ಕಾಂಗ್ರೆಸ್‌ಗೆ ಬಂದ ಬಳಿಕ ದಲಿತ ನಾಯಕರ ರಾಜಕೀಯ ಜೀವನ ದುರ್ಬಲಗೊಳಿಸಿದ ಸಿದ್ದರಾಮಯ್ಯ: ಬಿಜೆಪಿ ಆರೋಪ

ಚುನಾವಣೆಗಳಲ್ಲಿ "ಅಹಿಂದ" ಹೆಸರಿನಲ್ಲಿ ರಾಜಕಾರಣ ಮಾಡಿ ಯಶಸ್ಸನ್ನು ಕಂಡಿರುವ ಸಿದ್ದರಾಮಯ್ಯರು ಚುನಾವಣೆ ಬಳಿಕ "ಹಿಂದ"ದವರನ್ನು ಹಿಂದೆಯೇ ಬಿಟ್ಟು, ತಾವು ಮತ್ತು ತಮ್ಮವರನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬುದು ಬಿ.ಕೆ.ಹರಿಪ್ರಸಾದ್ ಅವರ ಪ್ರಮುಖ ಆರೋಪವೆಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Sep 14, 2023, 04:16 PM IST
  • ಕಾಂಗ್ರೆಸ್‌ಗೆ ಬಂದ ಬಳಿಕ ಸಿದ್ದರಾಮಯ್ಯರು ದಲಿತ ಸಮುದಾಯದ ನಾಯಕರ ರಾಜಕೀಯ ಜೀವನ ದುರ್ಬಲಗೊಳಿಸಿದ್ದು
  • ಕಾಂಗ್ರೆಸ್‍ನಲ್ಲಿ ದಲಿತ ನಾಯಕರಿಗೆ ಸಿಗಬೇಕಿದ್ದ ಪ್ರಾಮುಖ್ಯತೆಗೆ ಕಲ್ಲು ಹಾಕಿದ್ದೇ ಸಿದ್ದರಾಮಯ್ಯ
  • ಸಿದ್ದರಾಮಯ್ಯರ ‘ಅಹಿಂದ’ ರಾಜಕಾರಣದ ಅಸಲಿ ಮುಖವಾಡವನ್ನು ಬಿ.ಕೆ.ಹರಿಪ್ರಸಾದ್ ಬಿಚ್ಚಿಟ್ಟಿದ್ದಾರೆ
ಕಾಂಗ್ರೆಸ್‌ಗೆ ಬಂದ ಬಳಿಕ ದಲಿತ ನಾಯಕರ ರಾಜಕೀಯ ಜೀವನ ದುರ್ಬಲಗೊಳಿಸಿದ ಸಿದ್ದರಾಮಯ್ಯ: ಬಿಜೆಪಿ ಆರೋಪ title=
ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ!

ಬೆಂಗಳೂರು: ಪಕ್ಷಾಂತರ ಪ್ರವೀಣ ಸಿದ್ದರಾಮಯ್ಯರವರು ಕಾಂಗ್ರೆಸ್‌ಗೆ ಬಂದ ಬಳಿಕ ಮೊದಲು ಮಾಡಿದ ಕೆಲಸವೆಂದರೆ, ಅದು ತಮ್ಮ ಜೊತೆಗಿದ್ದ ದಲಿತ ಸಮುದಾಯದ ನಾಯಕರ ರಾಜಕೀಯ ಜೀವನವನ್ನು ದುರ್ಬಲಗೊಳಿಸಿದ್ದು ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌, ವಿ.ಶ್ರೀನಿವಾಸ ಪ್ರಸಾದ್‌, ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರ ಪ್ರಭಾವಿ ದಲಿತ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಸಿಗಬೇಕಿದ್ದ ಪ್ರಾಮುಖ್ಯತೆಗೆ ಕಲ್ಲು ಹಾಕಿದ್ದೇ ಸಿದ್ದರಾಮಯ್ಯರವರು’ ಎಂದು ಟೀಕಿಸಿದೆ.

