ಅಂತ್ಯಸಂಸ್ಕಾರದಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ವಿಚಾರಣೆ ಆರಂಭಿಸಿದ ಮಾನವ ಹಕ್ಕು ಆಯೋಗ

ಆಂಬುಲೆನ್ಸ್ ಸೇವೆ ಲೋಪದಿಂದಾಗಿ ಸೋಂಕಿತರಿಗೆ 2-3 ದಿನ ಆಂಬುಲೆನ್ಸ್ ಸಿಗದೇ ಪ್ರಾಣ ಕಳೆದುಕೊಂಡ ಕೆಲ ಘಟನೆ ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿರಲು ಸಾಕು.   

Last Updated : Aug 1, 2020, 12:15 PM IST
ಅಂತ್ಯಸಂಸ್ಕಾರದಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ವಿಚಾರಣೆ ಆರಂಭಿಸಿದ ಮಾನವ ಹಕ್ಕು ಆಯೋಗ title=

ಬೆಂಗಳೂರು: COVID-19ನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಈಗ ವಿಚಾರಣೆ ಆರಂಭಿಸಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ತಮಗೆ ಪತ್ರ ಬರೆದಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ನಿಬಂಧಕರು ದಿನಾಂಕ 28.7.2020 ರಂದು ಆಯೋಗದ ಮುಂದೆ ಹಾಜರಾಗಲು ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಅಂದು ದೂರುದಾರರು ಮಾಹಿತಿ ಒದಗಿಸಲು ಹಾಜರಾಗಲು ಸಾಧ್ಯವಾಗಲಿಲ್ಲ. ಈ ದಿನಾಂಕವನ್ನು ಬದಲಿಸಿ ಆಗಸ್ಟ್-3 ಅಥವಾ ಆಗಸ್ಟ್-4 ರಂದು ಹಾಜರಾಗಲು ಮತ್ತೊಂದು ಸಮಯ ನಿಗದಿಪಡಿಸುವುದಾಗಿ ದೂರವಾಣಿ ಮೂಲಕ ಕೇಳಿಕೊಂಡಿದ್ದೇನೆ ಎಂದು ಎಚ್.ಕೆ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇವಲ 30 ಸೆಕೆಂಡುಗಳಲ್ಲಿ ಸಿಗಲಿದೆ ಕರೋನಾ ಟೆಸ್ಟ್ ರಿಪೋರ್ಟ್

ದಿನಾಂಕ 10.7.2020ರಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ “ಗೌರವಯುತ ಶವಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಸಕಾಲಕ್ಕೆ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವ ಅನುಕೂಲತೆ ಮತ್ತು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ನಮ್ಮ ಮಾನವ ಹಕ್ಕುಗಳಲ್ಲವೇ?  ಈ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮ ಕರ್ತವ್ಯ ಹೊಂದಿರುವ ಸರ್ಕಾರವೇ ಇವುಗಳ ಉಲ್ಲಂಘನೆಯ ಬಗ್ಗೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮವಾಗುತ್ತದೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ  ಕೋವಿಡ್-19  (COVID-19)  ಮಾರಿಯಿಂದಾಗಿ ಕರ್ನಾಟಕದ ಜನ ವಿಲ ವಿಲ ಒದ್ದಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 2000 ಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದಾರೆ. 40-50 ಜನ ಸಾವಿಗೀಡಾಗುತ್ತಿದ್ದಾರೆ. ಸರ್ಕಾರದ ನಿಷ್ಕ್ರಿಯವಾದ ಕೆಲಸ, ಸ್ಪಷ್ಟ ನಿಲುವುಗಳ ಕೊರತೆ, ಪ್ರಾಮಾಣಿಕ ಪ್ರಯತ್ನದ ಕೊರತೆ, ಸರಕಾರದಲ್ಲಿ ಇಲ್ಲದಿರುವ ಸಮನ್ವಯತೆ ಗಳಿಂದಾಗಿ ಅದರ ಜೊತೆಜೊತೆ ಎಲ್ಲಿ ನೋಡಿದಲ್ಲಿ ಭ್ರಷ್ಠಾಚಾರದ ವಾಸನೆಗಳಿಂದಾಗಿ ಜನರಿಗೆ ಆಸ್ಪತ್ರೆಯಲ್ಲಾಗಲಿ, COVID-19 ಕೇಂದ್ರಗಳಲ್ಲಾಗಲಿ ಅಥವಾ ಆಂಬುಲೆನ್ಸ್ ಸೇವೆಯಲ್ಲಾಗಲಿ ಸಮರ್ಪಕ ಸೇವೆ ಇಲ್ಲದಾಗಿದೆ.

ಆಂಬುಲೆನ್ಸ್ ಸೇವೆ ಲೋಪದಿಂದಾಗಿ ಸೋಂಕಿತರಿಗೆ 2-3 ದಿನ ಆಂಬುಲೆನ್ಸ್ ಸಿಗದೇ ಪ್ರಾಣ ಕಳೆದುಕೊಂಡ ಕೆಲ ಘಟನೆ ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿರಲು ಸಾಕು. ಕೆಲ ಘಟನೆಗಳ ಪತ್ರಿಕಾ ವರದಿ ಲಗತ್ತಿಸಲಾಗಿದೆ ಹಾಗೂ ಈ ಪತ್ರದ ಜೊತೆ ಪೆನ್ ಡ್ರೈವ್ ಅನ್ನು ಕಳಿಸಿರುವೆ ಎಂದು ವಿವರಿಸಿದ್ದಾರೆ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ಪ್ರವೇಶ ನೀಡುತ್ತಿಲ್ಲ. ಇದರಿಂದ ಕೆಲವರು ಪ್ರವೇಶ ಸಿಗದೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ವರದಿಗಳು ಹಾಗೂ ಅದರ ಚಿತ್ರಗಳನ್ನು ಕಳಿಸಿರುವೆ. ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆಗಾಗಿ ಗುಣಮಟ್ಟದ ಪಿಪಿಇ ಕಿಟ್ ಪೂರೈಸದೇ ನಿರ್ಲಕ್ಷದಿಂದಾಗಿ ಅವರ ಜೀವ ಗಂಡಾಂತರಕ್ಕೆ ದೂಡುವಂತೆ ಮಾಡಲಾಗಿದೆ. ಗುಣಮಟ್ಟದ ಕೊರತೆ ಬಗ್ಗೆ ಸರ್ಕಾರವೇ ಬರೆದ ಪತ್ರ ಲಗತ್ತಿಸಲಾಗಿದೆ” ಎಂದು ತಿಳಿಸಿದ್ದಾರೆ.

“ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಲ್ಲಿ ಬಳ್ಳಾರಿ ಇರಲಿ ಬೆಂಗಳೂರಲ್ಲಾಗಲಿ ಭಾವನೆಗಳಿಗೆ ಘಾಸಿಯಾಗುವ ರೀತಿಯಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಚಿತ್ರ ಹಾಗೂ ವರದಿಗಳು ಹೃದಯ ವಿದ್ರಾವಕ ಘಟನೆಗಳಾಗಿವೆ” ಎಂದು ಕಳವಳ ವ್ಯಕ್ತಪಡಿಸಿದ್ದರು. 

“ಆಯೋಗವು ಆಹ್ವಾನಿಸಿದರೆ, ಚರ್ಚೆ ಬಯಸಿದರೆ ಇನ್ನೂ ಹೆಚ್ಚಿನ ವಿವರ ಲಭ್ಯಗೊಳಿಸುವೆ. ಜನ ಕಲ್ಯಾಣ ಎಲ್ಲಾ ಸಂಸ್ಥೆಗಳ ಉದ್ದೇಶ, ಗಾಬರಿಗೊಳಿಸುವ ಇಂಥ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದಿಂದ ಆಯೋಗ ತನ್ನ ಉಳಿದೆಲ್ಲ ಕೆಲಸ ಬದಿಗೊತ್ತಿ ಕೊರೋನಾ ಸಂದರ್ಭದಲ್ಲಿ ವಿಶಿಷ್ಟ ಕರ್ತವ್ಯ ನಿರ್ವಹಣೆಗೆ ಮುಂದಾಗಲಿ” ಎಂದು ಕೋರಿದ್ದಾರೆ.

ದಿನಾಂಕ 27.7.2020 ರಂದು ಸಭೆ ಸೇರಿದ ಮಾನವ ಹಕ್ಕುಗಳ ಆಯೋಗದ ಪೂರ್ಣಪೀಠ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ. ಆಗಸ್ಟ್-3 ಅಥವಾ ಆಗಸ್ಟ್-4 ರಂದು ಆಯೋಗ ಬಯಸಿದರೆ ಈಗಾಗಲೇ ನೀಡಲಾಗಿರುವ ದಾಖಲೆಗಳು ಮತ್ತು ಪೆನ್‍ಡ್ರೈವ್ ಜೊತೆಗೆ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Trending News