LIVE: ದೇವರ ಹೆಸರಿನಲ್ಲಿ ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾಗದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ 6.30ಕ್ಕೆ ಪ್ರಮಾಣವಚನ ಸ್ವೀಕರಿಸಿದರು.

Last Updated : Jul 26, 2019, 07:24 PM IST
LIVE: ದೇವರ ಹೆಸರಿನಲ್ಲಿ ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
Live Blog

ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾಗದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಬಿಜೆಪಿ ಹೈಕಮ್ಯಾಂಡ್ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇಂದೇ ಪ್ರಮಾಣವಚನ ಸಮಾರಂಭಕ್ಕೆ ಸಮಯ ನಿಗದಿ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ರಾಜ್ಯಪಾಲರು ಸಂಜೆ 6 ಗಂಟೆಗೆ ಪ್ರಮಾಣವಚನಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು.

ಮತ್ತೊಂದೆಡೆ, ಈಗಾಗಲೇ ಅತೃಪ್ತ ಶಾಸಕರ ರಾಜೀನಾಮೆ ವಿಚಾರಣೆ ಸ್ಪೀಕರ್ ಅಂಗಳದಲ್ಲಿದ್ದು, ಈಗಾಗಲೇ ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ನೀಡಿದ್ದಾರೆ. ಉಳಿದ ಶಾಸಕರ ರಾಜೀನಾಮೆ ವಿಚಾರವಾಗಿ ಶೀಘ್ರದಲ್ಲಿಯೇ ಆದೇಶ ನೀಡುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಅಲ್ಲದೆ, ಹಣಕಾಸು ಮಸೂದೆ ಜಾರಿಯಾಗದ ಹಿನ್ನೆಲೆಯಲ್ಲಿ ಸಂವಿಧಾನ ಬಿಕ್ಕಟ್ಟು ಎದುರಾಗಲಿದ್ದು, ಸರ್ಕಾರಿ ನೌಕರರಿಗೆ ವೇತನ ಸಿಗುವುದೂ ಕಷ್ಟ ಎನ್ನಲಾಗಿದೆ.ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಯೇರಿದೆ. ಇಂದು ಬೆಳಿಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕ್ಷಣದಿಂದ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ನಡೆದ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ...

26 July, 2019

  • 19:11 PM
  • 18:34 PM

    - ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಆರಂಭ

    - ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

    - ದೇವರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ

    - ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ರಾಜ್ಯಪಾಲ ವಜೂಭಾಯಿ ವಾಲಾ

  • 18:34 PM

    - ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪತ್ರಕ್ಕೆ ಸಹಿ ಮಾಡಿದ ಯಡಿಯೂರಪ್ಪ

    - ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದ ರಾಜ್ಯಪಾಲ ವಜೂಭಾಯಿ ವಾಲಾ.

  • 18:18 PM

    ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ರಾಜ್ಯಪಾಲ ವಜೂಭಾಯಿ ವಾಲ

     

  • 18:15 PM

    ರಾಜಭವನಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ

    - ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ.ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ: ರಾಜಭವನದ ಮುಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಯಡಿಯೂರಪ್ಪ

  • 18:14 PM

    - ಕೆಲವೇ ಕ್ಷಣಗಳಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

    - ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಸಂಸದೆ ಶೋಭಾ ಕರಂದ್ಲಾಜೆ

     

  • 17:58 PM

    - ರಾಜಭವನದಲ್ಲಿ ಯಡಿಯೂರಪ್ಪ ಪ್ರಮಾಣವಚನಕ್ಕೆ ಸಕಲ ಸಿದ್ಧತೆ

    - ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕ ರೋಷನ್ ಬೇಗ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿದಂತೆ ಅನೇಕ ನಾಯಕರು ಭಾಗಿ

     

  • 17:37 PM

    ಬಿಜೆಪಿ ಕಚೇರಿಯಿಂದ ರಾಜಭವನದತ್ತ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಇನ್ನು ಕೆಲವೇ ಕ್ಷಣಗಳಲ್ಲಿ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ.

