ಅಪ್ಪ-ಅಮ್ಮನನ್ನು ನೋಡಲು ‘ಅಪ್ಪು’ ಬಹಳ ಬೇಗ ತೆರಳಿದ್ದಾನೆ: ರಾಘವೇಂದ್ರ ರಾಜ್ ಕುಮಾರ್

ಇಂದು ಇಡೀ ದಿನ ಬೆಂಗಳೂರಿನ ಕಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Written by - Puttaraj K Alur | Last Updated : Oct 30, 2021, 08:43 AM IST
  • ನಾನು 2 ಸಲ ಆಸ್ಪತ್ರೆಗೆ ಸೇರಿದಾಗ ಸುರಕ್ಷಿತವಾಗಿ ವಾಪಸ್ ಕರೆತಂದ, ಆದರೆ ನನ್ನಿಂದ ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ
  • ಸ್ವಲ್ಪ ಮಿಸ್ ಆಯ್ತು.. ಫಸ್ಟ್ ನಾನು ಹೋಗ್ಬೇಕಿತ್ತು ಆದ್ರೆ ಅವ್ನು ಹೋಗ್ಬಿಟ್ಟ… ಎಂದ ರಾಘವೇಂದ್ರ ರಾಜ್ ಕುಮಾರ್
  • ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಬೆಂಗಳೂರಿಗೆ ಬರುತ್ತಿರುವ ಪುನೀತ್ ರಾಜ್ ಕುಮಾರ್ ಪುತ್ರಿ ಧೃತಿ
ಅಪ್ಪ-ಅಮ್ಮನನ್ನು ನೋಡಲು ‘ಅಪ್ಪು’ ಬಹಳ ಬೇಗ ತೆರಳಿದ್ದಾನೆ: ರಾಘವೇಂದ್ರ ರಾಜ್ ಕುಮಾರ್  title=
ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ ಮನವಿ

ಬೆಂಗಳೂರು: ಸ್ವಲ್ಪ ಮಿಸ್ ಆಯ್ತು.. ಫಸ್ಟ್ ನಾನು ಹೋಗ್ಬೇಕಿತ್ತು ಆದ್ರೆ ಅವ್ನು ಹೋಗ್ಬಿಟ್ಟ… ಇವು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಮಾತುಗಳು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಇಹಲೋಹ ತ್ಯಜಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿಮಾನಿಗಳ ಬಳಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

‘ನನಗೆ ಅವನೇ ಫೇಸ್ ಮೇಕರ್ ಹಾಕಿಸಿದ್ದ. 2 ಬಾರಿ ಆಸ್ಪತ್ರೆಗೆ ಸೇರಿಸಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ. ‘ಅಪ್ಪು’(Puneeth Rajkumar) ನಿಧನದಿಂದ ಎಲ್ಲರಿಗೂ ತುಂಬಾ ನೋವಾಗಿದೆ. ನಾನು ಎರಡು ಸಲ ಆಸ್ಪತ್ರೆಗೆ ಸೇರಿದಾಗ ಸುರಕ್ಷಿತವಾಗಿ ವಾಪಸ್ ಕರೆತಂದರು. ಆದರೆ ನನ್ನಿಂದ ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪ್ಪ-ಅಮ್ಮನನ್ನು ನೋಡಲು ಬಹಳ ಬೇಗ ತೆರಳಿದ್ದಾನೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: RIP Puneeth Rajkumar: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

‘ನಮಗೆ ಈಗ ಉಳಿದಿರುವುದು ಅವನನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಕಳುಹಿಸಿಕೊಡುವುದು. ಈ ಕಾರ್ಯಕ್ಕೆ ಅಭಿಮಾನಿಗಳೆಲ್ಲ ಸಹಕರಿಸಬೇಕು. ತಂದೆಯವರ ಅಗಲಿಕೆಯ ವೇಳೆ ಆದಂತೆ ಆಗಬಾರದು. ನಮಗೆ ಜನರು ಮುಖ್ಯ. ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಎಲ್ಲರೂ ಸೇರಿ ‘ಅಪ್ಪು’ವನ್ನು ಚೆನ್ನಾಗಿ ಕಳಿಸಿಕೊಡೋಣ. ಯಾರಿಗೂ ತೊಂದರೆಯಾಗಂದಂತೆ ನಮಗೆ ಸಹಕಾರ ನೀಡಿ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು’ ಅಂತಾ ಅಭಿಮಾನಿಗಳ ಬಳಿ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ವಿನಂತಿಸಿಕೊಂಡಿದ್ದಾರೆ.

‘ನೀನು ಇರು ನನ್ನ ಮಕ್ಕಳ ಜೊತೆ, ನಾನು ಅಪ್ಪ-ಅಮ್ಮನ ಬಳಿ ಹೋಗುತ್ತೇನೆ’ ಅಂತಾ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ತೆರಳಿದ್ದಾರೆ. ಕಲಾವಿದರಿಗೆ ಎಂದಿಗೂ ಸಾವಿಲ್ಲ, ಅಪ್ಪು ಎಂದೆಂದಿಗೂ ನಮ್ಮ ಜೊತೆಗಿರುತ್ತಾರೆ. ಅವರ ಸಿನಿಮಾಗಳು, ಸಮಾಜಸೇವಾ ಕಾರ್ಯಗಳು ಅಭಿಮಾನಿಗಳ ಜೊತೆಗಿರುತ್ತವೆ. ಪ್ರತಿಯೊಬ್ಬರೂ ನಮ್ಮ ಕುಟುಂಬದ ಜೊತೆ ಸಹಕರಿಸಬೇಕು. ನಿಮಗೆ ಈಗ ನೀವೇ ಶಕ್ತಿಯಾಗಿ ನಿಲ್ಲಬೇಕು’ ಅಂತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar No More: ‘ಚಂದನವನ’ದಿಂದ ಮರೆಯಾದ 'ದೊಡ್ಮನೆ ಹುಡ್ಗ'   

ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ನಿಧನದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಡಾ.ರಾಜ್ ಅವರ ಐವರು ಮಕ್ಕಳಲ್ಲಿ ‘ಅಪ್ಪು’ ಕಿರಿಯರು. ಹೀಗಾಗಿ ಎಲ್ಲರಿಗೂ ಅವರೆಂದರೆ ಅಚ್ಚುಮೆಚ್ಚು. ಇಂತಹ ಮನೆಮಗನನ್ನು ಕಳೆದುಕೊಂಡು ಎಲ್ಲರೂ ಕಣ್ಣೀರಾಗಿದ್ದಾರೆ. ಇದರ ನಡುವೆಯೇ ಮುಂದಿನ ಕಾರ್ಯದತ್ತ ಗಮನಹರಿಸಿದ್ದಾರೆ. ಸದ್ಯ ವಿದೇಶಕ್ಕೆ ತೆರಳಿದ್ದ ಪುನೀತ್ ಅವರ ಪುತ್ರಿ ಧೃತಿ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಇಡೀ ದಿನ ಬೆಂಗಳೂರಿನ ಕಠೀರವ ಸ್ಟೇಡಿಯಂ(Kanteerava Stadium)ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದು, ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಿದ್ದಾರೆ. ನಾಳೆ(ಅ.31) ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ರಾಜ್ ಕುಮಾರ್ ಸಮಾಧಿ ಪಕ್ಕವೇ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News