ಅನ್ನದಾತರ ಮೇಲೆ ಕಿಡಿ ಕಾರಿದ ಹೆಚ್.ಡಿ. ಕುಮಾರಸ್ವಾಮಿ

ತಮ್ಮದು (JDS) ರೈತರ ಪರ ಇರುವ ಪಕ್ಷ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗ ಸರಣಿ ಟ್ವೀಟ್ ಗಳ ಮೂಲಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ನಾಯಕರ ಮೇಲೆ ಮುಗಿಬಿದ್ದಿದ್ದಾರೆ.

Last Updated : Dec 10, 2020, 12:58 PM IST
  • ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕಾಯಿದೆ ಬೆಂಬಲಿಸಿದ ಜೆಡಿಎಸ್ ನಿಲುವಿನ ಬಗ್ಗೆ ರೈತ ನಾಯಕರ ಆಕ್ಷೇಪ
  • ರೈತರ ₹25 ಸಾವಿರ ಕೋಟಿ ಮೊತ್ತದ ಸಾಲಮನ್ನಾ ಮಾಡುವಾಗ ರೈತ ಸಂಘಗಗಳ ಬಳಿ ಏನಾದರೂ ಕಮಿಷನ್‌ ಪಡೆದೆನೇ?
  • ಕೆಲ ರೈತ ನಾಯಕರ ಬಾಯಲ್ಲಿ ಬರುತ್ತಿರುವ 'ಕಿಕ್‌ಬ್ಯಾಕ್‌' ಏನಾದರೂ ಪಡೆದೆನೇ? - ಹೆಚ್.ಡಿ.ಕೆ. ಪ್ರಶ್ನೆ
ಅನ್ನದಾತರ ಮೇಲೆ ಕಿಡಿ ಕಾರಿದ ಹೆಚ್.ಡಿ. ಕುಮಾರಸ್ವಾಮಿ title=
File Image

ಬೆಂಗಳೂರು: ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕಾಯಿದೆ ಬೆಂಬಲಿಸಿದ ಜೆಡಿಎಸ್ ನಿಲುವಿನ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿರುವ ರೈತ ನಾಯಕರ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ತಾವು ರೈತರು ಪರ ಇದ್ದಾಗ ಇವರೆಲ್ಲಾ ಎಲ್ಲಿದ್ದರು? ಎಂದು ಪ್ರಶ್ನಿಸಿದ್ದಾರೆ‌.

ತಮ್ಮದು (JDS) ರೈತರ ಪರ ಇರುವ ಪಕ್ಷ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಈಗ ಸರಣಿ ಟ್ವೀಟ್ ಗಳ ಮೂಲಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ನಾಯಕರ ಮೇಲೆ ಮುಗಿಬಿದ್ದಿದ್ದಾರೆ.

"2013-14ರ ಕಾಲ. ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ರಾಮನಗರ, ಮಂಡ್ಯದಲ್ಲಿ ರೋಗದ ರುದ್ರ ನರ್ತನ. ಸರ್ಕಾರ ಸುಮ್ಮನಿತ್ತು. ಆಗ ಚನ್ನಪಟ್ಟಣ, ರಾಮನಗರ, ಕನಕಪುರ, ಮಂಡ್ಯದಲ್ಲಿ ಪ್ರತಿ ಕುಟುಂಬಕ್ಕೆ ₹25 ಸಾವಿರ ನೆರವು ವೈಯಕ್ತಿವಾಗಿ ನೀಡಿದ್ದೆ. ಆಗ ಈ ರೈತ ನಾಯಕರು ಎಲ್ಲಿದ್ದರು?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

"ಮಹದಾಯಿಗಾಗಿ ಯಮನೂರಿನಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾಂಗ್ರೆಸ್ ಸರ್ಕಾರ ಹಲ್ಲೆ ಮಾಡಿತ್ತು. ಆ ದಾಳಿಯನ್ನು ರೈತರು ಇಂದೂ ಮರೆತಿಲ್ಲ ಎಂದು ಇತ್ತೀಚೆಗೆ ಪತ್ರಿಕೆಗಳೂ ವರದಿ ಮಾಡಿವೆ. ಅಂದು ಯಮನೂರಿಗೆ ಧಾವಿಸಿ ರೈತರಿಗೆ ಸಾಂತ್ವನ ಹೇಳಿದ್ದು, ನಾನು. ಸರ್ಕಾರ ರೈತರ ಮೇಲೆ ದಾಳಿ ನಡೆಸುತ್ತಿದ್ದಾಗ ಈ ರೈತ ನಾಯಕರು ಎಲ್ಲಿದ್ದರು?" ಎಂದಿದ್ದಾರೆ

"ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೈತರ (Farmers) ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು. ನಿತ್ಯವೂ ಆತ್ಮಹತ್ಯೆಗಳು ವರದಿಯಾಗುತ್ತಿದ್ದವು. ಆಗ ರಾಜ್ಯದಾದ್ಯಂತ ಪ್ರವಾಸ ಮಾಡಿ, ಸಂಕಷ್ಟದಲ್ಲಿದ್ದ ರೈತರಿಗೆ ಕೈಲಾದಷ್ಟು ನೆರವು ನೀಡಿ, ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ನಾನು ಮಾಡಿದೆ.  ಆಗ ಈ ರೈತ ನಾಯಕರು ಎಲ್ಲಿದ್ದರು?" ಎಂದು ಕಿಡಿಕಾರಿದ್ದಾರೆ.

