ಏಪ್ರಿಲ್ 12 ಹಾಗೂ 13 ರಂದು ಧಾರವಾಡದಲ್ಲಿ 'ಪರ್ವ' ಮಹಾ ರಂಗಪ್ರಯೋಗ

ಎಸ್.ಎಲ್.ಭೈರಪ್ಪನವರ ಮೇರು ಕೃತಿ 'ಪರ್ವ' ಕಾದಂಬರಿ ಆಧರಿಸಿದ ಮಹಾರಂಗಪ್ರಯೋಗವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬರುವ ಏಪ್ರಿಲ್ 12 ಮತ್ತು 13 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣದ ನಿರ್ದೆಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ.

Last Updated : Mar 30, 2022, 05:15 PM IST
  • ಇಂತಹದೊಂದು ಮಹಾ ರಂಗಪ್ರಯೋಗವನ್ನು ಸಾಂಸ್ಕೃತಿಕ ನಗರಿ ಧಾರವಾಡದ ಎಲ್ಲಾ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಮಾಧ್ಯಮದ ಸ್ನೇಹಿತರು ಯಶಸ್ವಿಗೊಳಿಸಬೇಕು ಎಂದು ಕಾರ್ಯಪ್ಪ ಕೋರಿದರು.
ಏಪ್ರಿಲ್ 12 ಹಾಗೂ 13 ರಂದು ಧಾರವಾಡದಲ್ಲಿ 'ಪರ್ವ' ಮಹಾ ರಂಗಪ್ರಯೋಗ title=

ಧಾರವಾಡ : ಎಸ್.ಎಲ್.ಭೈರಪ್ಪನವರ ಮೇರು ಕೃತಿ 'ಪರ್ವ' ಕಾದಂಬರಿ ಆಧರಿಸಿದ ಮಹಾರಂಗಪ್ರಯೋಗವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬರುವ ಏಪ್ರಿಲ್ 12 ಮತ್ತು 13 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣದ ನಿರ್ದೆಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ.

ಇಲ್ಲಿನ ರಂಗಾಯಣದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವ್ಯಾಸ ಮಹರ್ಷಿಗಳ  ಮಹಾಭಾರತ ಆಧರಿಸಿದ ಮರುಸೃಷ್ಟಿ, ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯನ್ನು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯನ್ನಾಗಿ ಎಸ್.ಎಲ್.ಭೈರಪ್ಪ ರಚಿಸಿದ್ದಾರೆ.

ಎಸ್.ಎಲ್.ಭೈರಪ್ಪನವರ  ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ ಕಾದಂಬರಿಯ ಪುಟ ಪುಟಗಳಲ್ಲಿ ಅನಾವರಣಗೊಂಡಿದೆ.ಮೂಲ ಕೃತಿಯ ಅಲೌಖಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ, ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ ಆದರ್ಶ, ವಾಸ್ತವತೆಗಳನ್ನು ಮೇಳೈಸಿಕೊಂಡಿದೆ.'ಪರ್ವ' ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ. ಇದೀಗ ಈ ಕೃತಿ ವಿಶ್ವ ಮನ್ನಣೆ ಪಡೆದಿದೆ. ಶೃಂಗರಾಷ್ಟ್ರಗಳ ಆಶಯದಂತೆ ಕಾದಂಬರಿ ವಿಶ್ವದ ಅನೇಕ ಭಾಗಗಳಲ್ಲಿ ಅನುವಾದಗೊಳ್ಳುತ್ತಿದೆ. ಪ್ರಸ್ತುತ ರಷ್ಯನ್, ಮ್ಯಾಂಡರಿನ್(ಚೀನಾ) ಭಾಷೆಗಳಿಗೆ ಅನುವಾದಗೊಂಡಿದೆ.

ಇದನ್ನೂ ಓದಿ: ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭ

ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಅನುವಾದಗೊಂಡು ಇದೊಂದು ಸಾರ್ವಕಾಲಿಕ ಕೃತಿಯಾಗಿ ವಿಜೃಂಭಿಸಿದೆ. 600 ಪುಟಗಳ ಈ ಬೃಹತ್ ಕೃತಿಗೆ ಯಾವುದೇ ಲೋಪವಾಗದಂತೆ  ಗಟ್ಟಿಯಾಗಿ ವಸ್ತುನಿಷ್ಠವಾಗಿ ಆಧುನಿಕ ರಂಗಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಖ್ಯಾತ ರಂಗ ನಿರ್ದೆಶಕ ಪ್ರಕಾಶ್ ಬೆಳವಾಡಿಯವರು ರಂಗಪಠ್ಯ ರೂಪಿಸಿ, ಈ ಮಹಾ ರಂಗಪ್ರಯೋಗವನ್ನು ನಿರ್ದೇಶನ ಮಾಡಿದ್ದಾರೆ. ಕಲಾವಿದರು-ತಂತ್ರಜ್ಞರು ಸೇರಿ ಸರಿಸುಮಾರು 50 ಜನರ ತಂಡ ನಿರಂತರ ಆರು ತಿಂಗಳ ಪರಿಶ್ರಮದಿಂದ ಈ ಮಹಾ ರಂಗಪ್ರಯೋಗವನ್ನು ಕಟ್ಟಿದೆ. ಕನ್ನಡ ಕಾಯಕ ವರ್ಷದಲ್ಲಿ “ಕನ್ನಡ ರಂಗಭೂಮಿ' ವಿಶ್ವದ ಮತ್ತು ಭಾರತೀಯ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಬೇಕೆಂಬ ಮೈಸೂರು ರಂಗಾಯಣ (RANGAYANA) ದ ಕನಸು ನನಸಾಗಿದೆ. ಪರ್ವ ಈಗಾಗಲೇ ಇಪ್ಪತ್ತು ಪ್ರದರ್ಶನಗಳನ್ನು ಮುಗಿಸಿದೆ ಎಂದರು.