  • 17:16 PM

    ಪ್ರಮಾಣವಚನ ಸಮಾರಂಭಕ್ಕೆ ತೆರಳುವ ಮುನ್ನ ಬೆಂಗಳೂರಿನ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿ.ಎಸ್.ಯಡಿಯೂರಪ್ಪ.  

  • 17:12 PM

    ರಾಜ್ಯದ ಆರೂವರೆ ಕೋಟಿ ಜನರ ಅಪೇಕ್ಷೆಯಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಬಿ.ಎಸ್.ಯಡಿಯೂರಪ್ಪ

    - ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಮುನ್ನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ

    - ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಯಡಿಯೂರಪ್ಪ

    - ರಾಜ್ಯದ ಆರೂವರೆ ಕೋಟಿ ಜನರ ಅಪೇಕ್ಷೆಯಂತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. 

    - ಕಳೆದ 14 ತಿಂಗಳಿನಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿತ್ತು. 

    - ಜನರಿಗೆ ಉತ್ತಮ ಆಡಳಿತ ನಿಡುವ ಸಂಕಲ್ಪದೊಂದಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ.

     

  • 16:59 PM

    ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಹಿನ್ನೆಲೆ

    ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಣೆಗೆ ಎಲ್ಇಡಿ ಸ್ಕ್ರೀನ್ ಅಳವಡಿಕೆ

     

  • 16:53 PM

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ 6 ಗಂಟೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹೀಗಿದೆ. ..

  • 16:48 PM

    ಬಿಜೆಪಿ ಈಗಲೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರುತ್ತಿದೆ- ವಿ.ಎಸ್.ಉಗ್ರಪ್ಪ

    ರಾಜ್ಯ ವಿಧಾನಸಭೆಯ ಸಂಖ್ಯೆ 225 ಅದರಲ್ಲಿ ಮೂವರು ಅನರ್ಹಗೊಂಡಿದ್ದಾರೆ, ಉಳಿದವರು 222. ಸರ್ಕಾರ ರಚನೆಗೆ 111 ಶಾಸಕರ ಬಲ ಅವಶ್ಯತೆ ಇದೆ. ಆದರೆ ಬಿಜೆಪಿ ಕೇವಲ 105 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ -ಜೆಡಿಎಸ್ ಸಂಖ್ಯೆ 101 ಇದೆ. ಹದಿಮೂರು ಶಾಸಕರ ಅನರ್ಹ ಪ್ರಕರಣ ಇನ್ನೂ ಬಾಕಿ ಇದೆ. ಅಲ್ಪ ಮತದ ಪಕ್ಷಕ್ಕೆ ರಾಜ್ಯಪಾಲರು ಅವಕಾಶ ನೀಡುತ್ತಿದ್ದಾರೆ. ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆರೋಪ

  • 15:45 PM

    ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನಕ್ಕೆ ಕ್ಷಣಗಣನೆ:

    ರಾಜಭವನಕ್ಕೆ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸುತ್ತಿರುವ ನಗರ ಪೋಲಿಸ್ ಆಯುಕ್ತ ಅಲೋಕ್ ಕುಮಾರ್

  • 15:41 PM

    ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲೇ ಕಾರ್ಯದರ್ಶಿಗೆ ಬಿ.ಎಸ್. ಯಡಿಯೂರಪ್ಪ ಸೂಚನೆ:

    ಜುಲೈನಲ್ಲಿ ಆಗಿರುವ ಎಲ್ಲಾ ಸರ್ಕಾರದ ಆದೇಶಗಳನ್ನು ತಡೆಯಿರಿ ಎಂದು ಬಿ.ಎಸ್. ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಗೆ ಸೂಚನೆ ನೀಡಿದ್ದಾರೆ.