ಪಿಂಚಣಿ ಹಣ ಬಿಡುಗಡೆ ಮಾಡದೇ ಇದ್ದುದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ: ಕುಮಾರಸ್ವಾಮಿ

"ರೈತರ ₹25 ಸಾವಿರ ಕೋಟಿ ಮೊತ್ತದ ಸಾಲಮನ್ನಾ ಮಾಡುವಾಗ ರೈತ ಸಂಘಗಗಳ ಬಳಿ ಏನಾದರೂ ಕಮಿಷನ್‌ ಪಡೆದೆನೇ? ಕೆಲ ರೈತ ನಾಯಕರ ಬಾಯಲ್ಲಿ ಬರುತ್ತಿರುವ 'ಕಿಕ್‌ಬ್ಯಾಕ್‌' ಏನಾದರೂ ಪಡೆದೆನೇ? ರೈತ ನಾಯಕರು ಎನಿಸಿಕೊಂಡವರಿಗೆ ಸಾಲಮನ್ನಾ ವಿಚಾರವಾಗಿ ನನ್ನ ಕಡೆಗೆ ಕೃತಜ್ಞತೆ ಇದೆಯೇ? ರೈತರು ಸಾಲದ ಸುಳಿಯಲ್ಲಿದ್ದಾಗ ಈ ರೈತ ನಾಯಕರು ಎಲ್ಲಿದ್ದರು?" ಎಂದು ಪ್ರಶ್ನಿಸಿದ್ದಾರೆ.

"ರೈತರಿಗಾಗಿ ಇಂಥ ಹಲವು ಕಾರ್ಯಕ್ರಮಗಳನ್ನು ನಾನು ಸ್ವಯಂ ಪ್ರೇರಣೆಯಿಂದ ಮಾಡಿದ್ದೇನೆ. ಇವತ್ತು ನನ್ನ ವಿರುದ್ಧ ಅರಚುತ್ತಿರುವ ಇದೇ ರೈತ ನಾಯಕರೇನಾದರೂ ರೈತರ ಸಾಲಮನ್ನಾಕ್ಕಾಗಿ ನನ್ನ ಬಳಿ ಅರ್ಜಿ ಕೊಟ್ಟಿದ್ದರೇ? ಸಾಲಮನ್ನ ನನ್ನ ಕಾರ್ಯಕ್ರಮ. ಇಷ್ಟಾದರೂ 8 ಕೋಟಿ ಕಿಕ್‌ ಬ್ಯಾಕ್‌ ಪಡೆದ ಆರೋಪ ಮಾಡಿರುವ ಆ ನಾಯಕರಿಗೆ ದೇವರು ಒಳ್ಳೆಯದು ಮಾಡಲಿ" ಎಂದು ಹೇಳಿದ್ದಾರೆ.

"ರಾಜ್ಯದಲ್ಲಿ ರೈತರಿಗೆ ಸ್ಪಂದಿಸುವ ಪಕ್ಷವೇನಾದರೂ ಇದ್ದರೆ ಅದು ಜೆಡಿಎಸ್‌ ಮಾತ್ರ. ನೀರಾವರಿ, ಕೃಷಿ (Agriculture), ರೈತರ ಆರ್ಥಿಕ ಸಬಲೀಕರಣಕ್ಕೆ ರಾಜ್ಯದಲ್ಲಿ ಏನಾದರೂ ಒಳ್ಳೆಯದಾಗಿದ್ದರೆ ಅದು ಜೆಡಿಎಸ್‌ ನಿಂದ ಮಾತ್ರ. ಜೆಡಿಎಸ್‌ ರಾಜಕೀಯ ಪಕ್ಷ ಮಾತ್ರವಲ್ಲ. ಅದು ರೈತರಿಗಾಗಿ ಹೋರಾಡುವ ರೈತ ಸಂಘವೂ ಹೌದು ಎಂಬುದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ" ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

"ಇವತ್ತಿನ ಕೆಲ ರೈತ ಸಂಘಗಳು ರೈತರಿಗಾಗಿ ಹೋರಾಡುವುದನ್ನು ಬಿಟ್ಟು ಕಾಂಗ್ರೆಸ್‌ನಂಥ ಸಮಾಜವನ್ನು ಒಡೆಯುವ, ಜನರ ಆಶಯಗಳಿಗೆ ವಿರುದ್ಧವಾದ ಚಿಂತನೆಗಳನ್ನು ಹೊಂದಿರುವ ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ. ಭೂ ಸುಧಾರಣೆ ಕಾಯ್ದೆ ವಿಚಾರವಾಗಿ ಅನಗತ್ಯ ಹೋರಾಟ ನಡೆಸುತ್ತಿರುವ ಕೆಲ ರೈತ ಸಂಘಗಳ ಹಿಂದೆ ಕಾಂಗ್ರೆಸ್‌ ತೆರೆಮರೆಯ ರಾಜಕಾರಣ ಮಾಡುತ್ತಿದೆ" ಎಂದು ದೂರಿದ್ದಾರೆ.

ಯುದ್ಧದ ನಡುವೆ ನಮ್ಮವರನ್ನು ರಕ್ಷಿಕೊಳ್ಳುವಂತೆ ರೈತರ ಕೈ ಹಿಡಿಯಿರಿ ಎಂದು ಎಚ್‌ಡಿಕೆ ಕರೆ

"ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೆಡಿಎಸ್‌ ವಿರುದ್ಧ ತನ್ನ ಹೋರಾಟಗಳನ್ನು ರೂಪಿಸುತ್ತಿದೆ. ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್‌ ಈಗ ಅಡಗಿ ಕುಳಿತಿದೆ. ಅವರ ಮೂಲಕ ರಾಜಕೀಯದ ಹೇಳಿಕೆಗಳನ್ನು ಕೊಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್‌ ರೈತ ಸಂಘಗಳನ್ನೂ ಒಡೆಯುವ ಕೆಲಸಕ್ಕೆ ಕೈ ಹಾಕಿದೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

Trending News