'ಬಿಜೆಪಿಯವರು ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎನ್ನುತ್ತಿದ್ದಾರೆ.ಮನೆಗಳೇ ಇಲ್ಲದವರು ಎಲ್ಲಿಂದ ಧ್ವಜ ಹಾರಿಸಬೇಕು?'

ಜನರನ್ನು ನರಕಕ್ಕೆ ತಳ್ಳುವುದು ರಾಷ್ಟ್ರ ದ್ರೋಹವಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆ ಇಲ್ಲದಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

Last Updated : Aug 11, 2022, 08:58 PM IST
  • ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ಮನೆ ನಿರ್ಮಾಣದ ಆದೇಶಗಳನ್ನು ರದ್ದು ಮಾಡಿದರು.
  • ಆದರೆ ಈಗ ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎಂದು ಹೇಳತೊಡಗಿದ್ದಾರೆ.
  • ಮನೆಗಳೇ ಇಲ್ಲದ ಜನರು ಎಲ್ಲಿಂದ ಧ್ವಜ ಹಾರಿಸಬೇಕು?
'ಬಿಜೆಪಿಯವರು ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎನ್ನುತ್ತಿದ್ದಾರೆ.ಮನೆಗಳೇ ಇಲ್ಲದವರು ಎಲ್ಲಿಂದ ಧ್ವಜ ಹಾರಿಸಬೇಕು?' title=

ಬೆಂಗಳೂರು: ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಒಂದು ಮನೆಯನ್ನೂ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ಮನೆ ನಿರ್ಮಾಣದ ಆದೇಶಗಳನ್ನು ರದ್ದು ಮಾಡಿದರು. ಆದರೆ ಈಗ ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎಂದು ಹೇಳತೊಡಗಿದ್ದಾರೆ.ಮನೆಗಳೇ ಇಲ್ಲದ ಜನರು ಎಲ್ಲಿಂದ ಧ್ವಜ ಹಾರಿಸಬೇಕು? ಜನರನ್ನು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುವುದು ರಾಷ್ಟ್ರಪ್ರೇಮವಾಗುತ್ತದೆ, ಜನರನ್ನು ನರಕಕ್ಕೆ ತಳ್ಳುವುದು ರಾಷ್ಟ್ರ ದ್ರೋಹವಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆ ಇಲ್ಲದಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದನ್ನೆ ಸಾಧನೆ ಎಂದು ಬಿಜೆಪಿಯವರು ಓಡಾಡುತ್ತಿದ್ದಾರೆ. ಆದರೆ,  371(J)ಯಡಿ ಈ ಜಿಲ್ಲೆಗಳನ್ನು ಯಾಕೆ ತರಲಾಗಿದೆ, ಅತ್ಯಂತ ಹಿಂದುಳಿದ ಈ ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ರವರು ಮುಂತಾದ ಹಿರಿಯ ನಾಯಕರುಗಳು ಮತ್ತು  ಈ ಭಾಗದ ಜನರು ಎಂಥ ಹೋರಾಟ ನಡೆಸಿದ್ದರು ಎಂಬುದರ ತಿಳುವಳಿಕೆಯೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಟೀಕಿಸಿದರು

ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 36,000 ಕ್ಕೂ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ನೀಡಿದ್ದೆವು. ವಿಶೇಷ ಪ್ರಾತಿನಿಧ್ಯ ನೀಡಿ ಮೂಲಭೂತ ಸೌಲಭ್ಯ ಒದಗಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಯಿತು. ಆದರೆ ಇದುವರೆಗೆ ಒಂದೇ ಒಂದು ಉದ್ಯೋಗವನ್ನೂ ಯುವಜನರಿಗೆ ನೀಡಿಲ್ಲ.ಮುಖ್ಯಮಂತ್ರಿಯವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆಯೆ ಹೊರತು ಕಾಮಗಾರಿಗಳು ಅನುಷ್ಠಾನವಾಗಿ ಜನರ ಬಳಕೆಗೆ ದೊರೆತಿದ್ದು ನಾನು ಕಾಣೆ. ಸರ್ಕಾರದ ಅರಾಜಕ ಆಡಳಿತ ಹಾಗೂ ತೀವ್ರಗೊಂಡ ಭ್ರಷ್ಠಾಚಾರದ ಕಾರಣದಿಂದ ಕಾಮಗಾರಿಗಳು ಅನುಷ್ಠಾನವಾಗದೆ ಹಾಗೆ ಉಳಿದಿವೆ. ಬಹಳಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿಲ್ಲವೆಂಬ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದರು.

