ಮಹಾದಾಯಿ ತೀರ್ಪು ಪ್ರಕಟ: ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರು ಹಂಚಿಕೆ

ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀರು ಬಿಡುಗಡೆಗೆ ಆದೇಶ.

Last Updated : Aug 14, 2018, 04:23 PM IST
ಮಹಾದಾಯಿ ತೀರ್ಪು ಪ್ರಕಟ: ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರು ಹಂಚಿಕೆ title=

ನವದೆಹಲಿ:  ದಶಕಗಳ ಹೋರಾಟ, ಕರ್ನಾಟಕ ಹಾಗೂ ಗೋವಾ ನಡುವಿನ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾದಾಯಿ ನ್ಯಾಯಮಂಡಳಿ ತೀರ್ಪು ಪ್ರಕಟಿಸಿದೆ. ನ್ಯಾ. ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಯಿಂದ ತೀರ್ಪು ಪ್ರಕಟವಾಗಿದ್ದು, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಿದ್ದು, ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಹಂಚಿಕೆ ಮಾಡಿದೆ. 

ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ಮಹದಾಯಿ ನೀರು ಹಂಚಿಕೆ ಮಾಡಿರುವ ನ್ಯಾಯಾಧೀಕರಣ, ಕುಡಿಯುವ ನೀರಿಗಾಗಿ 5.5 ಟಿಎಂಸಿ, ಕಳಸಾ-ಬಂಡೂರಿಗೆ 4 ಟಿಎಂಸಿ, ಮಹದಾಯಿಯಿಂದ ನೀರಾವರಿಗೆ 8 ಟಿಎಂಸಿ ನೀರು ಹಂಚಿಕೆ ಮಾಡಿ ತೀರ್ಪು ಪ್ರಕಟಿಸಿದೆ. ಅದರಲ್ಲಿ ಕಳಸಾ ವ್ಯಾಪ್ತಿಗೆ 1.72 ಟಿಎಂಸಿ ನೀರು, ಬಂಡೂರಿ ವ್ಯಾಪ್ತಿಗೆ 2.18 ಟಿಎಂಸಿ ನೀರು, ವಿದ್ಯುಚ್ಚಕ್ತಿ ಬಳಕೆಗೆ 8.02 ಟಿಎಂಸಿ ನೀರು, ಮಹದಾಯಿ ವ್ಯಾಪ್ತಿಗೆ 1.5 ಟಿಎಂಸಿ ನೀರು ಹಂಚಿಕೆಯಾಗಿದೆ. ಕರ್ನಾಟಕ ಕುಡಿಯುವ ಉದ್ದೇಶಕ್ಕಾಗಿ 7.5 ಟಿಎಂಸಿ ನೀರು ಕೇಳಿತ್ತು.

ಇನ್ನು ಹುಬ್ಬಳ್ಳಿ-ಧಾರವಾಡ ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ನದಿಯಿಂದ ಮಲಪ್ರಭಾ ಜಲಾಶಯಕ್ಕೆ ನೀರು ತಿರುಗಿಸುವ ಕರ್ನಾಟಕದ ಪ್ರಸ್ತಾಪಕ್ಕೆ ನ್ಯಾಯ ಮಂಡಳಿ ಒಪ್ಪಿಗೆ ನೀಡಿದೆ. 

ಕುಡಿಯುವ ಉದ್ದೇಶಕ್ಕಾಗಿ 7.5 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕರ್ನಾಟಕ, ನ್ಯಾಯಮಂಡಳಿಗೆ ಮನವಿ ಮಾಡಿತ್ತು. 

ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಗಳ ಪೈಕಿ ಗೋವಾ ಮುಖಾಂತರ ಅರಬ್ಬಿ ಸಮುದ್ರ ಸೇರುವ ದೊಡ್ಡ ನದಿ‌ ಮಹಾದಾಯಿ ಕೂಡಾ ಒಂದು. ಮಹಾದಯಿ ನದಿಯ ಒಟ್ಟು ಜಲಾನಯನ‌ ಪ್ರದೇಶ 2,032 ಚ.ಕಿ.ಮೀ. ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು ಕರೆಯುತ್ತಾರೆ. ಆದರೆ, ಈ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ. ಬೆಳಗಾವಿಯಲ್ಲಿ ಹುಟ್ಟುವ ನದಿ ಗೋವಾ ಮೂಲಕ ಹರಿದು ಸಮುದ್ರ ಸೇರುತ್ತದೆ.

ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಬಳಸಿಕೊಂಡು, ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು. ಅವರು ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತು.

ಮಹಾದಾಯಿ ಯೋಜನೆಯ ವರದಿ ಸಿದ್ದಪಡಿಸಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಗೋವಾ ಈ ಯೋಜನೆಗೆ ಒಪ್ಪಿಗೆ ನೀಡಿತು. ನಂತರ 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಸಹ ದೊರೆಯಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಸಮ್ಮತಿ ಸೂಚಿಸಿತು. ಆದರೆ, 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ತೆಗೆಯಿತು.

ಈ ನದಿ ವಿವಾದದ ಬಗ್ಗೆ ನ್ಯಾಯಾಧೀಕರಣ ರಚಿಸುವಂತೆ ಗೋವಾ ಸರ್ಕಾರ 2002ರಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಿತು. ನಂತರ 2002ರ ಸೆಪ್ಟೆಂಬರ್ ನಲ್ಲಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ ಜಲ ಆಯೋಗದಿಂದಲೇ ತಡೆ ಒಡ್ಡಲಾಯಿತು. 2006ರ ನವೆಂಬರ್ ನಲ್ಲಿ ಕರ್ನಾಟಕದ ಈ ಯೋಜನೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ನೇಮಕ ಮಾಡಲಾಯಿತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ಇದೇ ಫೆ. 21ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ನೀರನ್ನು ಕರ್ನಾಟಕಕ್ಕೇ ಅದುವೇ ಕುಡಿಯುವ ಉದ್ದೇಶಕ್ಕಾಗಿ ಒದಗಿಸಬೇಕೆಂದು ರಾಜ್ಯ ಮನವಿ ಮಾಡಿದೆ.

ಮಹದಾಯಿ ನ್ಯಾಯಾಧೀಕರಣದ ಮುಂದೆ ಗೋವಾ ವಾದ...

