51 ಕೋಟಿ ತೆರಿಗೆ ಬಾಕಿ: ಬೆಂಗಳೂರಿನ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ ಮತ್ತೆ ಬೀಗ!

ಮಂತ್ರಿ ಮಾಲ್ 2019-20ರವರೆಗಿನ ತೆರಿಗೆ ಬಾಕಿ ಉಳಿಸಿಕೊಂಡಿತ್ತು. 2020ರ ಆಗಸ್ಟ್ನಲ್ಲಿ ಮಾಲ್‌ನ ಆಡಳಿತ ಮಂಡಳಿಯು ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿದ್ದು, ಮತ್ತೆ ನೋಟಿಸ್ ನೀಡಿದ್ದರೂ ಸಹ ಮಾಲ್‍ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ವಿಫಲವಾಗಿತ್ತು.

Written by - Bhavya Sunil Bangera | Edited by - Puttaraj K Alur | Last Updated : Dec 28, 2023, 01:45 PM IST
  • ಬೆಂಗಳೂರಿನ ಮಂತ್ರಿ ಮಾಲ್‍ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ ಅಧಿಕಾರಿಗಳು
  • 53 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಸ್ಕ್ವೇರ್ ಮಾಲ್‍
  • ಮಾಲ್‍ನ ಪ್ರಮುಖ ದ್ವಾರಕ್ಕೆ ಬೀಗ ಹಾಕಿಸಿದ ಬಿಬಿಎಂಪಿ ಜಂಟಿ ಆಯುಕ್ತರು
51 ಕೋಟಿ ತೆರಿಗೆ ಬಾಕಿ: ಬೆಂಗಳೂರಿನ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ ಮತ್ತೆ ಬೀಗ!   title=
ಮಂತ್ರಿ ಮಾಲ್‍ಗೆ ಮತ್ತೆ ಬೀಗ!

ಬೆಂಗಳೂರು: ಕೋಟಿ ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಮಲ್ಲೇಶ್ವರದ ಪ್ರತಿಷ್ಠಿತ ಮಂತ್ರಿ ಮಾಲ್‍ಗೆ ಬುಧವಾರ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಸುಮಾರು 53 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಂತ್ರಿ ಸ್ಕ್ವೇರ್ ಮಾಲ್‍ನ ಪ್ರಮುಖ ದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್‌ ಬೀಗ ಹಾಕಿಸಿದ್ದಾರೆ.

2019-20ರವರೆಗಿನ ತೆರಿಗೆಯನ್ನು ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿತ್ತು. 2020ರ ಆಗಸ್ಟ್‍ನಲ್ಲಿ ಮಾಲ್‌ನ ಆಡಳಿತ ಮಂಡಳಿಯು ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿದ್ದು, ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಸಹ ಮಾಲ್‍ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ವಿಫಲವಾಗಿತ್ತು.

ಇದನ್ನೂ ಓದಿ: ಬಿಜೆಪಿ ನುಂಗಿ ನೀರು ಕುಡಿದ 40 ಸಾವಿರ ಕೋಟಿಯಲ್ಲಿ 4 ಗ್ಯಾರಂಟಿ ಯೋಜನೆ ಪೂರೈಸಬಹುದಿತ್ತು: ಕಾಂಗ್ರೆಸ್

ಈ ಹಿಂದೆ ಕೂಡ ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್‍ಗೆ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 3-4 ಬಾರಿ ಬೀಗ ಹಾಕಲಾಗಿತ್ತು. 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್‍ಗೆ ಬೀಗ ಹಾಕಿದ್ದರು. ಬಳಿಕ ಮಂತ್ರಿ ಮಾಲ್ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು.

ಮಂತ್ರಿ ಮಾಲ್ ಹಾಗೂ ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿದೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಸಿದೆ ಎಂದು ಹೈಕೋರ್ಟ್ ಹೇಳಿತ್ತು. ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ 2021ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಕನ್ನಡವನ್ನು ಕಡೆಗಣಿಸಿದ್ದ ಪರಭಾಷಿಕರ ಮೊಂಡುತನಕ್ಕೆ ಪಾಠ

ಬಿಬಿಎಂಪಿ ಅಧಿಕಾರಿಗಳು ಈ ಕುರಿತು ಮಾತನಾಡಿ, 3 ವಾರಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಮಂತ್ರಿ ಮಾಲ್ ಆಡಳಿತ ವರ್ಗದವರಿಂದ ಯಾವುದೇ ರೀತಿಯ  ಪ್ರತಿಕ್ರಿಯೆ ನೀಡಿರಲಿಲ್ಲ. ಸುಮಾರು 53 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ವಸೂಲಿಗೆ ನೋಟಿಸ್ ನೀಡಿದ್ದರೂ ಸಹ ಪಾವತಿ ಮಾಡದ ಹಿನ್ನಲೆ ಕಾನೂನು ತಜ್ಞರ ಸಲಹೆ ಮೇರೆಗೆ ಮಂತ್ರಿ ಮಾಲ್‌ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾಲ್‍ನ ಆಡಳಿತ ಮಂಡಳಿಯವರು ನಮಗೆ ಯಾವುದೇ ನೋಟಿಸ್ ನೀಡದೆ ಮಾಲ್‍ಗೆ ಬೀಗ ಹಾಕಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಮಾಲ್‍ನಲ್ಲಿ ಶಾಪಿಂಗ್‍ಗಾಗಿ ಬಂದಿದ್ದ ನೂರಾರು ಜನ ಸಾರ್ವಜನಿಕರು ಮಾಲ್‍ನ ಒಳಗೆ ಹೋಗಲಾರದೆ ಹೊರಗಡೆಯೆ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News