VIDEO: ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು; ಸತ್ಯವಾಯ್ತು ಪ್ರಧಾನಿ ಮೋದಿ ಭವಿಷ್ಯವಾಣಿ

ಎಸ್​ಪಿ-ಬಿಎಸ್​ಪಿ ಮೈತ್ರಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಪ್ರಧಾನಿ ಮೋದಿ ಎಪ್ರಿಲ್ 20 ರಂದು ಈಟಾದಲ್ಲಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಮೇ 23 ರಂದು ಎಸ್​ಪಿ-ಬಿಎಸ್​ಪಿ ಮೈತ್ರಿ ಮುರಿಯಲಿದೆ ಎಂದಿದ್ದರು.

Last Updated : Jun 5, 2019, 09:58 AM IST
VIDEO: ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು; ಸತ್ಯವಾಯ್ತು ಪ್ರಧಾನಿ ಮೋದಿ ಭವಿಷ್ಯವಾಣಿ title=

ನವದೆಹಲಿ: ಉತ್ತರಪ್ರದೇಶದ ಸಮಾಜವಾದಿ ಪಕ್ಷ(ಎಸ್​ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ(ಬಿಎಸ್​ಪಿ)ದ ನಡುವೆ ಮಾಡಿಕೊಳ್ಳಲಾಗಿದ್ದ ಮೈತ್ರಿ ಬಹುತೇಕ ಮುರಿದಿದೆ. ಈ ಬಗ್ಗೆ ಎರಡೂ ಪಕ್ಷಗಳು ಮಂಗಳವಾರ ಘೋಷಿಸಿವೆ. ಎಸ್​ಪಿ-ಬಿಎಸ್​ಪಿ ಮೈತ್ರಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಪ್ರಧಾನಿ ಮೋದಿ ಎಪ್ರಿಲ್ 20 ರಂದು ಈಟಾದಲ್ಲಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಮೇ 23 ರಂದು ಎಸ್​ಪಿ-ಬಿಎಸ್​ಪಿ ಮೈತ್ರಿ ಮುರಿಯಲಿದೆ ಎಂದಿದ್ದರು.

ಮತ್ತೊಂದೆಡೆ, ಬಿಜೆಪಿ ಟ್ವಿಟ್ಟರ್ ಹ್ಯಾಂಡಲ್ನಿಂದ ಪ್ರಧಾನಿ ಮೋದಿ ಅವರ ಈಟಾ ರ‍್ಯಾಲಿ ವೀಡಿಯೊವನ್ನು  ಟ್ವೀಟ್ ಮಾಡಿರುವ ಬಿಜೆಪಿ 'ಇದು ಸಂಭವಿಸಬೇಕಿತ್ತು' ಎಂದು ಬರೆದುಕೊಂಡಿದೆ.

ಬಿಜೆಪಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರಈಟಾ ರ‍್ಯಾಲಿ ವಿಡಿಯೋದಲ್ಲಿ ಪ್ರಧಾನಿ ಮೋದಿ ಹೀಗೆ ಹೇಳುತ್ತಾರೆ, "ಸಹವರ್ತಿಗಳೇ, ಒಂದು ಸರ್ಕಾರವು ಪ್ರಬಲ ಸರ್ಕಾರ ಮತ್ತು ಪ್ರಬಲ ಭಾರತದ ಬಗ್ಗೆ ಕನಸು ಕಾಣಬಹುದು. ಟೊಳ್ಳಾದ ಭರವಸೆಗಳನ್ನು ನೀಡುತ್ತಾ ಟೊಳ್ಳು ಸ್ನೇಹ ಪ್ರದರ್ಶಿಸುವವರ ಬಗ್ಗೆ ನಿಮಗೆ ಚೆನ್ನಾಗಿಯೇ ತಿಳಿದಿದೆ. ಚುನಾವಣೆಗಳು ನಡೆಯುತ್ತಿವೆ ಮತ್ತು ಚುನಾವಣೆ ಅಂತ್ಯಗೊಂಡಂತೆ ಅವರಿಬ್ಬರ ನಡುವಿನ ಈ ಟೊಳ್ಳು ಸ್ನೇಹ ಕೊನೆಗೊಳ್ಳಲಿದೆ. ಒಬ್ಬರ ವಿರುದ್ಧ ಒಬ್ಬರು ಹಗೆ ಸಾಧಿಸುತ್ತಿದ್ದವರು ಇಂದು ಮೈತ್ರಿ ಮಂತ್ರ ಜಪಿಸುತ್ತಿದ್ದಾರೆ. ಈ ಮೈತ್ರಿ ಕೊನೆಗೊಳ್ಳುವ ದಿನಾಂಕ ಕೂಡ ನಿಗದಿಪಡಿಸಲಾಗಿದೆ. ಈ ನಕಲಿ ಸ್ನೇಹವು ಮೇ 23 ಗುರುವಾರ ಮುರಿಯಲಿದೆ" ಎಂದಿದ್ದರು.