‘ದಲಿತ ನಾಯಕರ ರಾಜಕೀಯ ಜೀವನವನ್ನು ದುರ್ಬಲಗೊಳಿಸಿದ ಮೇಲೆ ಈಗ ಸಿದ್ದರಾಮಯ್ಯರವರ ಕಣ್ಣು ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ವರ್ಗಗಳ ನಾಯಕರ ಮೇಲೆ ಬಿದ್ದಿದೆ. ಕೇವಲ ಹಿಂದುಳಿದ ವರ್ಗಗಳ ನಾಯಕರನ್ನಷ್ಟೆ ಅಲ್ಲ ಸಿದ್ದರಾಮಯ್ಯರವರು ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳನ್ನು ಸಹ ಸಂಪೂರ್ಣ ಕಡೆಗಣಿಸಿದ್ದಾರೆ. ಚುನಾವಣೆಗಳಲ್ಲಿ "ಅಹಿಂದ" ಹೆಸರಿನಲ್ಲಿ ರಾಜಕಾರಣ ಮಾಡಿ ಯಶಸ್ಸನ್ನು ಕಂಡಿರುವ ಸಿದ್ದರಾಮಯ್ಯರವರು ಚುನಾವಣೆ ಬಳಿಕ "ಹಿಂದ"ದವರನ್ನು ಹಿಂದೆಯೇ ಬಿಟ್ಟು, ತಾವು ಮತ್ತು ತಮ್ಮವರನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ  ಎಂಬುದು ಬಿ.ಕೆ.ಹರಿಪ್ರಸಾದ್ ಅವರ ಪ್ರಮುಖ ಆರೋಪ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

‘ಸಿದ್ದರಾಮಯ್ಯರವರ “ಅಹಿಂದ” ರಾಜಕಾರಣದ ಅಸಲಿ ಮುಖವಾಡವನ್ನು ಎಳೆಎಳೆಯಾಗಿ ಬಿ.ಕೆ.ಹರಿಪ್ರಸಾದ್ ಅವರು ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯರವರ ಅಹಿಂದದ ನೈಜತೆ ಹೊರಬಂದಿದ್ದು ಇದೇ ಮೊದಲಲ್ಲ. ಆಗಾಗ ಕಿಡಿ ರೂಪದಲ್ಲಿ ಹೊರಬರುತ್ತಿದ್ದ ಅಸಮಾಧಾನ ಈಗ ಹರಿಪ್ರಸಾದ್‌ ಅವರ ರೂಪದಲ್ಲಿ ಬೆಂಕಿಯಾಗಿದೆ. ರಾಜ್ಯದ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯ ಸಿದ್ದರಾಮಯ್ಯರವರ “ಅಹಿಂದ” ರಾಜಕಾರಣಕ್ಕೆ ಸಿಲುಕಿ ರಾಜಕೀಯ ಪ್ರಾತಿನಿಧ್ಯವನ್ನು ಬಹುತೇಕ ಕಳೆದುಕೊಂಡಿದೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನು ಓದಿ: ಉದ್ಯಮಿಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ

‘ಈ ಆರೋಪ ರಾಜಕೀಯ ಪ್ರೇರಿತ ಎಂಬ ಹೇಳಿಕೆಗಳು ಸಂಪೂರ್ಣ ಸುಳ್ಳು. ಸಿದ್ದರಾಮಯ್ಯರವರ ರಾಜಕೀಯವನ್ನು ಮತ್ತು ಅಧಿಕಾರ ದೊರೆತಾಗ ಅವರ ಆಡಳಿತವನ್ನು ಒಮ್ಮೆ ಕೂಲಂಕುಷವಾಗಿ ಗಮನಿಸಿದರೆ ಸಾಕು, ಈ ಆರೋಪ ನೂರಕ್ಕೆ ನೂರರಷ್ಟು ನಿಜ ಎಂಬುದು ಸಾಬೀತಾಗುತ್ತದೆ. ಅಷ್ಟಕ್ಕೂ ತಾವೊಬ್ಬ ರಾಜ್ಯ ಕಂಡ ಶ್ರೇಷ್ಠ ನಾಯಕ ದೇವರಾಜ ಅರಸುರ ಅಪರಾವತಾರವೆಂದು ತಮ್ಮ ಭಟ್ಟಂಗಿಗಳಿಂದ ಕರೆಸಿಕೊಳ್ಳುವ ಸಿದ್ದರಾಮಯ್ಯರವರು, ನಿಜಕ್ಕೂ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ನ್ಯಾಯ ನೀಡಿದ್ದಾರಾ ಎಂಬ ಪ್ರಶ್ನೆಗೆ, ಇಲ್ಲವೇ ಇಲ್ಲ ಎಂಬ ಉತ್ತರ ದೊರೆಯುತ್ತದೆ’ ಎಂದು ಬಿಜೆಪಿ ಟೀಕಿಸಿದೆ.