• ಕರ್ನಾಟಕ ಕಳಸಾ ಬಂಡೂರಿ ಯೋಜನೆಯನ್ನು ಕುಡಿಯುವ ನೀರಿಗಾಗಿ ಮಾಡುತ್ತಿಲ್ಲ.
• ‎ಅದು ನೀರಾವರಿಗೆಂದೇ ಮಾಡಲಾಗಿರುವ ಯೋಜನೆ.
• ‎ಮಲಪ್ರಭಾವು ಮಹದಾಯಿಗಿಂತ ಮೂರು ಪಟ್ಟು ದೊಡ್ಡ ನದಿ. ಆ ನದಿಯಲ್ಲಿ‌ ಕರ್ನಾಟಕ ಕಟ್ಟಿರುವ ಅಣೆಕಟ್ಟಿ‌ನಲ್ಲಿ ನೀರು ಭರ್ತಿ ಆಗದ ಹಿನ್ನೆಲೆಯಲ್ಲಿ ಮಹದಾಯಿಯನ್ನು ತಿರುಗಿಸಲು ಕರ್ನಾಟಕ ಮುಂದಾಗಿದ್ದು ಇದಕ್ಕೆ ಅವಕಾಶ ನೀಡಬಾರದು.
• ಹುಬ್ಬಳ್ಳಿ - ಧಾರವಾಡ ಮಹದಾಯಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ.
• ‎ನದಿ ಕೊಳ್ಳದ ಹೊರಗಿನ ಪ್ರದೇಶಗಳಿಗೆ ಯಾವ ಕಾರಣಕ್ಕೂ ನೀರು ಹರಿಸಲು ಅವಕಾಶ ನೀಡಬಾರದು.
• ‎ಹುಬ್ಬಳ್ಳಿ ಧಾರವಾಡದ ಜನಸಂಖ್ಯೆಯ ಏರಿಕೆಯ ಬಗ್ಗೆ ಕರ್ನಾಟಕ ಕೊಟ್ಟಿರುವ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ.
• 2044ರ ಹೊತ್ತಿಗೆ ಆ ಭಾಗದ‌ ಜನಸಂಖ್ಯೆ ಅಷ್ಟೊಂದು ಪ್ರಮಾಣದಲ್ಲಿ ಏರಲು ಸಾಧ್ಯವೇ ಇಲ್ಲ.
• ‎ಕರ್ನಾಟಕವು ಮಹದಾಯಿ ಕೊಳ್ಳದಲ್ಲಿ ಲಭ್ಯವಿರುವ ನೀರಿನ ಮೇಲು ಅಂದಾಜು (199.6 ಟಿಎಂಸಿ) ಮಾಡಿದೆ.
• ‎ಅಷ್ಟೊಂದು ನೀರು ಮಹಾದಾಯಿಯಲ್ಲಿ‌ ಇಲ್ಲವೇ ಇಲ್ಲ‌.
• ಕರ್ನಾಟಕ‌ ನೀರಿನ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಪರಿಸರದ ಮೇಲೆ ಭಾರಿ‌ ದುಷ್ಪರಿಣಾಮ ಬೀರಲಿದೆ, ವ್ಯಾಪಕ ಅರಣ್ಯ ನಾಶವಾಗಲಿದೆ.
• ಕರ್ನಾಟಕ ತನ್ನ ಬೇಡಿಕೆಯನ್ನು‌ ಸಮರ್ಥಿಸಿಕೊಳ್ಳಲು ಆಧರಿಸಿರುವ ದಾಖಲೆಗಳಲ್ಲಿ ಲೋಪವಿದೆ.
• ‎ಮಳೆಯ ಪ್ರಮಾಣ ಮತ್ತು ನೀರಿನ ಲಭ್ಯತೆಯ ಪ್ರಮಾಣ ಬಗ್ಗೆ ಕರ್ನಾಟಕ ಸಲ್ಲಿಸಿರುವ ದಾಖಲೆಗಳಲ್ಲಿನ ಮಾಹಿತಿ ನಂಬಲು ಸಾಧ್ಯವಿಲ್ಲ.
• ‎ಅನೇಕ ವರ್ಷಗಳ ಕಾಲ ಏಕ ಪ್ರಮಾಣದ ಮಳೆ ಮತ್ತು ನೀರಿನ ಅಳತೆಯನ್ನು ನಮೂದಿಸಲಾಗಿದೆ.‌ ಇದು ಹೇಗೆ ಸಾಧ್ಯ? ಇದು ಬದಲಾಗಬೇಕಲ್ಲವೇ ?
• ಕರ್ನಾಟಕ ತನ್ನ ಯೋಜನೆಗಳ ಪರಿಸರ ಅಧ್ಯಯನ ನಡೆಸಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕವು ಮಹದಾಯಿ ಕೊಳ್ಳದ ನೀರಿನ ಲೆಕ್ಕ ಹಾಕಲು ಆಧರಿಸಿರುವ ಕೇಂದ್ರ ಜಲ ಮಂಡಳಿಯ ವರದಿಯಲ್ಲೇ ಲೋಪವಿದೆ.
• ‎ ಕರ್ನಾಟಕದ ಲೆಕ್ಕಾಚಾರದ ಪ್ರಕಾರ ಮಹದಾಯಿ ಕೊಳ್ಳದಲ್ಲಿ ಬೀಳುವ ಮಳೆಯ ಪ್ರಮಾಣಕ್ಕಿಂತ ನದಿಯಲ್ಲಿ ಹೆಚ್ಚು ನೀರಿದೆ. ಇದು ಹೇಗೆ ಸಾಧ್ಯ?