  • 15:29 PM

    ಬಿ.ಎಸ್. ಯಡಿಯೂರಪ್ಪಗೆ ಅಭಿನಂದಿಸಿದ ಬಿ.ಎಲ್.ಸಂತೋಷ್:

    "ಕರ್ನಾಟಕ ರಾಜ್ಯವು ವಿಕಾಸ ಯಾತ್ರೆಯ ಹೊಸ ಯುಗಕ್ಕೆ ಸಾಕ್ಷಿಯಾಗಲಿದೆ. ಇಂದು ಸಂಜೆ 6 ಗಂಟೆಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಕ್ಷದ ಕಚೇರಿ ಜಗನ್ನಾಥ್ ಭವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಯಡಿಯೂರಪ್ಪನವರಿಗೆ ಅಭಿನಂದನೆಗಳು" ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ.

  • 14:34 PM

    ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತದಲ್ಲಿ ಸೋತಿತ್ತು, ನಾಲ್ಕು ದಿನಗಳ ನಂತರ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಿರುವುದುದ ನಮ್ಮ ಸೌಭಾಗ್ಯ- ಶಾಸಕ ರೇಣುಕಾಚಾರ್ಯ

  • 14:17 PM

    ಬಹುಮತ ಇಲ್ಲದೇ ಇದ್ದರೂ ಸರ್ಕಾರ ರಚನೆಗೆ ಬಿಜೆಪಿಗೆ ರಾಜ್ಯಪಾಲರು ಆಹ್ವಾನ ನೀಡಿರುವ ಕ್ರಮ ಕಾನೂನು ಬಾಹಿರ- ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ
     

  • 14:13 PM

    ಬಿಜೆಪಿಯವರಿಗೆ ನೈತಿಕವಾಗಿ ಏನನ್ನೂ ಮಾಡುವುದಕ್ಕೆ ಬರುವುದೇ ಇಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ: ಡಾ. ಜಿ. ಪರಮೇಶ್ವರ 
    ಇದ್ದ ಸರ್ಕಾರವನ್ನು ಬೀಳಿಸುವುದೂ ಅನೈತಿಕವಾಗಿ. ಸಹಜ ಬಹುಮತವಿಲ್ಲದೆ ಸರ್ಕಾರ ರಚಿಸುವುದೂ ಅನೈತಿಕವಾಗಿ. ಬಿಜೆಪಿಯವರಿಗೆ ನೈತಿಕವಾಗಿ ಏನನ್ನೂ ಮಾಡುವುದಕ್ಕೆ ಬರುವುದೇ ಇಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕಳೆದ ಎರಡು ದಶಕಗಳಲ್ಲಿ ಸರಕಾರಗಳನ್ನು ಅಸ್ಥಿರಗೊಳಿಸುವುದೇ ಕರ್ನಾಟಕಕ್ಕೆ ಬಿಜೆಪಿ ನೀಡಿರುವ ಕೊಡುಗೆ.

    ಅತೃಪ್ತರನ್ನು ಮತ್ತೆ ಮನವೊಲಿಸುವ ಪ್ರಶ್ನೆಯೇ ಇಲ್ಲ. ಇವರಿಂದ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವೊಂದು ಸೃಷ್ಟಿಯಾಗಿದೆ. ದ್ರೋಹ ಬಗೆದ ಅವರನ್ನು ಅನರ್ಹಗೊಳಿಸಬೇಕು ಎಂದು ವಿಧಾನಸಭೆಯ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದೇವೆ. ಎಲ್ಲಾ ಆಗುಹೋಗುಗಳನ್ನು ಸಭಾಧ್ಯಕ್ಷರು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
     

  • 14:09 PM

    ರಾಜಭವನದ ಮುಂಭಾಗ ಬೃಹತ್ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ:

    - ರಾಜಭವನದಲ್ಲಿ ಭರದಿಂದ ಸಾಗುತ್ತಿರುವ ಸಿದ್ಧತಾ ಕಾರ್ಯ.
    - ನೂರಾರು ಕಾರ್ಯಕರ್ತರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಲು ರಾಜಭಾನದ ಹೊರಗಡೆ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ

