ಚಿತ್ರಗಳಿಗೆ ಕಲಾಕುಂಚದಲ್ಲಿ ಜೀವಕಳೆ ತುಂಬುವ ಅಪೂರ್ವ ʼಚೇತನʼ

ಒಂದೊಮ್ಮೆ ಈತನ ಕೈಯಲ್ಲಿ ಅರಳಿದ ಚಿತ್ರವನ್ನು ನೋಡಿದರೆ ನೈಜತೆಯ ಸ್ಪಷ್ಟಗೋಚರವಾದಂತೆ ಭಾಸವಾಗುತ್ತದೆ. ಇವರ ಹೆಸರು ಚೇತನ್‌. ಹೆಸರಿಗೆ ತಕ್ಕಂತೆ ಚೇತನವೆನಿಸುವ ಚಿತ್ರಗಳನ್ನು ಬಿಡಿಸುವ ಈತ ಪ್ರಸ್ತುತ ಮಂಗಳೂರಿನ ಚಿತ್ರಕಲಾ ವಿದ್ಯಾಲಯ ಮಹಾಲಸದಲ್ಲಿ ಚಿತ್ರಕಲಾ ಶಿಕ್ಷಣವನ್ನು ಪಡೆಯುತ್ತಿದ್ದಾರೆ.   

Written by - Bhavishya Shetty | Last Updated : May 3, 2022, 02:26 PM IST
  • ಚಿತ್ರಕಲೆಯಲ್ಲಿ ಸಾಧನೆ ಮಾಡುವ ಚೇತನ್‌
  • ಅನೇಕ ಪ್ರಶಸ್ತಿಗೆ ಭಾಜನರಾದ ಯುವ ಕಲಾವಿದ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.ರವಿವರ್ಮಾ ಎಂದೇ ಖ್ಯಾತಿ
ಚಿತ್ರಗಳಿಗೆ ಕಲಾಕುಂಚದಲ್ಲಿ ಜೀವಕಳೆ ತುಂಬುವ ಅಪೂರ್ವ ʼಚೇತನʼ title=
Mangalore Artist

"ಕಲಾಶಾರದೆ ಒಲಿಸಬೇಕಾದರೆ ತಪ್ಪಸ್ಸು ಮಾಡಬೇಕು" ಎಂಬ ಮಾತಿದೆ. ಕಲೆಯ ಆರಾಧನೆ ಮಾಡುತ್ತಾ ಕುಂಚವನ್ನೇ ಸರ್ವಸ್ವ ಎಂದು ಸ್ವೀಕರಿಸುವವರಿಗೆ ಒಲಿಯುವ ಅಪೂರ್ವ ಅಂಶವದು. ಇಲ್ಲೊಬ್ಬ ಯುವಕ ಕೈಯಲ್ಲಿ ಕುಂಚ ಹಿಡಿದರೆ ಎಂಥವರನ್ನೂ ಮನಸೆಳೆಯುವಂತಹ ಚಿತ್ರವನ್ನು ಬಿಡಿಸುತ್ತಾರೆ. ಇದು ಈತನ ಕಲಾ ಚಾತುರ್ಯತೆಗೆ ಹಿಡಿದ ಕೈಗನ್ನಡಿ ಎನ್ನಬಹುದು. 

ಇದನ್ನು ಓದಿ: 109 ವರ್ಷಗಳ ಹಿಂದೆ ತಯಾರಾದ ಬಾಲಿವುಡ್ ಮೊದಲ ಚಲನಚಿತ್ರದ ಬಜೆಟ್ ಎಷ್ಟಿತ್ತು ಗೊತ್ತಾ?

ಒಂದೊಮ್ಮೆ ಈತನ ಕೈಯಲ್ಲಿ ಅರಳಿದ ಚಿತ್ರವನ್ನು ನೋಡಿದರೆ ನೈಜತೆಯ ಸ್ಪಷ್ಟಗೋಚರವಾದಂತೆ ಭಾಸವಾಗುತ್ತದೆ. ಇವರ ಹೆಸರು ಚೇತನ್‌. ಹೆಸರಿಗೆ ತಕ್ಕಂತೆ ಚೇತನವೆನಿಸುವ ಚಿತ್ರಗಳನ್ನು ಬಿಡಿಸುವ ಈತ ಪ್ರಸ್ತುತ ಮಂಗಳೂರಿನ ಚಿತ್ರಕಲಾ ವಿದ್ಯಾಲಯ ಮಹಾಲಸದಲ್ಲಿ ಚಿತ್ರಕಲಾ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಶ್ರೀನಿವಾಸ ಆಚಾರ್ಯ ಮತ್ತು ಶಾರದಾ ದಂಪತಿಯ ಪುತ್ರ. ಇವರ ಈ ಕಲಾ ಸಾಧನೆಗೆ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್‌ ನಾಯಕ್‌ ಸ್ಪೂರ್ತಿಯಾಗಿದ್ದಾರೆ. 

