ವಾಂತಿ ಬೇಧಿಯಿಂದ‌ ಸಾವಿಗೀಡಾದ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಶಿವರಾಜ ತಂಗಡಗಿ

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಸರಿಹಾಳ ಗ್ರಾಮಕ್ಕೆ ಜೂನ್ 11ರಂದು ಭೇಟಿ ನೀಡಿದರು.

Written by - Manjunath N | Last Updated : Jun 11, 2023, 11:02 PM IST
  • ಗ್ರಾಮ ಸಂಚಾರ: ಸಚಿವರು ಗ್ರಾಮದ ಕೆಲವು ಓಣಿಗಳಲ್ಲಿ ಸಂಚರಿಸಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರು ಸರಬರಾಜು ಹಾಗೂ ಇನ್ನೀತರ ವಿಷಯಗಳ ಬಗ್ಗೆ ಚರ್ಚಿಸಿ ಶುಚಿತ್ವ ಕಾಯ್ದುಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ಮಾಡಿದರು.
  • ಕುಟುಂಬದವರಿಗೆ ಸಾಂತ್ವನ: ಕಲುಷಿತ ನೀರು ಸೇವಿಸಿ ಮೃತಪಟ್ಟ ಗ್ರಾಮದ ಹೊನ್ನಮ್ಮ ಗಂಡ ಶಿವಪ್ಪ ನೆಟೆಗುಡ್ಡ ಅವರ ಮತ್ತು ಶೃತಿ ಮಂಗಳೇಶ ಲಾದುಣಸಿ ಅವರ ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡುವುದಾಗಿ ಧೈರ್ಯ ತುಂಬಿದರು.
ವಾಂತಿ ಬೇಧಿಯಿಂದ‌ ಸಾವಿಗೀಡಾದ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಶಿವರಾಜ ತಂಗಡಗಿ title=

ಕೊಪ್ಪಳ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಸರಿಹಾಳ ಗ್ರಾಮಕ್ಕೆ ಜೂನ್ 11ರಂದು ಭೇಟಿ ನೀಡಿದರು.

ಮೊದಲಿಗೆ ಸಚಿವರು, ವಾಂತಿ ಬೇಧಿಯಿಂದಾಗಿ ಅಸುನಿಗಿದ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಇದುವರೆಗಿನ ಮಾಹಿತಿ ಪಡೆದರು.

ಬೇಧಿಯಿಂದಾಗಿ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅನುಷಾ (10) ಹಾಗೂ ಐಶ್ವರ್ಯ (17)‌ ಮತ್ತು ಹನುಮಮ್ಮ (40) ಅವರ ಆರೋಗ್ಯದ ಬಗ್ಗೆ ಇದೆ ವೇಳೆಯಲ್ಲಿ ಸಚಿವರು ವಿಚಾರಿಸಿದರು.

ಅಧಿಕಾರಿಗಳಿಗೆ ನಿರ್ದೇಶನ: ಯಾವುದೇ ಗ್ರಾಮಗಳಲ್ಲಿ ವಾಂತಿ ಬೇಧಿ ಪ್ರಕರಣಗಳು ಮರುಕಳಿಸಬಾರದು. ಕಾಯಿಸಿ ಆರಿಸಿದ ನೀರು ಕುಡಿಯಲು ಮತ್ತು ಶುಚಿತ್ವದ ಬಗ್ಗೆ ಸಾಕಷ್ಟು ಗಮನ ಕೊಡಲು ಕರಪತ್ರ ವಿತರಿಸಿ ಜಾಗೃತಿ ಮೂಡಿಸಲು ಆಯಾ ಗ್ರಾಮ ಪಂಚಾಯತ್ ಆಡಳಿತ ಹಾಗೂ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಗ್ರಾಮೀಣ ಮಟ್ಟದ ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮ ಸಂಚಾರ: ಸಚಿವರು ಗ್ರಾಮದ ಕೆಲವು ಓಣಿಗಳಲ್ಲಿ ಸಂಚರಿಸಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರು ಸರಬರಾಜು ಹಾಗೂ ಇನ್ನೀತರ ವಿಷಯಗಳ ಬಗ್ಗೆ ಚರ್ಚಿಸಿ ಶುಚಿತ್ವ ಕಾಯ್ದುಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ಮಾಡಿದರು.

