Karnataka Election 2023: ಸಂಪೂರ್ಣ ಉಚಿತ ಯೋಜನೆ ನೀಡಿಲ್ಲ, ಜನರಿಗೆ ಬದುಕು ಕಟ್ಟಿಕೊಡುವ ಪ್ರಜಾ ಪ್ರಣಾಳಿಕೆ: ಸಚಿವ ಸುಧಾಕರ್‌

Karnataka Election 2023: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಸಚಿವ ಡಾ.ಕೆ ಸುಧಾಕರ್‌, ಇದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ. ಎಲ್ಲವೂ ಉಚಿತವೆಂದು ಖಜಾನೆ ಖಾಲಿ ಮಾಡಲು ಬಿಜೆಪಿ ತಯಾರಿಲ್ಲ ಎಂದರು.   

Written by - Zee Kannada News Desk | Last Updated : May 1, 2023, 11:06 PM IST
  • ಎಲ್ಲವೂ ಉಚಿತವೆಂದು ಖಜಾನೆ ಖಾಲಿ ಮಾಡಲು ಬಿಜೆಪಿ ತಯಾರಿಲ್ಲ
  • ಇದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ
  • ಸಚಿವ ಡಾ.ಕೆ ಸುಧಾಕರ್‌ ಹೇಳಿಕೆ
Karnataka Election 2023: ಸಂಪೂರ್ಣ ಉಚಿತ ಯೋಜನೆ ನೀಡಿಲ್ಲ, ಜನರಿಗೆ ಬದುಕು ಕಟ್ಟಿಕೊಡುವ ಪ್ರಜಾ ಪ್ರಣಾಳಿಕೆ: ಸಚಿವ ಸುಧಾಕರ್‌ title=

ಬೆಂಗಳೂರು: ಜನರಿಗೆ ಬದುಕು ಕಟ್ಟಿಕೊಡುವ ಪ್ರಜಾ ಪ್ರಣಾಳಿಕೆಯನ್ನು ಬಿಜೆಪಿ ನೀಡಿದೆ. ಉಚಿತ ಯೋಜನೆಗಳಿಗೆ ಬಿಜೆಪಿ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ, ಅದರಲ್ಲಿ ನಂಬಿಕೆಯೂ ಇಲ್ಲ. ಆದರೆ ಕೆಲ ವರ್ಗಗಳ ಸಬಲೀಕರಣಕ್ಕಾಗಿ ಮಾತ್ರ ನಿರ್ದಿಷ್ಟ ಯೋಜನೆ ನೀಡಲಾಗಿದೆ ಎಂದು ಪ್ರಣಾಳಿಕೆ ಸಮಿತಿ ಸಂಚಾಲಕರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಉಚಿತ ವಿದ್ಯುತ್‌, ಉಚಿತ ನೀರಿನ ಬಿಲ್‌, ಉಚಿತ ಬಸ್‌ ಶುಲ್ಕನಂತಹ ಯೋಜನೆಗಳು ಸಂಪೂರ್ಣ ಉಚಿತ ಯೋಜನೆಗಳಾಗಿವೆ. ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲ, ನಾವು ಎಲ್ಲವನ್ನೂ ಉಚಿತ ನೀಡುತ್ತೇವೆ ಎಂದು ಹೇಳಿಕೊಂಡು ಖಜಾನೆ ಖಾಲಿ ಮಾಡಲು ನಾವು ತಯಾರಿಲ್ಲ. ಆದರೆ ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ನೀಡಿದರೆ ಅದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುತ್ತದೆ. ಈ ರೀತಿ ಸಾಮಾಜಿಕ ಲಾಭವನ್ನು ನೋಡಿ ಯೋಜನೆಗಳನ್ನು ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ತಂದ ಉಜ್ವಲ ಯೋಜನೆಯಿಂದ ಅನೇಕ ಮಹಿಳೆಯರ ಆರೋಗ್ಯ ಸುಧಾರಿಸಿದೆ. ಮಹಿಳಾ ಸಬಲೀಕರಣಕ್ಕಾಗಿ ಮಾತ್ರ 3 ಸಿಲಿಂಡರ್‌ ನೀಡಲಾಗುವುದು ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ - ಸಿಎಂ ಬೊಮ್ಮಾಯಿ‌