ನಮ್ಮ ರಂಗಭೂಮಿ ಸಾಹಸಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆರ್ಥಿಕ ನೆರವು ನೀಡಿ ಸಹಕರಿಸಿದೆ. ನಾಟಕದ ಸಿದ್ದತೆಗೆ 50  ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕಳೆದ ಒಂದು ವರ್ಷದಿಂದ ಪರ್ವಕ್ಕಾಗಿ ಆಯ್ಕೆ ಮಾಡಿಕೊಂಡ ಸರಿಸುಮಾರು 35ಕ್ಕೂ ಹೆಚ್ಚು ಕಲಾವಿದರಿಗೆ ಮಾಸಿಕ ಸಂಭಾವನೆ ನೀಡುತ್ತಾ ಬಂದಿದ್ದೇವೆ. 38 ಲಕ್ಷ ರೂ.ಗಳನ್ನು ಸಂಭಾವನೆಗಾಗಿ ವೆಚ್ಚ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ‘ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ’

ಈ ಮಹಾ ರಂಗಪ್ರಯೋಗ 'ಪರ್ವ' ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕೆಂಬ ಯೋಜನೆಯನ್ನು ಮೈಸೂರು ರಂಗಾಯಣ ರೂಪಿಸಿದೆ.ಧಾರವಾಡ (Dharwad)ದ ಸೃಜನ ರಂಗಮಂದಿರದಲ್ಲಿ ಏಪ್ರೀಲ್ 12 ಹಾಗೂ 13 ರಂದು ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ.ಪ್ರತಿದಿನ ಬೆಳಿಗ್ಗೆ 10.30 ಕ್ಕೆ ನಾಟಕ ಪ್ರಾರಂಭವಾಗುತ್ತದೆ.ನಾಲ್ಕು ವಿರಾಮಗಳು ಸೇರಿ 8 ತಾಸುಗಳ ನಾಟಕ, ಮಧ್ಯೆ ಊಟಕ್ಕೆ 30 ನಿಮಿಷಗಳ ವಿರಾಮ.ಇನ್ನುಳಿದಂತೆ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ಇರುತ್ತದೆ.ಈ ಮಹಾ ರಂಗಪ್ರಯೋಗದ ಖರ್ಚು ವೆಚ್ಚ ದೊಡ್ಡ ಪ್ರಮಾಣದಲ್ಲಿರುವದರಿಂದ ಮತ್ತು ದೀರ್ಘ ಪ್ರದರ್ಶನದ ಶ್ರಮ ಎಲ್ಲವನ್ನೂ ಪರಿಗಣಿಸಿ 200 ರೂ.ಬೆಲೆಯ ಟಿಕೆಟ್‍ಗಳನ್ನು ನಿಗದಿಗೊಳಿಸಲಾಗಿದೆ.ಧಾರವಾಡ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಟಿಕೆಟ್‍ಗಳು ಲಭ್ಯವಿರುತ್ತವೆ.ರಂಗಾಯಣದ ವೆಬ್ ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್  ಪಡೆಯಬಹುದಾಗಿದೆ ಎಂದರು.

ಇಂತಹದೊಂದು ಮಹಾ ರಂಗಪ್ರಯೋಗವನ್ನು ಸಾಂಸ್ಕೃತಿಕ ನಗರಿ ಧಾರವಾಡದ ಎಲ್ಲಾ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಮಾಧ್ಯಮದ ಸ್ನೇಹಿತರು ಯಶಸ್ವಿಗೊಳಿಸಬೇಕು ಎಂದು ಕಾರ್ಯಪ್ಪ ಕೋರಿದರು.

ಇದೇ ವೇಳೆ ಪರ್ವ ಮಹಾರಂಗಪ್ರಯೋಗದ ಭಿತ್ತಿಪತ್ರಗಳು,ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ  ಕುಮಾರ್ ಬೇಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News