ಬೆಂಗಳೂರು: ನಿನ್ನೆಯಷ್ಟೇ ಕೇಂದ್ರ ಬಜೆಟಿನಿಂದ ನಿರಾಸೆ ಹೊಂದಿರುವ ರಾಜ್ಯದ ಜನತೆಯ ದೃಷ್ಠಿ ಈಗ ರಾಜ್ಯ ಬಜೆಟ್ ನತ್ತ ನೆಟ್ಟಿದೆ. ಬಜೆಟ್ ಮಂಡಿಸುವುದರಲ್ಲಿ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಫೆಬ್ರವರಿ 16ರಂದು 13ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಾವಧಿ ಈ ವರ್ಷ ಮೇ ತಿಂಗಳಿಗೆ ಮುಕ್ತಾಯವಾಗುವುದರಿಂದ ಮೂರು ತಿಂಗಳಿಗೆ ಲೇಖಾನುದಾನ ಪಡೆಯಲಿದ್ದಾರೆ. ಇದನ್ನು ಮಧ್ಯಂತರ ಬಜೆಟ್ ಎಂದೂ ಸಹ ಕರೆಯುತ್ತಾರೆ.
ಲೇಖಾನುದಾನ ಎಂದರೇನು?
ಪ್ರತಿ ವರ್ಷ ಆರ್ಥಿಕ ಸಾಲಿನ ಕೊನೆಯ ದಿನವಾದ ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ ಬಜೆಟ್(ಆಯವ್ಯಯ) ಮಂಡಿಸಲಾಗುತ್ತದೆ. ಆದರೆ ಚುನಾವಣೆ ಹೊಸ್ತಿಲಿನಲ್ಲಿರುವ ಸರ್ಕಾರ ಪೂರ್ಣಾವಧಿಯ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಆದರೆ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಮಂಡಿಸುವ ತನಕದ ಅವಧಿಯ ವೆಚ್ಚಗಳಿಗೆ ಉಭಯ ಸದನಗಳ ಅನುಮೋದನೆ ಬೇಕು. ಇದಕ್ಕಾಗಿ ಮಧ್ಯಂತರ ಬಜೆಟ್ ಮಂಡಿಸಿ ಲೇಖಾನುದಾನವನ್ನು ಅಂಗೀಕರಿಸಲಾಗುತ್ತದೆ. ಪೂರ್ಣಾವಧಿ ಬಜೆಟ್ ಮಂಡನೆಯಾಗುವವರೆಗೆ ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಇದರಿಂದ ಅನುಕೂಲವಾಗುತ್ತದೆ.