ಗೋಬಿಮಂಚೂರಿ ವಿಚಾರಕ್ಕೆ ಕೊಲೆ; ಯಾವ ಕ್ರೈಂ-ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ ಈ ಮರ್ಡರ್ ಸ್ಟೋರಿ!

ಗೋಬಿ ಮಂಚೂರಿ ವಿಚಾರಕ್ಕೆ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಮತ್ತು ಆತನ ತಾಯಿ ಸೇರಿ ಒಟ್ಟು ಮೂವರನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು 5 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Written by - Puttaraj K Alur | Last Updated : Oct 7, 2022, 10:57 AM IST
  • ಯಾವ ಕ್ರೈಂ-ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ ಬೆಂಗಳೂರಿನಲ್ಲಿ ನಡೆದ ಈ ಮರ್ಡರ್ ಸ್ಟೋರಿ
  • ಅಜ್ಜಿಯನ್ನು ಕೊಂದು ಮನೆಯಲ್ಲಿ ಹೂತಿಟ್ಟಿದ್ದ ಮೊಮ್ಮಗ-ತಾಯಿ ಸೇರಿ ಮೂವರ ಬಂಧನ
  • 5 ವರ್ಷಗಳ ಬಳಿಕ ಮಹಾರಾಷ್ಟ್ರ ಕೊಲ್ಹಾಪುರದಲ್ಲಿ ವೃದ್ಧೆ ಹತ್ಯೆಗೈದಿದ್ದ ಆರೋಪಿಗಳು ಬಂಧನ
ಗೋಬಿಮಂಚೂರಿ ವಿಚಾರಕ್ಕೆ ಕೊಲೆ; ಯಾವ ಕ್ರೈಂ-ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ ಈ ಮರ್ಡರ್ ಸ್ಟೋರಿ! title=
ವೃದ್ಧೆ ಹತ್ಯೆಗೈದಿದ್ದ ಆರೋಪಿಗಳು ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಒಂದು ಅಪರಾಧ ಕೃತ್ಯವು ಯಾವ ಕ್ರೈಂ-ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲ. ಮನೆ ಸದಸ್ಯೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಕಥೆ ಇದು. 6 ತಿಂಗಳು ಶವದೊಂದಿಗೆ ಮನೆಯಲ್ಲಿದ್ದ ಹಂತಕರ ಕೈಗೆ ಕೊನೆಗೂ ಖಾಕಿಪಡೆ ಕೊಳ ತೊಡಿಸಿದೆ.

6 ತಿಂಗಳ ಬಳಿಕ ಹತ್ಯೆಯ ರೋಚಕ ರಹಸ್ಯ ಬಯಲಾಗಿದ್ದು, 5 ವರ್ಷಗಳ ಬಳಿಕ ವೃದ್ಧೆಯನ್ನು ಹತ್ಯೆಗೈದಿದ್ದ ಆರೋಪಿಗಳ ಬಂಧನವಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಆರೋಪಿಗಳನ್ನು ಪೊಲೀಸರು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2016ರ ಆಗಸ್ಟ್‍ನಲ್ಲಿ ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್‍ನಲ್ಲಿ ವೃದ್ಧೆಯ ಹತ್ಯೆ ನಡೆದಿತ್ತು. 2017ರ ಮೇನಲ್ಲಿ ಹತ್ಯೆಯ ವಿಚಾರ ಬಯಲಾಗಿತ್ತು.

ವೃದ್ಧೆ ಶಾಂತಕುಮಾರಿ (69)ಯನ್ನು ಆಕೆಯ ಮೊಮ್ಮಗ ಸಂಜಯ್ ಹತ್ಯೆಗೈದಿದ್ದ. ಬಳಿಕ  ಸ್ನೇಹಿತ ನಂದೀಶ್, ತಾಯಿ ಶಶಿಕಲಾ ಜೊತೆ ಸೇರಿ ಕಬೋರ್ಡ್ ನಲ್ಲಿ ಶವ ಹೂತಿಟ್ಟಿದ್ದ. ನಂತರ ಶಿವಮೊಗ್ಗ ಜಿಲ್ಲೆಯ ಸಾಗರದತ್ತ ತಾಯಿ-ಮಗ ಪರಾರಿಯಾಗಿದ್ದರು. ಆಗ ಆರೋಪಿಯ ಸ್ನೇಹಿತ ನಂದೀಶ್‍ನನ್ನು ಕೆಂಗೇರಿ ಪೊಲೀಸರ ಬಂಧಿಸಿದ್ದರು. ಗೋಬಿ ಮಂಚೂರಿ ವಿಚಾರಕ್ಕಾಗಿ ವೃದ್ಧೆಯ ಹತ್ಯೆ ನಡೆದಿತ್ತು. ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಜೊತೆ ಶಾಂತಕುಮಾರಿ ವಾಸವಿದ್ದರು.