ಕುಟುಂಬದವರಿಗೆ ಸಾಂತ್ವನ: ಕಲುಷಿತ ನೀರು ಸೇವಿಸಿ ಮೃತಪಟ್ಟ ಗ್ರಾಮದ ಹೊನ್ನಮ್ಮ ಗಂಡ ಶಿವಪ್ಪ ನೆಟೆಗುಡ್ಡ ಅವರ ಮತ್ತು ಶೃತಿ ಮಂಗಳೇಶ ಲಾದುಣಸಿ ಅವರ ಕುಟುಂಬದವರಿಗೆ ಭೇಟಿ ಮಾಡಿ

ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡುವುದಾಗಿ ಧೈರ್ಯ ತುಂಬಿದರು.

ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ ಪರಿಹಾರ: ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು ಹೇಳಿದಂತೆ ಕಲುಷಿತ ನೀರು ಸೇವನೆಯಿಂದ‌ ಮೃತಪಟ್ಟ ಕುಟುಂಬದವರಿಗೆ ತಲಾ 2 ಲಕ್ಷ‌ ರೂ ಘೋಷಣೆ ಮಾಡಿದ್ದು ವಾರದೊಳಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಜಲಜೀವನ್ ಮಿಷನ್ ಸರಿಪಡಿಸಲು ನಿರ್ದೇಶನ: ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೂನ್ 12 ರಿಂದಲೇ ಅನ್ವಯವಾಗುವಂತೆ ಜಲಜೀವನ ಮಿಷನ್ ಯೋಜನೆಯ ಲೋಪದೋಷ ಸರಿಪಡಿಸಲು ಕೂಡಲೇ ಕ್ರಮವಹಿಸಬೇಕು ಎಂದು‌ ಸಚಿವರು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾಗಿ ಸಚಿವರು ಹೇಳಿದರು.

ಅಕ್ರಮ ಚಟುವಟಿಕೆಗೆ ಬ್ರೇಕ್: ಜಿಲ್ಲೆಯ ಯಾವುದೇ ಕಡೆಗಳಲ್ಲಿ ಮರಳು ಸಾಗಣೆ, ಜೂಜು,‌ ಓಸಿಯಂತಹ ಅಕ್ರಮ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಇದೆ ವೇಳೆ ಸಚಿವರು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಪಂ ಸಿಇಓ ರಾಹುಲ್ ಪಾಂಡೆಯ, ಸಹಾಯಕ ಆಯುಕ್ತರಾದ ಬಸವಣಪ್ಪ ಕಲಶೆಟ್ಟಿ, ಗಂಗಾವತಿ ಡಿಎಸ್ಪಿ ಆರ್ ಎಸ್ ಉಜ್ಜನಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಲಕನಂದಾ ಕೆ., ಕನಕಗರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಂದಕೂರ, ಉಪ ತಹಸೀಲ್ದಾರ ಮಹಾಂತಗೌಡ, ತಾಲೂಕು ಆರೋಗ್ಯಾಧಿಕಾರಿ ಶರಣಬಸಪ್ಪ, ಸಿಪಿಐ ಎಸ್ ಮಂಜುನಾಥ, ಬಸರಿಹಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ವಿಶ್ವನಾಥ, ಉಪಾಧ್ಯಕ್ಷ ಶಿವಪ್ಪ ಸುಳೆಕಲ್, ಸದಸ್ಯರಾದ ಹೊಳೆಗೌಡ ಪೊಲೀಸ ಪಟೇಲ್, ಮಾರುತೆಪ್ಪ ನಿಡಗುಂದಿ, ಪಿಡಿಓ ರವಿಂದ್ರನಾಥ ಹಾಗು ಇತರರು ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News