Sudeep: "ಸತ್ಯ ತಿಳಿಸಲು ಸಮಯ ಬೇಕಿದೆ, ಕೋರ್ಟ್‌ಗೆ ಬನ್ನಿ": ಕಿಚ್ಚನ ಖಡಕ್‌ ಉತ್ತರ! ಸುದೀಪ್‌ ಸುದೀರ್ಘ ಪತ್ರದಲ್ಲಿ ಏನಿದೆ?

Sudeep Letter To Karnataka Film Chamber: ಪ್ರೊಡ್ಯೂಸರ್‌ಗಳ ಆರೋಪಗಳ ಬೆನ್ನಲ್ಲೇ ಸುದೀಪ್‌ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. ಸತ್ಯ ತಿಳಿಸಲು ಸಮಯ ಬೇಕಿದೆ ಎಂದಿದ್ದಾರೆ.   

Written by - Chetana Devarmani | Last Updated : Jul 10, 2023, 05:00 PM IST
  • ಪ್ರೊಡ್ಯೂಸರ್‌ಗಳ ಆರೋಪಗಳ ಬೆನ್ನಲ್ಲೇ ಖಡಕ್‌ ಉತ್ತರ
  • "ಸತ್ಯ ತಿಳಿಸಲು ಸಮಯ ಬೇಕಿದೆ, ಕೋರ್ಟ್‌ಗೆ ಬನ್ನಿ"
  • ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೆ ಪತ್ರ
Sudeep: "ಸತ್ಯ ತಿಳಿಸಲು ಸಮಯ ಬೇಕಿದೆ, ಕೋರ್ಟ್‌ಗೆ ಬನ್ನಿ": ಕಿಚ್ಚನ ಖಡಕ್‌ ಉತ್ತರ! ಸುದೀಪ್‌ ಸುದೀರ್ಘ ಪತ್ರದಲ್ಲಿ ಏನಿದೆ?   title=
Sudeep

ಬೆಂಗಳೂರು: ಸುದೀಪ್‌ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಕಿಚ್ಚ ಸುದೀಪ್ ವಿರುದ್ಧ ಸ್ವಾಂಡಲ್‌ವುಡ್‌ ನಿರ್ಮಾಪಕರಾದ ಎಮ್. ಎನ್ ಕುಮಾರ್ ಕೆಲ ದಿನಗಳ ಹಿಂದೆ ಅಡ್ವಾನ್ಸ್‌ ಪಡೆದು ಸಿನಿಮಾ ಮಾಡಿಲ್ಲ ಎಂಬ ಆರೋಪ ಮಡಿದ್ದರು. ಇದೀಗ ಮತ್ತೊಬ್ಬ ನಿರ್ಮಾಪಕ ರೆಹಮಾನ್‌ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಪ್ರೊಡ್ಯೂಸರ್‌ಗಳ ಆರೋಪಗಳ ಬೆನ್ನಲ್ಲೇ ಸುದೀಪ್‌ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. 

ಸುದೀಪ್‌ ಸುದೀರ್ಘ ಪತ್ರದಲ್ಲಿ ಏನಿದೆ? 

ಎಲ್ಲರಿಗೂ ನಮಸ್ಕಾರ ಕನ್ನಡ ಚಿತ್ರರಂಗ ಮಹಾನ್‌ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ. ಅಂತಹ ಮಹಾನ್‌ ಸಾಧಕರೆದುರು ನಾನು ತುಂಬಾ ಕಿರಿಯವ ಈ ಕಳೆದ 27 ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕ, ಇತ್ಯಾದಿ ಇತ್ಯಾದಿ ಆಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಆ 27 ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆಯ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದಿದ್ದಾರೆ. 

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ. ಅದನ್ನು ಸ್ಪಂದಿಸಬೇಕಾದುದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ ಕಾರಣವೂ ನನಗೆ ತಿಳಿಯುತ್ತಿಲ್ಲ ಎಂದು ಬರೆದಿದ್ದಾರೆ. 

ಅಲ್ಲದೆ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ - ಎನ್ ಎಂ ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ. ಇದೆಲ್ಲವನ್ನೂ ತಮಗೆ ವಿವರಿಸಿದ್ದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಸುದ್ದಿಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿ ಕೊಂಡಿತು ಎಂದಿದ್ದಾರೆ. 

ಇದನ್ನೂ ಓದಿ: Sudeep: ಸುದೀಪ್‌ ನಂಬಿ ಲಕ್ಷ ಲಕ್ಷ ಕಳೆದುಕೊಂಡೆ, ನ್ಯಾಯ ಕೊಡಿಸಿ: ಹುಚ್ಚ ಸಿನಿಮಾ ಪ್ರೊಡ್ಯೂಸರ್‌ ಆರೋಪ!

27 ವರ್ಷಗಳ ಕಾಲ ನಾನು ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯ, ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈ ವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನ ಹೊರತು ಕೆಟ್ಟತನಕ್ಕಲ್ಲ ಎಂದು ಬರೆದಿದ್ದಾರೆ. 

ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ, ನಾನವರಿಗೆ ಋಣಿ ಆಗಿದ್ದೇನೆ. ಕೆಲವರು, ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆಯಿಂದಲೆ. ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದ್ದ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತಿದ್ದೇನೆ ಎಂದಿದ್ದಾರೆ.

ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆಗಳು ದಕ್ಕಬಾರದು ಎಂದು. ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ, ಸುಳ್ಳು, ಉದಾಹರಣೆಗೆ ನಾನು ಸಿಲುಕ ಬಾರದು. ಈ ಕಾರಣಕ್ಕೆ, ಬೇರೆಲ್ಲರ ವಿಷಯದಲ್ಲಿ ಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ಧನಾಗಿದ್ದೇನೆ  ಎಂದು ಬರೆದಿದ್ದಾರೆ. 

ಒಂದು ಮಾತು ನಿಮ್ಮ ಸುದ್ದಿಗೋಷ್ಠಿಯಲ್ಲಿ ಹೊರಬಂತು. ಅದು ನನಗೆ ತೀವು ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು, ಶ್ರೀಯುತ ಸುರೇಶ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವ ಸಲಿಗೆ ಉಳ್ಳವರು. ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು ನೋವಾಗಿದೆ. ಇದು ನನಗೇ ಮಾತ್ರವಲ್ಲ, ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ, ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕೆಟ್ಟ ಬೆಳವಣಿಗೆ ಆರಂಭವಾಯಿತು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್‌ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರ 

ದೈಹಿಕವಾಗಿ, ಮಾನಸಿಕವಾಗಿ ಕುಮಾರ್ ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು. ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವ್ರ ನೋವು ತಂದಿದೆ. ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ ಆಗಲಾರೆ. ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ, ಸುರೇಶ ಅವರನ್ನು ಭಾಗಿ ಮಾಡಿದೆ. ಅವರಿಗೂ ನೋಟೀಸ್ ಕಳಸಿದೆ ವಿನಃ ಕೋಪ ತಾಪ ಆಕ್ರೋಶದಿಂದಲ್ಲ. ಸುರೇಶ್‌ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನನ್ನ ತನಕ ಅಪರಿಚಿತರೋ, ಪರಿಚಿತರೋ, ಸಿನಿಮಾ ರಂಗದವರೆ ಅಲ್ಲವೇ, ಸಹಕಲಾವಿದರೋ, ತಂತ್ರಜ್ಞರೋ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಷ್ಟೂ ಸಹಾಯ ಮಾಡಿದ್ದೇವೆ. ಯಾರನ್ನೇ ಆಗಲಿ ಜೀವನ ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು ಯಾರ ಜೀವ ಹೋಗಲೂ ನಾನು ಸಾಕ್ಷಿಯಾಗಲಾರೆ ಎಂದಿದ್ದಾರೆ. 

ಎಲ್ಲ ನಿರ್ಮಾಪಕರ ಬಗ್ಗೆ ಗೌರವವಿಲ್ಲದೆ ನಂಬಿಕೆ ಇಲ್ಲದೆ ಈವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ.ನನಗೂ ದುಃಖ ದುಮ್ಮಾನಗಳಿವೆ. ನಮ್ಮಲ್ಲಿ ಯಾರಿಗೆ ತೊಂದರೆಯಾದರೂ ಮಂಡಳಿಯ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೊಣೆಗಾರ ಎನ್ನಲಾದೀತೆ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ? ಎಂದು ಕೇಳಿದ್ದಾರೆ.

ಇನ್ನೂ ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ನಮಗೆ ವಯಕ್ತಿಕವಾಗಿ ನೀಡುತ್ತೇನೆ. ನಾನು ತುಂಬಾ ಆಸ್ತಿವಂತ ಅಲ್ಲದೆ ಇರಬಹುದು. ಆದರ ಸಂಪಾದಿಸಿದ ಆಸ್ತಿಯಲ್ಲಿ ನನ್ನ ಶ್ರಮವಿದೆ. ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ಶಕ್ತಿಯ ಮೇರೆಗೆ, ಈ ಕಠಿಣ ನಿಲುವು ಹೊಂದಿದ್ದೇನೆ ಎಂದಿದ್ದಾರೆ. 

ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ, ಯಾರ ನಿಮ್ಮಲ್ಲಿ ದೂರು ತಂದರೂ, ಆ ದೂರಿನ ಕುರಿತಾದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದುವರೆಯಿರಿ. ದಯಮಾಡಿ ನೀವು ಸಂದಿಗ್ದತೆಗೆ ಒಳಗಾಗದೇ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲಿ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲೆ ಶಿರಬಾಗಿ ಒಪ್ಪಿಕೂಂಡು ದಂಡ ಕಟ್ಟುತ್ತೇನೆ, . ನು ಸರಿ ಇದ್ದೇನೆ. ನಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೂಡಿ ಎಂದು ಸುದೀಪ್‌ ಸುದೀರ್ಘ ಪತ್ರ ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News