ಕಾಂಗ್ರೆಸ್ ಪಂಚ ಗ್ಯಾರಂಟಿ: ರಸ್ತೆಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಡಲ್ಲ- ಡಿಸಿಎಂ ಡಿಕೆಶಿ

Congress Five Guarantees: ಉಚಿತ ಯೋಜನೆಗಳನ್ನು ಯಾರಿಗೆ ಕೊಡಬೇಕು, ಫಲಾನುಭವಿಗಳ ಹೆಸರಲ್ಲಿ ಖಾತೆ ಇರಬೇಕು, ಅದಕ್ಕೆ ಲೆಕ್ಕ ಬೇಕು. ಅಕೌಂಟೆಬಿಲಿಟಿ ಇರಬೇಕು. ಬಳಿಕ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

Written by - Prashobh Devanahalli | Edited by - Puttaraj K Alur | Last Updated : May 20, 2023, 06:30 PM IST
  • ಉಚಿತ ಗ್ಯಾರಂಟಿಗಳ ರೂಪುರೇಷೆಯನ್ನು ಚರ್ಚಿಸಿ ಜಾರಿ ಮಾಡಲಿದ್ದೇವೆಂದ ಸಿಎಂ ಸಿದ್ದರಾಮಯ್ಯ
  • ರಸ್ತೆಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿಗಳನ್ನು ಕೊಡಲಾಗುವುದಿಲ್ಲ
  • ಯಾರಿಗೆ ಕೊಡಬೇಕು ಅನ್ನೋದರ ಬಗ್ಗೆ ಆದೇಶ ಹೊರಡಿಸುತ್ತೇವೆಂದ ಡಿಕೆಶಿ
ಕಾಂಗ್ರೆಸ್ ಪಂಚ ಗ್ಯಾರಂಟಿ: ರಸ್ತೆಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಡಲ್ಲ- ಡಿಸಿಎಂ ಡಿಕೆಶಿ title=
ಕಾಂಗ್ರೆಸ್ ಪಂಚ ಗ್ಯಾರಂಟಿ!

ಬೆಂಗಳೂರು: ಸಿಎಂ ಪದಗ್ರಹಣ ಕಾರ್ಯಕ್ರಮ ನಂತರ ವಿಧಾನಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ ಐದೂ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ ಉಚಿತ ಗ್ಯಾರಂಟಿಗಳ ರೂಪುರೇಷೆಯನ್ನು ಚರ್ಚಿಸಿ ಜಾರಿ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದೇ ಗ್ಯಾರೆಂಟಿ ಅನುಷ್ಠಾನ ಆಗಲಿದೆ ಎಂಬ ನಿರೀಕ್ಷೆ ಇನ್ನು ಮುಂದುವರೆದಿದೆ. ಸಂಪುಟ ಸಭೆಯಲ್ಲಿ ತಮ್ಮ ಆಶ್ವಾಸನೆಯಂತೆ 5 ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ.  ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅನ್ನಭಾಗ್ಯ ಯೋಜನೆಯ ಒಟ್ಟು 5 ಗ್ಯಾರಂಟಿಗಳಿಗೆ ತಾತ್ವಿಕ ಸಮ್ಮತಿ ನೀಡಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: ಎಲ್ಲಾ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ..! ಆದರೆ..