     

  • 13:52 PM

    ಇಂದು ಸಂಜೆ ಯಡಿಯೂರಪ್ಪ ಪ್ರತಿಜ್ಞಾವಿಧಿ ಹಿನ್ನೆಲೆಯಲ್ಲಿ  ರಾಜಭವನದ ಸುತ್ತಮುತ್ತ ಪೋಲಿಸ್ ಸರ್ಪಗಾವಲು:

    - ರಾಜಭವನಕ್ಕೆ ಆಗಮಿಸಿದ ಬೆಂಗಳೂರಿನ ಡಿಸಿಪಿಗಳು ಹಾಗೂ ಬೆಂಗಳೂರು ಹೆಚ್ಚುವರಿ ಪೋಲಿಸ್ ಆಯುಕ್ತ ಉಮೇಶ್ ಕುಮಾರ್
    - ರಾಜಭವನದಲ್ಲಿ ಭದ್ರತೆ ಕುರಿತು ರಾಜಭವನದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವ ದಕ್ಷಿಣ ಡಿಸಿಪಿ ರೋಹಿಣಿ ಸೇಪಟ್, ಸೌತ್ ಈಸ್ಟ್ ಡಿಸಿಪಿ ಇಷಾ ಪಂತ್,  ‌‌ಉತ್ತರ ಡಿಸಿಪಿ ಶಶಿಕುಮಾರ್, ಬೆಂಗಳೂರು ಕೇಂದ್ರಭಾಗದ ಡಿಸಿಪಿ ಚಂದ್ರಗುಪ್ತ ಹಾಗೂ ಈಸ್ಟ್ ಡಿಸಿಪಿ ರಾಹುಲ್ ಕುಮಾರ್.
    - ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ

  • 13:37 PM

    ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿಕೆ:

    - ವರಿಷ್ಠರ ಸೂಚನೆ ಮೇರೆಗೆ ಸರ್ಕಾರ ರಚನೆ.

    - ಹಿಂದಿನ ಸರ್ಕಾರದಲ್ಲಿ ಕೆಲ ತೊಂದರೆಗಳಾಗಿದ್ದವು.

    - ಈ ಬಾರಿ ದಕ್ಷ ಆಡಳಿತ ನೀಡಲಿದ್ದೇವೆ.

    - ಇಂದು ಬಿ.ಎಸ್. ಯಡಿಯೂರಪ್ಪ ಮಾತ್ರ ಅಧಿಕಾರ ಸ್ವೀಕರಿಸಲಿದ್ದಾರೆ.

  • 13:32 PM

    ಬಿಎಸ್‌ವೈ ಸಿಎಂ ಆಗಿ ಪ್ರತಿಜ್ಞಾವಿಧಿ ಹಿನ್ನೆಲೆ ರಾಜಭವನದ ಸುತ್ತ ಪೊಲೀಸ್ ಬಿಗಿ ಭದ್ರತೆ:

    - ನಾಲ್ಕು ಬಿಎಂಟಿಸಿ ಬಸ್ ಗಳಲ್ಲಿ ರಾಜಭವನದತ್ತ ಆಗಮಿಸಿದ ಪೊಲೀಸರು

    - ಹೆಚ್ಚುವರಿಯಾಗಿ ಆಗಮಿಸುತ್ತಿರುವ ಪೊಲೀಸ್ ತುಕಡಿಗಳು.

    - ರಾಜಭವನದ ಮುಂದೆ ಬ್ಯಾರಿಕೇಡ್ ಅಳವಡಿಕೆ.

    - ರಾಜಭವನದ ಮುಂದೆ ಬೀಡು ಬಿಟ್ಟಿರುವ ಪೊಲೀಸರು.