ಇದನ್ನೂ ಓದಿ: ಚಾಮರಾಜಪೇಟೆ ಮೈದಾನ ವಿವಾದ: ಸರ್ಕಾರವೇ ಧ್ವಜಾರೋಹಣ ಮಾಡಲಿದೆ-ಆರ್.ಅಶೋಕ್

2019 ರ 11 ಕಾಮಗಾರಿಗಳಿಗೆ, 2020 ರ 102 ಕಾಮಗಾರಿಗಳಿಗೆ, 2021 ರ 164 ಕಾಮಗಾರಿಗಳಿಗೆ ಒಟ್ಟು 277 ಕಾಮಗಾರಿಗಳಿಗೆ ಇದುವರೆಗೆ ಅಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿಲ್ಲ. 
ಇವುಗಳಲ್ಲಿ ಬಳ್ಳಾರಿ ಜಿಲ್ಲೆಯ 136, ಕಲ್ಬುರ್ಗಿ ಜಿಲ್ಲೆಯಲ್ಲಿ 70 ಕಾಮಗಾರಿಗಳಿಗೆ ಅನುಮೋದನೆ ಸಿಗದೆ 2-3 ವರ್ಷದಿಂದ ಹಾಗೆ ಇವೆ.ಪರಿಸ್ಥಿತಿ ಹೀಗಿರುವಾಗ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೆ ನೀಡದಿದ್ದರೆ ಅವುಗಳು ಅನುಷ್ಠಾನವಾಗಿ ಸಾರ್ವಜನಿಕರು ಅವುಗಳನ್ನು ಬಳಕೆ ಮಾಡುವುದು ಯಾವಾಗ? ಎಂದು ಅವರು ಪ್ರಶ್ನಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಈ ಮಂಡಳಿಯ ಅಧ್ಯಕ್ಷರಾಗಿ ಸಚಿವರು ಕೆಲಸ ಮಾಡುತ್ತಿದ್ದರು. ಈಗ ಶಾಸಕರೊಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರಿಗೆ ತನ್ನ ಜಿಲ್ಲೆಯ ಅಧಿಕಾರಿಗಳಿಂದಲೆ ಕೆಲಸ ತೆಗೆಯಲು ಸಾಧ್ಯವಾಗುತ್ತಿಲ್ಲ. ವಸ್ತು ಸ್ಥಿತಿ ಹಾಗಿದ್ದಾಗ ಇತರೆ ಜಿಲ್ಲೆಗಳ ಅಧಿಕಾರಿಗಳಿಂದ ಕೆಲಸವನ್ನು ಹೇಗೆ ತೆಗೆದಾರು? ಹಾಗಾಗಿ ಪರಿಸ್ಥಿತಿ ಅರಾಜಕವಾಗಿದೆ.ಬಿಜೆಪಿ ಸರ್ಕಾರಗಳು ಉದ್ಯೋಗವನ್ನೂ ನೀಡುತ್ತಿಲ್ಲ. ಮೂಲಭೂತ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಕಮಿಷನ್ ದಂಧೆ ಮಾತ್ರ ನಿರಾತಂಕವಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: K Sudhakar : '60 ವರ್ಷ ಮೇಲ್ಪಟ್ಟವರು ಅತೀ ಬೇಗ 3ನೇ ಡೋಸ್, ಮಾಸ್ಕ್ ಕಡ್ಡಾಯ' 

ರಾಜ್ಯದಲ್ಲಿಯೆ ಅತ್ಯಂತ ಹಿಂದುಳಿದ ಈ ಜಿಲ್ಲೆಗಳ ಮಕ್ಕಳು, ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಲಸೆ ಸಮಸ್ಯೆ ಇನ್ನೂ ನಿಂತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಿಲ್ಲ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಯಾವ ಉದ್ದೇಶದಿಂದ ಸಂವಿಧಾನದ 371(J) ಅನುಷ್ಠಾನ ಮಾಡಿತ್ತೊ ಅದರ ಮೂಲ ಆಶಯವನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಹಾಳುಗೆಡವಲು ಹೊರಟಿದೆ. 

ಧ್ವಜ ಖರೀದಿಸದಿದ್ದರೆ ಆಹಾರ ಧಾನ್ಯ ಕೊಡುವುದಿಲ್ಲವೆಂದು ಸರ್ಕಾರಗಳು ಹೇಳುತ್ತಿವೆ. ಇದು ಅಮಾನವೀಯ ವರ್ತನೆ ಎಂದು ಬಿಜೆಪಿಯ ವರಣ್ ಗಾಂಧಿ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಬಿಜೆಪಿಯ ವಂಶಸ್ಥರು ಈಗ ರಾಷ್ಟ್ರ ಧ್ವಜಕ್ಕೂ ಅಪಚಾರ ಮಾಡುತ್ತಿದ್ದಾರೆ. ಒಂದು ಕಡೆ ಲಂಚ ನಿರಾತಂಕವಾಗಿ ನಡೆಯುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಹಿಂದು ಹಿಂದಕ್ಕೆ ಹೋಗುತ್ತಿದೆ. ಬಿಜೆಪಿ ಕೇವಲ ಘೋಷಣೆಗಳಲ್ಲಿ ಕಾಲ ತಳ್ಳುತ್ತಿದೆ. ತನ್ನ ಬಕಾಸುರ ಜೇಬುಗಳನ್ನು ಮಾತ್ರ ಕೊಬ್ಬಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ಆದ್ದರಿಂದ ಈ ಕೂಡಲೆ ಬಾಕಿಯಾಗಿರುವ ಎಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಈ ಭಾಗಕ್ಕೆ ಅನುದಾನ ಒದಗಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ವಲಸೆ ತಪ್ಪಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಗುರ್ತಿಸಿ ಅವರಿಗೆ ಸಮರ್ಪಕ ಆಹಾರ, ಔಷಧ ಇತ್ಯಾದಿಗಳನ್ನು ಒದಗಿಸಬೇಕು, ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಯಾವುದೇ ಸಬೂಬು ಹೇಳದೆ ಒದಗಿಸಬೇಕು ಹಾಗೂ ಸಮರ್ಥವಾದವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಆಗ್ರಹಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News