ಜೂನ್ 3 ರಂದು ಅಂದರೆ ಮೇ 23ರ 11 ದಿನಗಳ ನಂತರ ಎಸ್​ಪಿ-ಬಿಎಸ್​ಪಿ ಮೈತ್ರಿ ನಡುವೆ ಬಿರುಕು ಮೂಡಿದೆ. ಜೂನ್ 4 ರಂದು ಬಿಎಸ್​ಪಿ ವಕ್ತಾರರು ಸುದ್ದಿಗೋಷ್ಠಿ ನಡೆಸಿ ಭವಿಷ್ಯದಲ್ಲಿ ಅವರು ಎಸ್​ಪಿ ಜೊತೆಗಿನ ಮರು-ಒಡನಾಟದ ಆಯ್ಕೆಯನ್ನು ಇಟ್ಟುಕೊಂಡಿದ್ದು, ಉಭಯ ಪಕ್ಷಗಳ ನಡುವೆ ಯಾವುದೇ 'ಬ್ರೇಕ್ ಅಪ್' ಆಗಿಲ್ಲ ಎಂದಿದ್ದಾರೆ. 

ಈ ಬಗ್ಗೆ ಮಾತನಾಡಿದ್ದ ಎಸ್​ಪಿ ಅಧ್ಯಕ್ಷ  ಅಖಿಲೇಶ್ ಯಾದವ್, ಮಾರ್ಗಗಳು ವಿಭಿನ್ನವಾಗಿರುವಾಗ ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ನಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದರು. 

ಇನ್ನು ಎಸ್​ಪಿ ಜೊತೆಗಿನ ಮೈತ್ರಿ ಕೈಬಿಡುವ ಬಗ್ಗೆ ಮಾತನಾಡಿರುವ ಮಾಯಾವತಿ, ಎಸ್​ಪಿ ಜೊತೆಗಿನ ಮೈತ್ರಿ ಶಾಶ್ವತವಾಗಿ ಕೊನೆಗೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಎಸ್​ಪಿ ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡರು. ಆದರೆ ಮುಂದೆ ಈ ಬಗ್ಗೆ ಅವರಿಗೆ ಹೆಚ್ಚಿನ ತಯಾರಿ ಅಗತ್ಯವಿದೆ. ಎಸ್​ಪಿ ಮುಖ್ಯಸ್ಥರು ತನ್ನ ರಾಜಕೀಯ ಕೆಲಸದ ಕಾರ್ಯಗಳ ನಡುವೆ ಪಕ್ಷದ "ಮಿಷನರಿ" ಸರಿಪಡಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವು ಖಂಡಿತವಾಗಿಯೂ ಅವರೊಂದಿಗೆ ಮುಂದುವರಿಯುತ್ತೇವೆ. ಇದರರ್ಥ ನಾವು ಈಗ 'ಬ್ರೇಕ್ಅಪ್' ಆಗಿದ್ದೇವೆ ಎಂದಲ್ಲ ಎಂದು ಹೇಳಿದರು.

Trending News