  • 13:30 PM

    ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಹಿನ್ನೆಲೆಯಲ್ಲಿ ರಾಜಭವನದ ಸುತ್ತ ಭದ್ರತೆ ಹೆಚ್ಚಳ:

    ಇಂದು ಸಂಜೆ ರಾಜಭವನದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಮಾಣವಚನ ಸಮರ್ಮಭಕ್ಕೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ 1 ಸಾವಿರ ಪೋಲಿಸರನ್ನು ನಿಯೋಜಿಸಲಾಗಿದೆ. ಪ್ರಮಾಣವಚನ ಸಮಾರಂಭಕ್ಕೆ ಕೇಂದ್ರ ನಾಯಕರು ಬಂದರೆ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು- ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

  • 12:40 PM

    ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಸೂಚನೆ

  • 12:39 PM

    ಇಂದು ಸಂಜೆ 5 ಗಂಟೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಬೆಂಗಳೂರಿಗೆ ಆಗಮನ

  • 12:35 PM

    ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ಮನೆಮಾಡಿದ ಸಂಭ್ರಮ

    - ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ಯಡಿಯೂರಪ್ಪ ಅವ್ರ ಸಂಬಂಧಿಕರು, ಗ್ರಾಮದ ಜನತೆ ದೇವಸ್ಥಾನಗಳಲ್ಲಿ ಸಂಜೆ 5 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ.  

     

  • 12:10 PM

    - ಪ್ರಮಾಣವಚನ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

    - ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ಕರೆದಿರುವ ಬಿ.ಎಸ್.ಯಡಿಯೂರಪ್ಪ

  • 11:46 AM

    ಪ್ರಮಾಣವಚನಕ್ಕೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರಕ್ಕೆ ಜೆಡಿಎಸ್ ಆಕ್ರೋಶ

    - ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಆದರೆ ಬಿ.ಎಸ್.ಯಡಿಯೂರಪ್ಪ ಅವರು ತಮಗೆ 105 ಶಾಸಕರ ಬೆಂಬಲವಿದೆ ಎಂದು‌ ಸರ್ಕಾರ ರಚನಗೆ ಹಕ್ಕು ಮಂಡಿಸಿದ್ದು, ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ‌ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಟ್ವೀಟ್ ಮಾಡಿರುವ ಜೆಡಿಎಸ್.

  • 11:38 AM

    ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಮಯ್ಯ ಆಕ್ಷೇಪ

    - ಬಹುಮತ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಳು ಹೊರಟಿರುವುದು ಮತ್ತು ಈ ತರಾತುರಿ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು- ಎರಡೂ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಸಿದ್ದರಾಮಯ್ಯ ಟ್ವೀಟ್

    - ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲು ಮುಂದಾಗಿರುವುದು ಸಂವಿಧಾನದ ಮೇಲೆ ಬಿಜೆಪಿಗೆ ನಂಬಿಕೆಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ: ಸಿದ್ದರಾಮಯ್ಯ

  • 11:29 AM

    ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

    - ಯಡಿಯೂರಪ್ಪ ಅವರು ಹೋರಾಟಗಾರರು. ಅವರು 4 ಬಾರಿ ಸಿಎಂ ಆಗಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ರೈತ ಹೋರಾಟಗಾರರು. ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಲ್ಲಿದೆ. ಹಾಗಾಗಿ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಒಳ್ಳೆಯದು ಮಾಡುವ, ರಾಜ್ಯದ ಜನತೆಗೆ ಒಳ್ಳೆಯದು ಮಾಡುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. 