ಶಾಲಾ ಹಂತದಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಚೇತನ್‌ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 2016ರ ಚುನಾವಣೆಯ ಕುರಿತು ನಡೆದ ಸ್ಪರ್ಧೆ ಮತ್ತು ಅದೇ ವರ್ಷ ನಡೆದ ಸಾಕ್ಷ್ಯ ಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರು. ಇನ್ನು ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನಿಂದ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ. 

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಚೇತನ್‌ ಅವರು 10 ಸಾವಿರ ರೂ. ನಗದು ಬಹುಮಾನವನ್ನು ಪಡೆದಿದ್ದಾರೆ. ಜೊತೆಗೆ ಅನೇಕ ಸನ್ಮಾನ ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಯ್ಯೂರು ಎಂಬಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚೇತನ್‌ ಅವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. 

 

 

ಪುಟ್ಟ ವಯಸ್ಸಿಗೆ ಸಾಧನೆ ತೋರಿದ ಈ ಯುವಕನಿಗೆ ಇವರ ಕುಟುಂಬ ಸದಾ ಪ್ರೋತ್ಸಾಹ ನೀಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಈತನ ಪ್ರತಿಭೆಯನ್ನು ಗುರುತಿಸಿದ್ದು ಇವರ ಮಾವ ರಾಮಚಂದ್ರ ಆಚಾರ್ಯ ಅವರು. ಆ ಬಳಿಕ ಅನೇಕರ ಸಹಕಾರ, ಬೆಂಬಲದಿಂದ ಚೇತನ್‌ ಈ ಸಾಧನೆ ಮಾಡಿದ್ದಾರೆ. 

ನಟ ದಿ.ಪುನೀತ್‌ ರಾಜ್‌ ಕುಮಾರ್‌, ರಾಕಿಂಗ್‌ ಸ್ಟಾರ್‌ ಯಶ್‌, ಕಿಚ್ಚ ಸುದೀಪ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ ದಕ್ಷಿಣ ಕನ್ನಡದ ವೈಭವ ಬಿಂಬಿಸುವ ಕಲಾ ಪ್ರಕಾರಗಳ ಚಿತ್ರವನ್ನು ಬಿಡಿಸಿದ್ದಾರೆ. ಇನ್ನು ಹಲವಾರು ಚಿತ್ರಗಳು ಇವರ ಕಲಾ ಕುಂಚದಲ್ಲಿ ಅರಳಿದ್ದು, ಅವುಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆ chethu_art_galleryಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

ಇದನ್ನು ಓದಿ: Rashmika Mandanna: ರಶ್ಮಿಕಾ ಮಂದಣ್ಣ ಇಷ್ಟೊಂದು ಫಿಟ್‌ ಆಗಿರಲು ಕಾರಣ ಇದೇ...

ಇತ್ತೀಚೆಗೆ ಕೆಜಿಎಫ್‌-2 ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿದ್ದು, ಈ ಚಿತ್ರದಲ್ಲಿ ಯಶ್‌ ಅಭಿನಯ ಎಲ್ಲರ ಮನಗೆದ್ದಿತ್ತು. ಇನ್ನು ಚೇತನ್‌ ರಾಖಿಭಾಯ್‌ ಪೋಸ್ಟರ್‌ನ ಚಿತ್ರ ಬಿಡಿಸಿದ್ದು, ಎಲ್ಲರ ಮನಗೆದ್ದಿದೆ. ಜೂನಿಯರ್‌ ರವಿವರ್ಮಾ ಎಂದೇ ಖ್ಯಾತಿ ಪಡೆಯುತ್ತಿರುವ ಚೇತನ್‌ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

    

Trending News