ಇದನ್ನೂ ಓದಿ: Breaking News: ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

ಕೊಲೆಯಾದ ಶಾಂತಮ್ಮನವರು ಅತಿಯಾದ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದರು. ಅವರ ಮೊಮ್ಮಗ ಸಂಜಯ್ ಏರೋನಾಟಿಕ್ಸ್ ಇಂಜಿನಿಯರಿಂಗ್‍ನಲ್ಲಿ ಪ್ರತಿಭಾವಂತನಾಗಿದ್ದ. ಕಾಲೇಜಿನಿಂದ ಬರುವಾಗ ಅಜ್ಜಿಗೆ ಗೋಬಿ ಮಂಚೂರಿ ತಂದುಕೊಟ್ಟಿದ್ದ. ಈ ವೇಳೆ ಗೋಬಿ ಮಂಚೂರಿ ಬೇಡ ಎಂದು ಮೊಮ್ಮಗನ ಮುಖಕ್ಕೆ ಶಾಂತಮ್ಮ ಎಸೆದಿದ್ದರು. ಇದರಿಂದ ರೊಚ್ಚಿಗೆದ್ದು ಲಟ್ಟಣಿಗೆಯಿಂದ ಅಜ್ಜಿಗೆ ಆತ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಶಾಂತಮ್ಮ ಸಾವನ್ನಪ್ಪಿದ್ದರು. ಮಗನ ಕೃತ್ಯವನ್ನು ಪೊಲೀಸರಿಗೆ ತಿಳಿಸಲು ತಾಯಿ ಶಶಿಕಲಾ ಮುಂದಾಗಿದ್ದರು. ಈ ವೇಳೆ ನಿನ್ನ ಮಗನನ್ನು ನೀನೇ ಜೈಲಿಗೆ ಕಳಿಸ್ತೀಯಾ? ಅಂತಾ ಸಂಜಯ್ ಗೋಗರೆದಿದ್ದ.

ಬಳಿಕ ಈ ಕೊಲೆ ಕೃತ್ಯವನ್ನು ತಾಯಿ-ಮಗ ಸೇರಿ ಮುಚ್ಚಿಹಾಕುವ ತಂತ್ರ ಹೂಡಿದ್ದರು. ಆರೋಪಿಗಳಿಗೆ ಸಂಜಯ್ ಸ್ನೇಹಿತ ನಂದೀಶ್ ಸಾಥ್ ನೀಡಿದ್ದ. ಅದರಂತೆ ಕೆಮಿಕಲ್ ಹಾಕಿ ಕಬೋರ್ಡ್‍ನಲ್ಲಿ ಶವ ಇರಿಸಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದರು. ಸ್ವಲ್ಪ ದಿನಗಳ ಬಳಿಕ ಶವದ ವಾಸನೆ ಬರಲಾರಂಭಿಸಿತ್ತು. ಪುನಃ ಅದಕ್ಕೆ ಬಣ್ಣ ಬಳಿದು ಪ್ಲಾಸ್ಟರಿಂಗ್ ಮಾಡಿದ್ದರು. ಬಳಿಕ ಊರಿಗೆ ಹೋಗಿ ಬರ್ತೀವಿ ಅಂತಾ ಮನೆ ಮಾಲೀಕನಿಗೆ ಹೇಳಿ ತಾಯಿ-ಮಗ ತೆರಳಿದ್ದರು. ಹೀಗೆ ಹೋದವರು 6 ತಿಂಗಳು ಕಳೆದರೂ ವಾಪಾಸ್ ಬಂದಿರಲಿಲ್ಲ. ಮನೆಯ ರಿಪೇರಿ ಕೆಲಸಕ್ಕಾಗಿ ಮಾಲೀಕ ಮನೆಯ ಬೀಗ ತೆರೆದಾಗ ರಕ್ತಸಿಕ್ತ ಸೀರೆ ಪತ್ತೆಯಾಗಿತ್ತು.

ಮೇ 7ರಂದು ವೃದ್ಧೆಯ ಹತ್ಯೆ ವಿಚಾರ ಬೆಳಕಿಗೆ ಬಂದಿತ್ತು. ತಕ್ಷಣವೇ ಪೊಲೀಸರಿಗೆ ಮನೆ ಮಾಲೀಕ ಮಾಹಿತಿ ರವಾನಿಸಿದ್ದ. ಕಬೋರ್ಡ್ ಮುಚ್ಚಿರುವುದನ್ನು ಕಂಡು ತೆರೆದು ನೋಡಿದಾಗ ಶವದ ಕಳೇಬರ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಸಂಜಯ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ನಂದೀಶ್‍ನನ್ನು ಬಂಧಿಸಲಾಗಿತ್ತು. ಬಳಿಕ ಹತ್ಯೆಯ ಸಂಪೂರ್ಣ ವಿಚಾರ ಬಯಲಾಗಿತ್ತು. 5 ವರ್ಷಗಳಿಂದಲೂ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಗಳು ಕೊಲ್ಹಾಪುರದಲ್ಲಿ ವಾಸವಿದ್ದರು.

ಇದನ್ನೂ ಓದಿ: ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? - ಕೇಂದ್ರ ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ

ಸಾಕಷ್ಟು ಪ್ರತಿಭಾವಂತನಾಗಿದ್ದರು ಸಂಜಯ್ ಹೋಟೆಲ್ ಸರ್ವರ್ ಕೆಲಸ ಮಾಡಿಕೊಂಡಿದ್ದ. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಬಿ ಮಂಚೂರಿ ವಿಚಾರಕ್ಕೆ ನಡೆದ ತನ್ನ ಅಜ್ಜಿಯನ್ನು ಹತ್ಯೆ ಮಾಡಿದ್ದ ಸಂಜಯ್ ಮತ್ತು ಆತನ ತಾಯಿ, ಗೆಳೆಯ ನಂದೀಶ್‍ ಈಗ ಜೈಲು ಪಾಲಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News