು ಖಂಡಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದು, ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಗುಲಾಂ ನಬಿ ಅಜಾದ್, ಮೋತಿಲಾಲ್ ವೋಹ್ರಾ, ಅಂಬಿಕಾ ಸೋನಿ ಮತ್ತಿತರರು ಸಹಿ ಹಾಕಿದ್ದಾರೆ.
ಪ್ರಧಾನಿ ಅವರು ಮಾತಿನ ಧಾಟಿ ಸರಿಯಿಲ್ಲ. ಇದು ಬೆದರಿಕೆ ಹಾಕುವಂತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿ ರಾಷ್ಟಪತಿಗೆ ಪತ್ರ ಬರೆದಿದ್ದಾರೆ.