ಬಿಜೆಪಿಯದ್ದು ಒಂದು ವರ್ಷದ ಸಾಧನೋತ್ಸವ ಅಲ್ಲ, ಭ್ರಷ್ಟೋತ್ಸವ: ಸಿದ್ದರಾಮಯ್ಯ

40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Written by - Puttaraj K Alur | Last Updated : Jul 27, 2022, 08:57 AM IST
  • ಬಸವರಾಜ್ ಬೊಮ್ಮಾಯಿ ಸಿಎಂ ಆಗಿ 1 ವರ್ಷ ಪೂರೈಸಿದ ಹಿನ್ನೆಲೆ ಜು.28ರಂದು ಚಿಕ್ಕಬಳ್ಳಾಪುರದಲ್ಲಿ ವರ್ಷಾಚರಣೆ
  • ಇದು ಬೊಮ್ಮಾಯಿ ಸರ್ಕಾರದ 1 ವರ್ಷದ ಸಾಧನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂದ ಸಿದ್ದರಾಮಯ್ಯ
  • ಭ್ರಷ್ಟ ಹಣದಿಂದಲೇ ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟಾಚಾರವನ್ನೇ ಉಸಿರಾಡುತ್ತಿದೆ ಎಂದು ಟೀಕೆ
ಬಿಜೆಪಿಯದ್ದು ಒಂದು ವರ್ಷದ ಸಾಧನೋತ್ಸವ ಅಲ್ಲ, ಭ್ರಷ್ಟೋತ್ಸವ: ಸಿದ್ದರಾಮಯ್ಯ  title=
'ಬಿಜೆಪಿ ಭ್ರಷ್ಟಾಚಾರವನ್ನೇ ಉಸಿರಾಡುತ್ತಿದೆ'

ಬೆಂಗಳೂರು: ‘ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆ ಜುಲೈ 28ರಂದು ಚಿಕ್ಕಬಳ್ಳಾಪುರದಲ್ಲಿ ವರ್ಷಾಚರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಭ್ರಷ್ಟ ಹಣದಿಂದಲೇ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಈ ಸರ್ಕಾರದ ವರ್ಷದ ಸಂಭ್ರಮವನ್ನು "ಭ್ರಷ್ಟೋತ್ಸವ" ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆಯಾಗಿದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಒಮ್ಮೆಯೂ ತಮ್ಮನ್ನು ತಾವು ನ್ಯಾಯಯುತ ತನಿಖೆಗೆ ಒಳಪಡಿಸಿಕೊಳ್ಳದೆ ಸರ್ಕಾರ ಭಂಡತನ ಮೆರೆದಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದನ್ನೂ ಓದಿ: Vinay Guruji : ಟ್ರೋಲ್ ಪೇಜ್ ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿನಯ್ ಗುರೂಜಿ

‘ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಜುಲೈ 26, ಬಸವರಾಜ್ ಬೊಮ್ಮಾಯಿಯವರು RSSನಿಂದ ನೇಮಕಗೊಂಡದ್ದು ಜುಲೈ 28ರಂದು. ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದಾ?’ ಎಂದು ಪ್ರಶ್ನಸಿದ್ದಾರೆ.

‘15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ. ವಿಶೇಷ ಅನುದಾನ ತರಲಾಗದೆ ಕೇಂದ್ರದ ಬಿಜೆಪಿ ನಾಯಕರ ಎದುರು ಮಂಡಿಯೂರಿ ಶರಣಾದ ಬಸವರಾಜ್ ಬೊಮ್ಮಾಯಿಯವರ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಎಸಗಿದ ದ್ರೋಹವನ್ನೇ ಸಂಭ್ರಮಾಚರಣೆ ಮಾಡಲು ಹೊರಟಿದೆಯೇ?’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: BJP : ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮಠಾಧೀಶರಿಂದ ಹೈಕಮಾಂಡ್ ಗೆ ಪತ್ರ

‘ಮೊಸರು, ಹಾಲು, ಮಂಡಕ್ಕಿ ಮುಂತಾದ ಬಡಜನರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿದರೂ ಜಿಎಸ್‌ಟಿ ಕೌನ್ಸಿಲ್ ನಲ್ಲಿ ಈ ಬಗ್ಗೆ ಉಸಿರೆತ್ತದ ಸಿಎಂ ಬಸವರಾಜ್ ಬೊಮ್ಮಾಯಿ, ಬಡವರ ಅನ್ನ ಕಸಿದದ್ದನ್ನೇ ತಮ್ಮ ಸಾಧನೆಯೆಂದು ಸಂಭ್ರಮಿಸಲು ಹೊರಟಿದ್ದಾರೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘2018ರ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಜನತೆಗೆ ನೀಡಿದ್ದ ಭರವಸೆಗಳಲ್ಲಿ ಶೇ.10ರಷ್ಟು ಈಡೇರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮಾಡಲಿಲ್ಲ, ಬಸವರಾಜ್ ಬೊಮ್ಮಾಯಿಯವರೂ ಮಾಡಿಲ್ಲ. ಈ ವಚನ ಭ್ರಷ್ಟತೆಯನ್ನು ಸಂಭ್ರಮಿಸಲು ಬಿಜೆಪಿ ಸರ್ಕಾರಕ್ಕೆ ಯಾಕಿಷ್ಟು ಉಮೇದು?’ ಎಂದು ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News