ಕಾಂಗ್ರೆಸ್‌ ಕಲ್ಪಿತ ಬಂಡಲ್‌ ಭರವಸೆಗಳಿಗೆ ಜನರು ಸೊಪ್ಪು ಹಾಕುವುದಿಲ್ಲ. ಕಾಂಗ್ರೆಸ್‌ ಆಡಳಿತದ ರಾಜ್ಯದಲ್ಲಿ ಇದೇ ರೀತಿ ಸುಳ್ಳು ಭರವಸೆ ನೀಡಿದ್ದಾರೆ. 11 ರಾಜ್ಯಗಳಲ್ಲಿ ಇದೇ ರೀತಿ ಭರವಸೆ ನೀಡಿಯೇ ಅಲ್ಲಿ ಕಾಂಗ್ರೆಸ್‌ ಸೋತಿದೆ. ಇದೇ ಪರಿಸ್ಥಿತಿ ರಾಜ್ಯದಲ್ಲೂ ಬರಲಿದೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 100 ಜನರು ಆಹಾರ ಸೇವಿಸಿದರೆ 1,000 ಜನರು ಆಹಾರ ಸೇವಿಸಿದ ಬಿಲ್‌ ನೀಡಲಾಗಿದೆ. ಈ ರೀತಿ ಜನರ ಹಣ ಬಳಸಿ ಅಕ್ರಮ ಮಾಡಲಾಗಿದೆ. ಇದು ಯಾವುದೇ ದರ್ಶನಿಗಿಂತ ಭಿನ್ನವಲ್ಲ. ಆದರೆ ಅಟಲ್‌ ಕ್ಯಾಂಟೀನ್‌ನಲ್ಲಿ ಸಿರಿಧಾನ್ಯ, ಹಾಲು ಹಾಗೂ ಇತರೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: "ಕ್ವಾಂಯ್ಕ್ ಅಂದ್ರೆ ಎನ್ ಕೌಂಟರ್, ಭಾರತದ ವಿರುದ್ಧ ಮಾತಾಡಿದ್ರೆ ಢಂ ಢಂ"ಎಂದ ಯತ್ನಾಳ್ 

ಆಹಾರದ ಕಿಟ್‌

ಕೃಷಿ, ಆಹಾರ ಸಂಸ್ಕರಣೆ, ಸೇವಾ ವಲಯ, ಉತ್ಪಾದನಾ ವಲಯ, ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ. ಅನ್ನ ಎಂದರೆ ಕೇವಲ 10 ಕೆಜಿ ಅಕ್ಕಿ ನೀಡುವುದಲ್ಲ. 5 ಕೆಜಿ ಅಕ್ಕಿ ಜೊತೆಗೆ, 5 ಕೆಜಿ ಸಿರಿಧಾನ್ಯ ಸೇರಿಸಲಾಗಿದೆ. ನಂದಿನಿ ಹಾಲು ಕೂಡ ನೀಡಿ ಸಂಪೂರ್ಣ ಆಹಾರದ ಕಿಟ್‌ಗಳನ್ನು ಪ್ರತಿ ತಿಂಗಳು ಬಡವರಿಗೆ ನೀಡಲಾಗುವುದು. ಇದರಿಂದ ಆರೋಗ್ಯಯುಕ್ತ ಕರ್ನಾಟಕ ನಿರ್ಮಾಣವಾಗಲಿದೆ. ಸಿರಿಧಾನ್ಯ ಹಾಗೂ ನಂದಿನಿ ಹಾಲು ನೀಡುವುದರಿಂದ ಈ ಉತ್ಪನ್ನಗಳಿಗೆ ಉತ್ತೇಜನ ಸಿಗುತ್ತದೆ. ಹಾಲಿಗೆ ಮೊದಲ ಬಾರಿಗೆ ಪ್ರೋತ್ಸಾಹಧನ ನೀಡಿದ್ದೇ ಬಿಜೆಪಿ ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಸುಮಾರು 6 ಲಕ್ಷ ಸಲಹೆ, ಆನ್‌ಲೈನ್‌ನಲ್ಲಿ 29 ಸಾವಿರ ಸಲಹೆಗಳು ಬಂದಿವೆ. ಸುಮಾರು 50 ಕ್ಷೇತ್ರಗಳ ಪರಿಣತರೊಂದಿಗೆ ಸಭೆ ನಡೆಸಲಾಗಿದೆ. ಈ ರೀತಿ ತಳಮಟ್ಟದಿಂದಲೇ ಪ್ರಣಾಳಿಕೆಗೆ ಸಲಹೆ ಸಂಗ್ರಹಿಸಲಾಗಿದೆ. ಅಲ್ಲದೆ, ರಾಜ್ಯದ ಆರ್ಥಿಕ ವ್ಯವಸ್ಥೆ ಅಧ್ಯಯನ ಮಾಡಿ ಭರವಸೆ ರೂಪಿಸಲಾಗಿದೆ. ಇತರೆ ಪಕ್ಷಗಳು ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಲು ನೋಡುತ್ತಿವೆ. ಅಂತಹ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದರು.

ಕಾಂಗ್ರೆಸ್‌ನ ಗ್ಯಾರಂಟಿ ಎನ್ನುವ ಬದಲು ಗೋರಂಟಿ ಎನ್ನುವುದು ಸೂಕ್ತ. ಇದು ಮೂರ್ನಾಲ್ಕು ದಿನಗಳಿದ್ದು, ನಂತರ ಹೊರಟುಹೋಗುತ್ತದೆ. ನಮ್ಮ ಗ್ಯಾರಂಟಿ ಏನೆಂದರೆ, ಕೃಷಿ ಸಮ್ಮಾನ್‌ ಯೋಜನೆಯಡಿ ರೈತರಿಗೆ ನೀಡುತ್ತಿರುವ 10 ಸಾವಿರ ರೂ, ವಿದ್ಯಾನಿಧಿ ಯೋಜನೆಯಡಿ ನೀಡುವ ವಿದ್ಯಾರ್ಥಿವೇತನ. ಆಯುಷ್ಮಾನ್‌ ಭಾರತ್‌ನಡಿ ನೀಡುವ 5 ಲಕ್ಷ ರೂ. ವಿಮೆ. ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಗ್ಯಾರಂಟಿ ಎಂದರು.

