ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕ್ಲರ್ಕ್ ರೀತಿ ನಡೆಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಕರ್ನಾಟಕದಲ್ಲಿ ಮಹಾಮೈತ್ರಿಯ ಮೊದಲ ಸರ್ಕಾರ ರಚನೆಯಾಗಿದೆ. ಅಲ್ಲಿ ಜೆಡಿಎಸ್ ನಾಯಕ ಮುಖ್ಯಮಂತ್ರಿಯವರನ್ನು ಕಾಂಗ್ರೆಸ್ ಗುಮಾಸ್ತನಂತೆ ನಡೆಸಿಕೊಳ್ಳುತ್ತಿದೆ. ಅವರು(ಹೆಚ್.ಡಿ.ಕುಮಾರಸ್ವಾಮಿ) ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಕೆಲವೇ ತಿಂಗಳಲ್ಲಿ ಅವರಿಗೆ ಕಾಂಗ್ರೆಸ್'ನಿಂದ ನಷ್ಟವಾಗುತ್ತಿದೆ. ದೇಶದ ಇತಿಹಾಸದಲ್ಲಿ ವಿಫಲವಾಗಿರುವ ಆಂದೋಲನವನ್ನು 'ಮಹಾಘಟಬಂಧನ್' ಹೆಸರಿನಲ್ಲಿ ಮತ್ತೆ ಚಾಲ್ತಿಗೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮೋದಿ ಟೀಕಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ನಿಯಮಗಳನ್ನು ಮೀರಿ ಎರಡು ರೀತಿಯ ಸಾಲ ನೀಡಲಾಗುತ್ತಿತ್ತು. ಒಂದು ಸಾಮಾನ್ಯ ಪ್ರಕ್ರಿಯೆ ಮತ್ತೊಂದು ಕಾಂಗ್ರೆಸ್ ಪ್ರಕ್ರಿಯೆ. ಸಾಮಾನ್ಯ ಲೋನ್ ಪ್ರಕ್ರಿಯೆಯಡಿಯಲ್ಲಿ ಮನೆ, ಶಿಕ್ಷಣಕ್ಕಾಗಿ ಸಾಲ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಲೋನ್ ಪ್ರಕ್ರಿಯೆಯಡಿಯಲ್ಲಿ ಕಾಂಗ್ರೆಸ್ ಗೆ ಬೇಕಾದವರಿಗೆ ಒಂದು ಫೋನ್ ಕಾಲ್ ನಲ್ಲಿ ಪ್ರಕ್ರಿಯೆ ಮುಗಿಯುತ್ತಿತ್ತು. ಸಾಮಾನ್ಯ ಲೋನ್ ಪ್ರಕ್ರಿಯೆಯಡಿಯಲ್ಲಿ ಗ್ಯಾರೆಂಟಿ ಕೇಳಲಾಗುತ್ತಿತ್ತು, ಆದರೆ ಕಾಂಗ್ರೆಸ್ ಪ್ರಕ್ರಿಯೆಯಲ್ಲಿ ಏನೂ ಗ್ಯಾರೆಂಟಿ ಕೇಳಲಾಗುತ್ತಿರಲಿಲ್ಲ. ಕೊಟ್ಟ ಹಣವನ್ನು ಕೊಳ್ಳೆಹೊಡೆಯಬಹುದಾಗಿತ್ತು. ಆದರೀಗ ಚೌಕಿದಾರ ಇಂತಹ ಯಾವ ಚೋರರನ್ನೂ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದರು.