Janardhana Reddy: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

Janardhana Reddy New Political Party: ಸಂಕಷ್ಟದ ದಿನಗಳಲ್ಲಿ ಕುಟುಂಬವನ್ನು ಮುನ್ನಡೆಸಿದ್ದ ಪತ್ನಿ ಲಕ್ಷ್ಮಿ ಅರುಣಾ ಈಗ‌ ಹೊಸ‌ ರಾಜಕೀಯ ಪಕ್ಷ ಮುನ್ನಡೆಸುವ ವಿಚಾರದಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ. ಶೀಘ್ರವೇ ಹೊಸ ಪಕ್ಷದ ಚಿಹ್ನೆ ಮತ್ತು ಬಾವುಟ ಅಂತಿಮಗೊಳಿಸಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

Written by - Puttaraj K Alur | Last Updated : Dec 25, 2022, 01:34 PM IST
  • ಹೊಸ ಪಕ್ಷ ಘೋಷಣೆ ಮಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ
  • ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವೆಂಬ ಹೊಸ ರಾಜಕೀಯ ಪಕ್ಷ ಘೋಷಣೆ
  • ಶೀಘ್ರವೇ ಪಕ್ಷದ ಚಿಹ್ನೆ ಹಾಗೂ ಬಾವುಟ ಅಂತಿಮಗೊಳಿಸುತ್ತೇನೆಂದ ಗಣಿಧನಿ
Janardhana Reddy: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ title=
ಜನಾರ್ದನ್ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ!

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಯವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವೆಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ‘ನಾನು ಬಿಜೆಪಿಯಿಂದ ಹೊರ ಬಂದಿದ್ದು, ಸ್ವತಂತ್ರವಾಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವೆಂಬ ಹೊಸ ರಾಜಕೀಯ ಪಕ್ಷ ಆರಂಭಿಸುವುದಾಗಿ ಅವರು ಹೇಳಿದ್ದಾರೆ.  

‘ನಾನು ಬಿಜೆಪಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಸ್ವಂತ ಕೆಲಸ‌ಗಳನ್ನು ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದೆ. ಕಷ್ಟದ ದಿನಗಳಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹೊರತುಪಡಿಸಿದ್ರೆ ಪಕ್ಷದ ಯಾರೊಬ್ಬರೂ ನನ್ನ ಜೊತೆಗೆ ನಿಲ್ಲಲಿಲ್ಲ’ ಅಂತಾ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿಕರಡಿ ದಾಳಿಗೆ ದನಗಾಹಿ ಬಲಿ, ವ್ಯಕ್ತಿ ಶವದ ಜೊತೆಗಿನ ಕರಡಿ ಚಿತ್ರ ಸೆರೆ

‘ಬಿಜೆಪಿಗಾಗಿ ಹಲವು ವರ್ಷಗಳ ಕಾಲ‌ ರಾಜ್ಯದ ಉದ್ದಗಲಕ್ಕೆ ಸುತ್ತಾಡಿದ್ದೆ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತರುವಲ್ಲಿ ನನ್ನ ಪಾತ್ರವೂ ಇತ್ತು. ಅಧಿಕಾರ‌ ಹಸ್ತಾಂತರ ಮಾಡದ‌ ಜೆಡಿಎಸ್ ವಿರುದ್ಧ ಹೋರಾಡಿ ಸ್ವತಂತ್ರವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿಯೂ ನನ್ನ ಶ್ರಮವಿತ್ತು. ಆದರೆ ನಾನು‌ ಜೈಲಿಗೆ ಹೋದಾಗ ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ’ವೆಂದು ದುಃಖ ತೋಡಿಕೊಂಡರು.

ಅಕ್ರಮ ಗಣಿಗಾರಿಕೆ ಎಂದು ನನ್ನ ಜೊತೆಯಲ್ಲಿದ್ದವರೇ ಅಪಪ್ರಚಾರ ಮಾಡಿದರು. ಆದರೆ ಈ ಆರೋಪದಿಂದ ನಾನು ವಾಪಸ್ ಬರುತ್ತೇನೆಂಬ ನಂಬಿಕೆ ಇದೆ. ನಾನು ಸಕ್ರಮದ ಗಣಿಕಾರಿಕೆ ಎನ್ನುವ ಸತ್ಯದ ಮೂಲಕ ಹೊರ ಬರುತ್ತೇನೆ. ನನ್ನ ಬಂಧನ ಆಗುವ ಸಂದರ್ಭದಲ್ಲಿ ಯಾರು ಜೊತೆಯಲಿದ್ದರು ಎಂಬುದು ನೆನಪಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮಾತ್ರ ನನ್ನ ಜೊತೆಗಿದ್ದು ನನ್ನ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಇನ್ನುಳಿದಂತೆ ಯಾವೊಬ್ಬ ನಾಯಕನೂ ನನ್ನ ಕುಟುಂಬದ ಜೊತೆ ಮಾತನಾಡಲಿಲ್ಲ ಮತ್ತು ನನಗೂ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ’ ಅಂತಾ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಲೀಲ್ ಹತ್ಯೆ ಹಿನ್ನೆಲೆ ಸುರತ್ಕಲ್‌ನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ

‘ಬಿ‌.ಶ್ರೀರಾಮುಲು ನನಗೆ ಸಹೋದರನಿದ್ದಂತೆ. 17 ವರ್ಷಗಳಿಂದಲೇ ಅವರು ನನಗೆ ಪರಿಚಯ. ರಾಜಕೀಯದಲ್ಲಿದ್ದ ಅವರ ಮಾವನವರ ಕೊಲೆಯಾಗಿತ್ತು. ನಾವು ತುಂಬಾ ಕಷ್ಟಪಟ್ಟು ರಾಜಕೀಯಕ್ಕೆ ಬಂದು ಸಾಧನೆ ಮಾಡಿದ್ದೇವೆ. ಅವಕಾಶ ಸಿಕ್ಕಾಗ ನನ್ನ ಬದಲು ಅವರಿಗೆ ಅಧಿಕಾರ ನೀಡುವಂತೆ ಪಕ್ಷದ ನಾಯಕರಲ್ಲಿ‌ ಮನವಿ ಮಾಡಿದ್ದೆ. ನಮ್ಮ ಹೊಸ ಪಕ್ಷ ಸೇರುವಂತೆ ಅವರಿಗೆ ನಾನು ಒತ್ತಡ ಹಾಕುವುದಿಲ್ಲ. ಅವರಿಗೆ ತಿಳಿದಂತೆ ನಿರ್ಧಾರ ಕೈಗೊಳ್ಳಲಿ’ ಎಂದು ರೆಡ್ಡಿ ಹೇಳಿದ್ದಾರೆ.  

‘ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಏಕೆ ಹಾಗೆ ಹೇಳಿದ್ದರೋ ತಿಳಿಯಲಿಲ್ಲ? ಯಾರು ಹಾಗೆ ಹೇಳಿಸಿದ್ದರು ಅಂತಾನೂ ಗೊತ್ತಾಗಲಿಲ್ಲ. ಆದರೆ ಅವರ ಆ ಹೇಳಿಕೆಯಿಂದ ನನಗೆ ತುಂಬಾ ನೋವಾಯಿತು. ಅದೇ ರೀತಿ ಬಿ.ಎಸ್.ಯಡಿಯೂರಪ್ಪನವರಿಗೂ ಅನ್ಯಾಯವಾಗಿದೆ’ ಅಂತಾ ರೆಡ್ಡಿ ತಿಳಿಸಿದರು.

ನನ್ನ ಸಂಕಷ್ಟದ ದಿನಗಳಲ್ಲಿ ಕುಟುಂಬವನ್ನು ಚೆನ್ನಾಗಿ ಮುನ್ನಡೆಸಿದ್ದ ಪತ್ನಿ ಲಕ್ಷ್ಮಿ ಅರುಣಾ ಇದೀಗ ಹೊಸ‌ ರಾಜಕೀಯ ಪಕ್ಷ ಮುನ್ನಡೆಸುವ ವಿಚಾರದಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ. ಬಿಜೆಪಿಯನ್ನು ನಾನು ಸಂಪೂರ್ಣವಾಗಿ ಕೈ ಬಿಟ್ಟೇದ್ದೇನೆ. ಕಲ್ಯಾಣ ರಾಜ್ಯವನ್ನ ಕಟ್ಟಿದ್ದೇನೆ. ಶೀಘ್ರವೇ ನಮ್ಮ ಹೊಸ ಪಕ್ಷದ ಚಿಹ್ನೆ ಮತ್ತು ಬಾವುಟದ ಬಗ್ಗೆ ತಿಳಿಸಲಿದ್ದೇವೆ. ಮುಂಬರುವ ದಿನಗಳಲ್ಲಿ ಪ್ರತೀ ಮನೆ ಮನೆಗೂ ಬರುತ್ತೇನೆ. ರಾಜ್ಯದ ಪ್ರತೀ ಹಳ್ಳಿ ಹಳ್ಳಿಗೆ ಹೆಜ್ಜೆ ಇಡುತ್ತೇನೆ. ರಾಜ್ಯದ ಜನರಿಗಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News