ಹಣಕಾಸು ವೆಚ್ಚ ಮುಂದಿನ ಕ್ಯಾಬಿನೆಟ್‍ನಲ್ಲಿ ತೀರ್ಮಾನ  

5 ಗ್ಯಾರಂಟಿಗಳ ಖರ್ಚು-ವೆಚ್ಚ, ಸ್ಪಷ್ಟ‌ ಲೆಕ್ಕಾಚಾರ, ರೂಪುರೇಷೆಯನ್ನು ವರ್ಕೌಟ್ ಮಾಡಿದ ಬಳಿಕ ಆದೇಶ ಹೊರಡಿಸಲಾಗುವುದು. ಐದೂ ಗ್ಯಾರಂಟಿಗಳಿಗೆ ಅಂದಾಜು ಸುಮಾರು 50 ಸಾವಿರ ಕೋಟಿ ರೂ. ಆಗುವ ಸಾಧ್ಯತೆ ಇದೆ. ಗೃಹ ಜ್ಯೋತಿ ಯೋಜನೆಗಾಗಿ 1 ತಿಂಗಳಿಗೆ ಅಂದಾಜು 1,200 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುತ್ತೇವೆ. ಖರ್ಚು-ವೆಚ್ಚದ ಬಗ್ಗೆ ನಾವು ಚರ್ಚೆ ಮಾಡಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ‌ ಮಾಡುತ್ತೇವೆ. ಕೇವಲ 2 ವರ್ಷದವರೆಗೆ ನಿರುದ್ಯೋಗಿಗಳಿಗೆ ಪದವಿಧರಿಗೆ 3,000 ರೂ. ಕೊಡುತ್ತೇವೆ. ಡಿಪ್ಲೊಮಾ ಪಾಸ್ ಆದವರಿಗೆ 1,500 ರೂ. ಕೊಡಲಿದ್ದೇವೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪಾಸ್ ನೀಡಲಿದ್ದೇವೆ. ಸಾರಿಗೆ ಬಸ್ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇದರ ರೂಪುರೇಷೆ ಚರ್ಚಿಸಿ ಆಮೇಲೆ ಜಾರಿ ಮಾಡುತ್ತೇವೆ. ಇಂದು ತಾಂತ್ರಿಕವಾಗಿ ಎಲ್ಲದಕ್ಕೂ ಒಪ್ಪಿಗೆ ನೀಡಿದ್ದೇವೆ. ಆದೇಶದಲ್ಲಿ ಎಲ್ಲವನ್ನೂ ಸವಿವರವಾಗಿ ಚರ್ಚಿಸಿ ಆದೇಶ ಹೊರಡಿಸುತ್ತೇವೆ. ರೂಪುರೇಷೆಯನ್ನು ಸಮಾಲೋಚಿಸಿ ಆದೇಶ ಹೊರಡಿಸುತ್ತೇವೆ. ಮುಂದಿನ ಕ್ಯಾಬಿನೆಟ್‍ನಲ್ಲಿ ಐದೂ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: "ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ"

ರಸ್ತೆಯಲ್ಲಿ ಹೋಗುವವರಿಗೆಲ್ಲಾ ಕೊಡಲಾಗುವುದಿಲ್ಲ: ಡಿಕೆಶಿ   

ರಸ್ತೆಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿಗಳನ್ನು ಕೊಡಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಉಚಿತಗಳನ್ನು ಯಾರಿಗೆ ಕೊಡಬೇಕು, ಫಲಾನುಭವಿಗಳ ಹೆಸರಲ್ಲಿ ಖಾತೆ ಇರಬೇಕು, ಅದಕ್ಕೆ ಲೆಕ್ಕ ಬೇಕು. ಅಕೌಂಟೆಬಿಲಿಟಿ ಇರಬೇಕು. ಬಳಿಕ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

ಸಾಲದ ಸುಳಿಗೆ ಸಿಲುಕಿಸದೆ ಗ್ಯಾರಂಟಿ ಜಾರಿ: ಸಿಎಂ ಭರವಸೆ

ನಾನು ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸದೆ, ರಾಜ್ಯವನ್ನು ದಿವಾಳಿ ಮಾಡದೇ ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆಂದು ಇದೇ ವೇಳೆ ತಿಳಿಸಿದರು. 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಿದ್ದೇನೆ. ಅನಗತ್ಯ ವೆಚ್ಚ ಕಡಿತ, ಆದಾಯ ಸಂಗ್ರಹ ಹೆಚ್ಚಿಗೆ ಮಾಡಿ ಸುಮಾರು 50 ಸಾವಿರ ಕೋಟಿ ರೂ. ಕ್ರೋಢೀಕರಿಸಲಿದ್ದೇವೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News