    - ಮುಖ್ಯಮಂತ್ರಿ ಪಟ್ಟ ಅನ್ನೋದು ಮುಳ್ಳಿನ ಹಾಸಿಗೆ ಇದ್ದಂತೆ. ಹೈಕಮ್ಯಾಂಡ್ ಮತ್ತು ಅಮಿತ್ ಷಾ ಅವರ ಮಾರ್ಗದರ್ಶನದಲ್ಲಿ ಯಡಿಯೂರಪ್ಪ ಕೆಲಸ ಮಾಡಲಿದ್ದಾರೆ. ಈಗಾಗಲೇ ಯಡಿಯೂರಪ್ಪ ಅವರಿಗೆ ಅನುಭವವಿದೆ. ನಮ್ಮೆಲ್ಲಾ ಶಾಸಕರೂ ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರ ಜೊತೆಗಿರಲಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದರೆ ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸ, ಭರವಸೆ ನಮಗಿದೆ. 

    - ರಾಜೀನಾಮೆ ನೀಡಿ ಮುಂಬೈನಲ್ಲಿ ಇರುವ ಶಾಸಕರು ಮೈತ್ರಿ ನಾಯಕರಾದ ಕುಮಾರಸ್ವಾಮಿ ಮತ್ತು ಸಿದ್ದರಮಯ್ಯ ಅವರ ನಡೆಯಿಂದ ಬೇಸತ್ತು ಹೋಗಿದ್ದಾರೆ. ಮೂರು ಶಾಸಕರು ಅನರ್ಹ ಗೊಂಡಿರುವುದನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸಕರೂ ಇನ್ನೂ ಅವರವರ ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಸದಸ್ಯರಾಗಿಯೇ ಇದ್ದಾರೆ. ಅವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ : ಶೋಭಾ ಕರಂದ್ಲಾಜೆ

  • 11:24 AM

    ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹೇಳಿಕೆ

    - ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾದ ಕಾರಣ ಸರ್ಕಾರ ಪತನವಾಗಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಮತ್ತೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ನಾಲ್ಕನೇ ಬಾರಿಗೆ ಯಡಿಯೂರಪ್ಪ ಪ್ರಮಾಣವಚನ ಸ್ವಿಕರಿಸಲಿದ್ದಾರೆ.ಮುಂದಿನ ದಿನಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಬಿಜೆಪಿ ಕಉತ್ತಮ ಆಡಳಿತ ನೀಡಲಿದೆ: ಸಿ.ಪಿ.ಯೋಗೇಶ್ವರ್  

    - ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳಲ್ಲಿನ ಒಳಜಗಳವೇ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣ. ಅದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ- ಸಿ.ಪಿ.ಯೋಗೇಶ್ವರ್  

  • 11:07 AM

    ವಿಧಾನಸಭೆಯ ಸಂಖ್ಯಾಬಲ

    - ಸ್ಪೀಕರ್ ಸೇರಿ ವಿಧಾನಸಭೆಯ ಒಟ್ಟು ಸಂಖ್ಯಾಬಲ: 222

    - ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಸೇರಿ ಬಿಜೆಪಿ ಸಂಖ್ಯಾ ಬಲ: 106

    - ರಾಜೀನಾಮೆ ನೀಡಿರುವ ಸದಸ್ಯರು 13

    - ಎನ್.ಮಹೇಶ್ ತಟಸ್ಥವಾಗಿ ಉಳಿಯುವ ಸಾಧ್ಯತೆ

    - ಹೀಗಾಗಿ ಬಹುಮತಕ್ಕೆ ಅಗತ್ಯವಾದ ಸಂಖ್ಯೆ 112. 

    - ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಇನ್ನೂ 6 ಶಾಸಕರ ಕೊರತೆ.

    - ಹೀಗಿರುವಾಗ ಒಂದು ವಾರದ ಬಳಿಕ ಬಿಜೆಪಿ ಬಹುಮತ ಸಾಬೀತುಪಡಿಸಲಿದೆಯೇ ಎಂಬ ಕುತೂಹಲದಲ್ಲಿ ಜನತೆ

     

     

     

  • 11:04 AM

    ಬಿ.ಎಸ್.ಯಡಿಯೂರಪ್ಪಗೆ ರಾಜ್ಯಪಾಲರ ಸೂಚನೆ

    - ಪ್ರಮಾಣವಚನ ಸ್ವೀಕರಿಸಿದ ಒಂದು ವಾರದ ಸಮಯಾವಕಾಶದಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಲಾಗಿದೆ.