• ‎ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎಂಬ ಕರ್ನಾಟಕದ ನಿಲುವು ಆಧಾರರಹಿತವಾದದ್ದು. ನೀರು ಸಮುದ್ರ ಸೇರುವ ಪ್ರಕ್ರಿಯೆಗೆ ನೈಸರ್ಗಿಕ ಮಹತ್ವವಿದೆ.
• ‎ಹಾಗೆಯೇ ಗೋವಾದ ಮೀನುಗಾರಿಕೆ ಮತ್ತು ನೌಕಾಯನಗಳು ಸಮುದ್ರ ಸೇರುವ ನೀರನ್ನು ಅವಲಂಬಿಸಿಕೊಂಡಿದೆ.
• ‎ ಇದೆಲ್ಲದಕ್ಕಿಂತ ಹೆಚ್ಚಾಗಿ ಕಡು ಬಿಸಿಲಿನ ಮಾಸಗಳಲ್ಲಿ ಸಮುದ್ರಕ್ಕೆ ಸೇರಲು ಮಹದಾಯಿಯಲ್ಲಿ ನೀರೇ ಇರುವುದಿಲ್ಲ ಎಂದು ಗೋವಾ ಹೇಳಿದೆ.
• ‎ಗೋವಾಕ್ಕೆ ಅದರ ಅಗತ್ಯಗಳನ್ನು ಪೂರೈಸಲು 94 ಟಿಎಂಸಿ ನೀರು ಸಾಕು ಎಂಬುದು ಕರ್ನಾಟಕದ ವಾದ.
• ‎ಗೋವಾದ ಹೊಸ ಮಾಸ್ಟರ್ ಪ್ಲಾನ್ ಪ್ರಕಾರ 144 ಟಿಎಂಸಿ ನೀರು ನಮಗೆ ಬೇಕಿದೆ.
• ‎ ಈಗಾಗಲೇ ನ್ಯಾಯಾಧಿಕರಣದ ಗಮನಕ್ಕೆ ತಂದಿದ್ದೇವೆ. ಇನ್ನು ಜಲ ವಿದ್ಯುತ್, ಅರಣ್ಯ ಸಂರಕ್ಷಣ ಮುಂತಾದ ಅಂಶಗಳನ್ನು ಪರಿಗಣಿಸಿದ್ದೇ ಆದರೆ ಗೋವಾಕ್ಕೆ 222 ಟಿಎಂಸಿ ಮಹದಾಯಿ ನೀರು ಬೇಕು.
• ‎ಆದರೆ ಕರ್ನಾಟಕ ಮತ್ತು ಕರ್ನಾಟಕದ ಪರ ತಜ್ಞ ಸಾಕ್ಷಿಗಳು ಇದೆಲ್ಲವನ್ನು ಪರಿಗಣಿಸಿಲ್ಲ, ಅಧ್ಯಯನ ನಡೆಸಿಲ್ಲ.
• ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿದ್ದೇವೆ. ಆದರೆ ಮಳೆ ಕೊಯ್ಲಿನಿಂದಾಗಿ ಸಂಗ್ರಹವಾಗುವ ನೀರು ಖಾಸಗಿ ಸ್ವತ್ತಾಗಿದ್ದು ರಾಜ್ಯದ ನದಿ, ಜಲಾಶಯಗಳಿಗೆ ಸೇರುವುದಿಲ್ಲ.‌ ಆದ್ದರಿಂದ ಈ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ರಾಜ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಗೋವಾ ಹೇಳಿದೆ.
• 16 ಚೆಕ್ ಡ್ಯಾಂಗಳ ಮೂಲಕ ಈ ನೀರಿನ ಸಂಗ್ರಹಕ್ಕೆ ಪ್ರಯತ್ನ ನಡೆಸಲಾಗುತ್ತಿದೆ.
• ಗೋವಾದ ಬಳಿ 9 ನದಿಗಳಿವೆ, ಕರ್ನಾಟಕದಲ್ಲಿ 35 ನದಿಗಳಿವೆ, ಮಹದಾಯಿ ಗೋವಾದ ಜೀವನದಿಯಾಗಿದೆ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಕಷ್ಟು‌ ನದಿಗಳಿವೆ.
• ಕರ್ನಾಟಕ ತನ್ನ ನೀರಿನ ಬೇಡಿಕೆಯಲ್ಲಿ ಪರಿಸರ ಬಳಕೆಗೆ ನೀರನ್ನೆ ಹಂಚಿಲ್ಲ. ಪರಿಸರಕ್ಕೆ ನೀರು ನೀಡುವುದು ಕೇವಲ‌ ಗೋವಾದ ಬಾಧ್ಯತೆಯಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೂಡ ಪರಿಸರಕ್ಕೆಂದು ನೀರು ನೀಡಬೇಕು.
• ‎ ಸಮುದ್ರಕ್ಕೆ ನೀರು ಸೇರುವುದು ನೈಸರ್ಗಿಕ ಪ್ರಕ್ರಿಯೆ ಎಂದು ವಕೀಲ ಆತ್ಮರಾಮ್ ನಾಡಕರ್ಣಿ ವಾದಿಸಿದರು.

