ನವದೆಹಲಿ: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ವಾರಗಳ ಗೊಂದಲದ ನಂತರ, ಆಗಸ್ಟ್ 2020 ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಡಾ.ರಮೇಶ್ ಪೋಖ್ರಿಯಾಲ್, ಶಿಕ್ಷಣ ಸಂಸ್ಥೆಗಳು 15 ಆಗಸ್ಟ್ 2020ರ ನಂತರ ತೆರೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ "ಆಗಸ್ಟ್ 15ರವರೆಗೆ ನಾವು ಎಲ್ಲಾ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರ ಬರೆದಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಶಾಲಾ-ಕಾಲೇಜುಗಳ ಪುನರಾರಂಭ ಮಾಡುವ ಕುರಿತು ಯೋಜನೆ ರೂಪಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದರು.
ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡ ಮನೀಶ್ ಸಿಸೋಡಿಯಾ, " ಕೊರೊನಾ ವೈರಸ್ ಸಹ ಅಸ್ತಿತ್ವವನ್ನು ಸ್ವೀಕರಿಸುತ್ತಾ ದೇಶಾದ್ಯಂತ ಇರುವ ಶಾಲೆಗಳ ಪಾತ್ರವನ್ನು ಹೊಸದಾಗಿ ನಿರ್ಧರಿಸಬೇಕು" ಎಂದಿದ್ದರು.
ಜೊತೆಗೆ "ಮುಂಬರುವ ಸವಾಲುಗಳಿಗೆ ನಾವು ಇಂದಿನಿಂದ ನಮ್ಮ ಶಾಲೆಗಳನ್ನು ಸಿದ್ಧಪಡಿಸದೇ ಹೋದಲ್ಲಿ ಇದು ನಮ್ಮ ಐತಿಹಾಸಿಕ ತಪ್ಪು ಆಗಲಿದೆ. ಮುಂಬರುವ ದಿನಗಳಲ್ಲಿ ಶಾಲೆಗಳ ಸಿಲೆಬಸ್ ಕೇವಲ ಪುಸ್ತಕಗಳಿಗೆ ಮಾತ್ರವೇ ಸೀಮೀತವಾಗಿರದೇ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಜೀವನ ಜೀವಿಸಲು ಮಾನಸಿಕವಾಗಿ ಸದೃಢಪಡಿಸುವುದಾಗಿದೆ" ಎಂದು ಸಿಸೋಡಿಯಾ ಬರೆದುಕೊಂಡಿದ್ದರು.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೆಹಲಿಯ ಎಲ್ಲ ಶಾಲಾ-ಕಾಲೇಜುಗಳು ಮಾರ್ಚ್ ತಿಂಗಳಿನಿಂದಲೇ ಬಂದ್ ಮಾಡಲಾಗಿದೆ. ಇಂತಹುದರಲ್ಲಿ ಆನ್ಲೈನ್ ಮೂಲಕ ವಿದ್ಯಾಭ್ಯಾಸ ಹೇಳಿಕೊಡಲಾಗುತ್ತಿದೆ. ಆದರೆ, ಇನ್ನೊಂದೆಡೆ ಇದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಹಾನಿಯನ್ನು ಕೂಡ ನಾವು ಪರಿಗಣಿಸಬೇಕಾಗಿದೆ.