  • 11:00 AM

    ಪ್ರಮಾಣವಚನ ಸಂಬಂಧ ಶಾಸಕ ವಿ.ಸೋಮಣ್ಣ ಹೇಳಿಕೆ

    - ಬಿಜೆಪಿ ಹೈಕಮ್ಯಾಂಡ್ ಆದೇಶದ ಮೇರೆಗೆ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರಲ್ಲಿ ಯಾವುದೇ ತರಾತುರಿಯಿಲ್ಲ. ಶೀಘ್ರವಾಗಿ ಸರ್ಕಾರ ರಚನೆ ಆಗದಿದ್ದಲ್ಲಿ ಸರ್ಕಾರಿ ನೌಕರರಿಗೆ ಹಣಕಾಸಿನ ತೊಂದರೆ ಆಗಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ನಮಗೆ ಬಹುಮತ ಇದೆ. ಸರ್ಕಾರ ರಚನೆಗೆ ಮುಂದಾಗಿದ್ದೇವೆ: ವಿ.ಸೋಮಣ್ಣ

  • 10:51 AM

    ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನಕ್ಕೆ ಕಾಂಗ್ರೆಸ್ ಆಕ್ಷೇಪ

    - ಬಿಜೆಪಿಗೆ ಬಹುಮತ ಇಲ್ಲ, ಹಾಗಾಗಿ ಯಾವುದೇ ಕಾರಣಕ್ಕೂ ಹಕ್ಕು ಮಂಡನೆಯಾಗಲೀ ಅಥವಾ ಪ್ರಮಾಣವಚನ ಸ್ವೀಕರಿಸುವುದಾಗಲೀ ಸಾಧ್ಯವಿಲ್ಲ.

    - ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ.

    - ಬಿಜೆಪಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಮತ್ತು ಸಾಮಾನ್ಯ ಜ್ಞಾನ ಹೊಂದುವ ಅಗತ್ಯ ಇದೆ: ಕಾಂಗ್ರೆಸ್ ಆಕ್ಷೇಪ

  • 10:43 AM

    ರಾಜ್ಯಪಾಲರ ಭೇಟಿ ಬಳಿಕ ಯಡಿಯೂರಪ್ಪ ಹೇಳಿಕೆ

    - ಇಂದು ಸಂಜೆ 6 ರಿಂದ 6.15ರೊಳಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ

    - ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸಂಜೆ 6 ರಿಂದ 6.15 ರೊಳಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಮಯ ಕೋರಿದ್ದೆ. ಅದಕ್ಕೆ ರಾಜ್ಯಪಾಲರು ಸಮ್ಅಮತಿಸಿ ಅನುಮತಿ ಪತ್ರವನ್ನೂ ನೀಡಿದ್ದಾರೆ. 

    - ಇಂದು ಸಂಜೆ 6 ರಿಂದ 6.15ರೊಳಗೆ ಪ್ರಮಾಣವಚನ ಸ್ವಿಕರಿಸುತ್ತೇನೆ

    - ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಎಲ್ಲಾ ಶಾಸಕರೂ ಸಮಾರಂಭಕ್ಕೆ ಆಗಮಿಸಬೇಕು. 

    - ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಪ್ರಮಾಣವಚನ ಸಮಾರಂಭಕ್ಕೆ ಸಹಕಾರ ನೀಡಬೇಕು. ಇದಕ್ಕಾಗಿ ಅವರಲ್ಲಿ ಮನವಿ ಮಾಡಿ ಪತ್ರ ಬರೆಯುತ್ತೇನೆ. ದೂರವಾಣಿ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸುತ್ತೇನೆ: ಬಿ.ಎಸ್.ಯಡಿಯೂರಪ್ಪ
     

Trending News