ಇದನ್ನೂ ಓದಿ: "ಮೋದಿ ಅವರೇ ನೀವು ನಮ್ಮ ಯೋಜನೆಗಳನ್ನು ಟೀಕಿಸುವುದಾದರೆ, ನೀವು ರಾಜ್ಯಕ್ಕಾಗಿ ಏನು ಮಾಡಲು ಹೊರಟಿದ್ದೀರಿ ಎಂದು ಹೇಳಿ"

ಆರೋಗ್ಯಕ್ಕೆ ಒತ್ತು 

ಬಿಪಿಎಲ್‌ಗೆ 5 ಲಕ್ಷ ರೂ. ಇದ್ದ ಆಯುಷ್ಮಾನ್‌ ಭಾರತ್‌ ವಿಮೆಯನ್ನು 10 ಲಕ್ಷ ರೂ. ಮಾಡಲಾಗುವುದು. ಎಪಿಎಲ್‌ಗೆ ವರ್ಷಕ್ಕೆ 5 ಲಕ್ಷ ರೂ. ವಿಮೆ ನೀಡಲಾಗುವುದು. ಈ ಮೂಲಕ ಎಲ್ಲರಿಗೂ ಆರೋಗ್ಯ ಎಂಬ ಸಂದೇಶ ನೀಡಲಾಗಿದೆ. ನಮ್ಮ ಕ್ಲಿನಿಕ್‌ಗಳನ್ನು ನಗರಗಳ ಎಲ್ಲಾ ಕೊಳಗೇರಿಗಳಲ್ಲಿ ಮಾಡಲಾಗುವುದು. ಈ ರೀತಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದರು. 

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಈ ಸಮಿತಿ ವರದಿ ಸಲ್ಲಿಸಿದ ಬಳಿಕ ಪರಿಶೀಲಿಸಿ ಕ್ರಮ ವಹಿಸಲಾಗುವುದು. ದೇವಸ್ಥಾನಗಳ ಉತ್ತಮ ನಿರ್ವಹಣೆ ಬಗ್ಗೆ ಕ್ರಮ ವಹಿಸಲು ಜನರಿಗೆ ಅಧಿಕಾರ ನೀಡಲಾಗುತ್ತಿದೆ. ಹಿಂದುತ್ವ ಎನ್ನುವುದು ಜೀವನ ಪದ್ಧತಿ. ಇದನ್ನು ಸಂರಕ್ಷಿಸುವುದು ನಮ್ಮ ಹೊಣೆ ಎಂದರು. 

ಬೇಜವಾಬ್ದಾರಿಯುತ ರಾಜಕಾರಣಿ

ಪ್ರಿಯಾಂಕ್‌ ಖರ್ಗೆಯವರು ಬೇಜವಾಬ್ದಾರಿಯುತ ರಾಜಕಾರಣಿಯಾಗಿದ್ದು, ತಮ್ಮ ತಂದೆಯ ರಾಜಕೀಯ ಹಿನ್ನೆಲೆಯ ಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರ ಬಗ್ಗೆ ಕೀಳಾಗಿ ಮಾತಾಡುವುದನ್ನು ಖಂಡಿಸುತ್ತೇನೆ. ಅವರ ತಂದೆ ಕೂಡ ಪ್ರಧಾನಿಯ ಬಗ್ಗೆ ಕೀಳಾಗಿ ಮಾತಾಡಿದ್ದಾರೆ. ಕಾಂಗ್ರೆಸ್‌ನವರು ಸೋಲುವ ಸಾಧ್ಯತೆ ಗೋಚರಿಸಿದಾಗೆಲ್ಲ ಪ್ರಧಾನಿಯನ್ನು ನಿಂದಿಸಿದ್ದಾರೆ. ಅವರು ಹೀಗೆ ನಿಂದಿಸಿದಾಗಲೆಲ್ಲಾ ಭಾರತೀಯರು ಪ್ರಧಾನಿ ಮೋದಿಯನ್ನು ಪ್ರೀತಿಸಿ ಬೆಂಬಲಿಸಿದ್ದಾರೆ ಹಾಗೂ ಕಾಂಗ್ರೆಸ್‌ನವರನ್ನು ಸೋಲಿಸಿದ್ದಾರೆ ಎಂದರು.

ಇದನ್ನೂ ಓದಿ: ನರೇಂದ್ರ ಮೋದಿಯವರಿಗೆ ನಾಲಾಯಕ್ ಎಂದವರಿಗೆ ತಕ್ಕ ಪಾಠ ಕಲಿಸಿ: ಸಿಎಂ ಬೊಮ್ಮಾಯಿ‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News