‘ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುಳಿದ ಸಮುದಾಯಗಳಾದ ತಿಗಳ, ಮಡಿವಾಳ, ಉಪ್ಪಾರ, ಬಲಿಜ ಸೇರಿದಂತೆ ಇತರ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುತ್ತೇವೆಂದು ಪುಂಖಾನುಪುಂಕವಾಗಿ ಘೋಷಿಸಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಸಹ ಮಾಡಿಲ್ಲ. ಇನ್ನು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಪ್ರತಿ ವರ್ಷ 500 ಕೋಟಿ ರೂ. ಅನುದಾನವನ್ನು ನೀಡುತ್ತೇವೆಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಸಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಬಿಜೆಪಿ ಸರ್ಕಾರವೇ ಸ್ಥಾಪಿಸಿತ್ತು. ಆದರೆ ನುಡಿದಂತೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಸಿದ್ದರಾಮಯ್ಯರವರು ತಮ್ಮ ಬಜೆಟ್‌ನಲ್ಲಿ ಬಿಡಿಗಾಸನ್ನು ಸಹ ನೀಡಿಲ್ಲ’ವೆಂದು ಬಿಜೆಪಿ ಕಿಡಿಕಾರಿದೆ.

‘ರಾಜ್ಯದ ಅತಿಸಣ್ಣ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕವಾಗಿ, “ಅತಿಸಣ್ಣ ಹಿಂದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರ”ವನ್ನು ಸ್ಥಾಪಿಸಿ, ಪ್ರತಿವರ್ಷ 500 ಕೋಟಿ ರೂ. ಅನುದಾನ ಒದಗಿಸುವ ಭರವಸೆಯನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ ಸಿದ್ದರಾಮಯ್ಯರವರ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖವೇ ಆಗಿಲ್ಲ. ಹಿಂದುಳಿದ ವರ್ಗಗಳ ಜೊತೆ ದಲಿತ ಸಮುದಾಯಗಳಿಗೂ ಅನ್ಯಾಯವೆಸಗಿರುವ ಸಿದ್ದರಾಮಯ್ಯರವರು, ದಲಿತ ಸಮುದಾಯಗಳಿಗೆ ಮಾತ್ರ ಮೀಸಲಾಗಿದ್ದ 11,144 ಕೋಟಿ ರೂ. SCP/TSP ಅನುದಾನವನ್ನು ಜಾರಿಯಿದ್ದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಇದನ್ನು ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಆರೋಪ : ಆಲೋಕ್‌ಕುಮಾರ್ ವಿರುದ್ಧದ ಪ್ರಕರಣ ರದ್ದು ಪಡಿಸಿದ ಹೈಕೋರ್ಟ್

‘ಆದರೆ ಇದೆಲ್ಲದರ ನಡುವೆ ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮ ಸ್ಥಾಪಿಸಿ, ವಾರ್ಷಿಕ 100 ಕೋಟಿ ರೂ. ಅನುದಾನ ನೀಡಲಾಗುವುದು ಎಂಬುದನ್ನು ಮಾತ್ರ ಬಜೆಟ್‌‌‌ನಲ್ಲಿ ಸಿದ್ದರಾಮಯ್ಯರವರು ಹೆಮ್ಮೆಯಿಂದ ಘೋಷಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವಾರ್ಷಿಕವಾಗಿ ನೀಡುವ ಅನುದಾನದ ಜೊತೆ ಬಂಪರ್‌ ಎಂಬಂತೆ  ಹೆಚ್ಚುವರಿಯಾಗಿ 360 ಕೋಟಿ ರೂ. ಅನುದಾನವನ್ನು ಒದಗಿಸಿದ್ದಾರೆ. ಇದು ಸಿದ್ದರಾಮಯ್ಯರವರು ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ಮೇಲೆ ಹೊಂದಿರುವ ಡೋಂಗಿ ಪ್ರೇಮಕ್ಕೆ ಸ್ಪಷ್ಟ ನಿದರ್ಶನ. ಇದೆಲ್ಲವನ್ನೂ ಗಮನಿಸಿದರೆ ಸಿದ್ದರಾಮಯ್ಯರವರು ಹಿಂದುಳಿದ ವರ್ಗಗಳ ಮೇಲೆ ತೋರುತ್ತಿರುವ ಅಸಡ್ಡೆಯ ಬಗ್ಗೆ ಬಿ.ಕೆ.ಹರಿಪ್ರಸಾದ್‌ ನೀಡಿದ ಹೇಳಿಕೆಯಲ್ಲಿ ಎಳ್ಳಷ್ಟೂ ಸುಳ್ಳಿಲ್ಲ ಎಂಬುದು ರುಜುವಾತಾಗುತ್ತದೆ’ ಎಂದು ಬಿಜೆಪಿ ಕುಟುಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News