*ಕರ್ನಾಟಕಕದ ವಾದದ ಮುಖ್ಯಾಂಶಗಳು*

• ಹುಬ್ಬಳ್ಳಿ- ಧಾರವಾಡಕ್ಕೆ‌ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ.
•  ಕೇಂದ್ರ ಜಲ‌ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಅತಿ‌ ಹೆಚ್ಚಿನ‌ ಆದ್ಯತೆ ನೀಡಬೇಕು.
•  ‎ಹುಬ್ಬಳ್ಳಿ - ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕು.
•  ‎ಮಹದಾಯಿಯ ನೀರು ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು.
• ಗೋವಾ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ.
• ‎ಆದರೆ 173  ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ.
• ‎ ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ.
• ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ.
• ‎ಆದರೆ ಮತ್ತೊಂದು ರಾಜ್ಯವು ಯೋಜನೆಯಿಂದ ತನಗೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು ಎಂದು ಕರ್ನಾಟಕ ತನ್ನ ವಾದ ಮಂಡಿಸಿದೆ.

ಗೋವಾದ ವಾದವನ್ನು ಬೆಂಬಲಿಸಿದ ಮಹಾರಾಷ್ಟ್ರ ರಾಜ್ಯಗಳ ನೈಜ ಅಗತ್ಯವನ್ನು ನ್ಯಾಯಾಧಿಕರಣ ನಿರ್ಧರಿಸಬೇಕು. ಕೃಷ್ಣಾ ನದಿ ನೀರಿನಲ್ಲಿ ಕೃಷ್ಣಾ ನ್ಯಾಯಾಧಿಕರಣ ರಚನೆಯಾಗುವ ಮೊದಲು ಆಂಧ್ರ ಪ್ರದೇಶ 750 ಟಿಎಂಸಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರಂ ನೀಡಿ ಅದನ್ನು ರಕ್ಷಿಸಳಗಿತ್ತು. ಈ ಪ್ರಕರಣದಲ್ಲಿಯೂ ಪ್ರಸ್ತುತ ಬಳಕೆಯನ್ನು ರಕ್ಷಿಸಬೇಕು. ನ್ಯಾಯಾಧಿಕರಣವು ಈ ಪ್ರಕರಣದಲ್ಲಿ ಪರಿಸರ, ಅಂತರಕೊಳ್ಳ ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಬೇಕು ಎಂದು ವಾದ ಮಂಡಿಸಿತ್ತು.

Trending News